ಬೂದಿ ಕುಂಬಳ ಬೆಳೆದ ರೈತ ಮಹಿಳೆಯ ಸಂಕಷ್ಟ: ಖರೀದಿಗೆ ಮೊರೆ

ಮಂಗಳೂರು : ಬ್ಯಾಂಕ್ನಿಂದ ಸಾಲ ಪಡೆದು ದೊಡ್ಡ ಪ್ರಮಾಣದಲ್ಲಿ ಬೂದಿ ಗುಂಬಳ ಬೆಳೆದ ರೈತ ಮಹಿಳೆಯೊಬ್ಬರು ತಾನು ಬೆಳೆದ ತರಕಾರಿಯ ಮಾರಾಟಕ್ಕೆ ಮೊರೆ ಇಟ್ಟಿದ್ದಾರೆ.
ಮಂಗಳೂರು ತಾಲೂಕಿನ ಬಳ್ಕುಂಜೆ ಗ್ರಾಮದ ತೆರೆಸಾ ಡಿಸೋಜ ಸಂಕಷ್ಟಕ್ಕೆ ಸಿಲುಕಿರುವ ಮಹಿಳೆ. ಇವರು ತನ್ನ ಜಮೀನಿನಲ್ಲಿ ಮೂರು ಟನ್ನಷ್ಟು ಬೂದು ಗುಂಬಳವನ್ನು ಬೆಳೆದಿದ್ದಾರೆ. ತೆರೆಸಾ ಕುಟುಂಬ ಹಗಲು ರಾತ್ರಿ ದುಡಿದ ಶ್ರಮದಿಂದ ಈ ಫಸಲು ಬಂದಿದ್ದು, ಬೆಳೆಯನ್ನು ಬೆಳೆಯಲು ಬ್ಯಾಂಕ್ ನಿಂದ ಸಾಲವನ್ನೂ ಪಡೆಯಲಾಗಿತ್ತು.
ಕಳೆದ ಒಂದೂವರೆ ತಿಂಗಳಿನಿಂದ ಲಾಕ್ಡೌನ್ ಪರಿಸ್ಥಿತಿ ಇದ್ದು, ಬೂದು ಗುಂಬಳದ ಮಾರಾಟಕ್ಕೆ ತೊಂದರೆಯಾಗಿದೆ. ಈ ಬೆಳೆಯನ್ನು ಖರೀದಿ ಮಾಡಿ ಸಂಕಷ್ಟದಲ್ಲಿರುವ ತಮ್ಮ ಪರಿವಾರವನ್ನು ಪಾರು ಮಾಡುವಂತೆ ರೈತ ಮಹಿಳೆ ಮೊರೆ ಇಟ್ಟಿದ್ದಾರೆ.
ಮುಕ್ತ ಮಾರುಕಟ್ಟೆಯಲ್ಲಿ ಬೂದಿಗುಂಬಳಕ್ಕೆ ಕೆ.ಜಿ.ಯೊಂದಕ್ಕೆ 30 ರೂ. ಇದ್ದು, ತೆರೆಸಾ ತನ್ನ ಉತ್ಪನ್ನವನ್ನು ಕೆ.ಜಿ.ಗೆ 10 ರೂ. ಮಾರಾಟ ಮಾಡಲು ಸಿದ್ಧರಿದ್ದಾರೆ. ನೇರ ಖರೀದಿ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ರೈತ ಮಹಿಳೆ ಮೊರೆ ಇಟ್ಟಿದ್ದಾರೆ. ರೈತ ಸಂಘವೂ ಈ ಮಹಿಳೆಯ ನೆರವಿಗೆ ಧಾವಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಕ್ಷಣ ಮಧ್ಯಪ್ರವೇಶ ಮಾಡುವಂತೆ ಆಗ್ರಹಿಸಿದೆ.
ಸರ್ಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಉತ್ತಮ ದರಕ್ಕೆ ಬೂದಿಗುಂಬಳವನ್ನು ಖರೀದಿಸುವಂತೆ ರೈತ ಸಂಘದ ನಾಯಕರು ಒತ್ತಾಯಿಸಿದ್ದಾರೆ.







