ಗಿಲ್ಗಿಟ್-ಬಾಲ್ಟಿಸ್ತಾನ್ನಲ್ಲಿ ಚುನಾವಣೆ: ಪಾಕ್ ಸು.ಕೋರ್ಟ್ ಆದೇಶಕ್ಕೆ ಭಾರತ ಪ್ರತಿಭಟನೆ
ಹೊಸದಿಲ್ಲಿ, ಮೇ. 3: ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ಅವಕಾಶ ನೀಡುವ ಪಾಕ್ ಸರ್ವೋಚ್ಚ ನ್ಯಾಯಾಲಯದ ವಿರುದ್ಧ ಭಾರತವು ಇಂದು ಪಾಕಿಸ್ತಾನಕ್ಕೆ ತನ್ನ ಪ್ರಬಲ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ. ಗಿಲ್ಗಿಟ್-ಬಾಲ್ಟಿಸ್ತಾನ ಪ್ರಾಂತವನ್ನು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮುಕಾಶ್ಮೀರ ಹಾಗೂ ಲಡಾಕ್ನ ಅವಿಭಾಜ್ಯ ಅಂಗವೆಂದು ಭಾರತವು ಪರಿಣಿಸಿದೆ.
ಗಿಲ್ಗಕಿಟ್-ಬಾಲ್ಟಿಸ್ತಾನ ಸೇರಿದಂತೆ ಇಸ್ಲಾಮಾಬಾದ್ ಅಕ್ರಮವಾಗಿ ವಶಪಡಿಸಿ ಕೊಂಡಿರುವ ಎಲ್ಲಾ ಪ್ರದೇಶಗಳನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಭಾರತವು ಪಾಕಿಸ್ತಾನದ ರಾಜತಾಂತ್ರಿಕರಿಗೆ ನೀಡಿದ ನೋಟಿಸ್ನಲ್ಲಿ ತಿಳಿಸಿದೆ.
‘ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನದ ಪ್ರಾಂತಗಳು ಸೇರಿದಂತೆ ಸಮಗ್ರ ಜಮ್ಮುಕಾಶ್ಮೀರ ಹಾಗೂ ಲಡಾಕ್ ಕೇಂದ್ರಾಡಳಿತ ಪ್ರದೇಶಗಳು ಸಂಪೂರ್ಣ ಕಾನೂನುಬದ್ಧವಾಗಿ ಭಾರತದ ಅವಿಭಾಜ್ಯ ಅಂಗವಾಗಿದೆ’’ ಎಂದು ಭಾರತದ ವಿದೇಶಾಂಗ ಇಲಾಖೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಈ ಪ್ರಾಂತವನ್ನು ಆಕ್ರಮಿಸಿಕೊಳ್ಳುವುದಕ್ಕೆ ಪಾಕಿಸ್ತಾನಕ್ಕಾಗಲಿ ಅಥವಾ ಅದರ ನ್ಯಾಯಾಂಗಕ್ಕಾಗಲಿ ಯಾವುದೇ ಕಾನೂನು ಮಾನ್ಯತೆ ಇರುವುದಿಲ್ಲವೆಂದು ಅದು ಹೇಳಿದೆ.
ಭಾರತದ ಪ್ರದೇಶವಾದ ಜಮ್ಮಕಾಶ್ಮೀರದ ಪಾಕ್ ಆಕ್ರಮಿತ ಪ್ರದೇಶಗಳ ಮೇಲೆ ಭೌತಿಕ ಬದಲಾವಣೆಗಳನ್ನು ತರಲು ಪಾಕಿಸ್ತಾನವು ನಡೆಸುವ ಪ್ರಯತ್ನಗಳನ್ನು ಭಾರತವು ಸಂಪೂರ್ಣವಾಗಿ ತಿರಸ್ಕರಿಸುತ್ತದೆ. ಅದರ ಬದಲಿಗೆ ಪಾಕಿಸ್ತಾನವು ತಕ್ಷಣವೇ ತಾನು ಆಕ್ರಮವಾಗಿ ಸ್ವಾಧೀನಪಡಿಸಿಕೊಂಡಿರುವ ಎಲ್ಲಾ ಪ್ರದೇಶಗಳಿಂದ ತೆರವುಗೊಳ್ಳಬೇಕೆಂದು ಭಾರತೀಯ ವಿದೇಶಾಂಗ ಇಲಾಖೆ ತಿಳಿಸಿದೆ.