ಬಾಗಲಕೋಟೆ: ಮದ್ಯ ಖರೀದಿಸಲು ಹಣ ಕೊಡದಿದ್ದಕ್ಕೆ ಪತ್ನಿಯನ್ನು ಕೊಂದ ಪತಿ
ಸಾಂದರ್ಭಿಕ ಚಿತ್ರ
ಬಾಗಲಕೋಟೆ, ಮೇ 6: ಮದ್ಯ ಮಾರಾಟಕ್ಕೆ ಸರಕಾರ ಅನುಮತಿ ನೀಡುತ್ತಿದ್ದಂತೆ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಮದ್ಯ ವ್ಯಸನಿಯೊಬ್ಬ ಮದ್ಯ ಕೊಳ್ಳಲು ಹಣ ಕೊಡದಿದ್ದಕ್ಕೆ ಪತ್ನಿಯನ್ನು ಕೊಲೆ ಮಾಡಿದ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಜೋಷಿ ಗಲ್ಲಿಯಲ್ಲಿ ಈ ಘಟನೆ ನಡೆದಿದ್ದು, 32 ವರ್ಷದ ಶಾರದಾ ಚೌಹಾನ್ ಕೊಲೆಯಾದ ಮಹಿಳೆಯಾಗಿದ್ದಾರೆ. ಚಂದಪ್ಪ ಚೌಹಾನ್ ಕೊಲೆ ಮಾಡಿದ ಆರೋಪಿ ಪತಿ.
ಕುಡಿಯಲು ದುಡ್ಡು ಕೊಡಲಿಲ್ಲ ಎಂದು ಪತಿ ಚಂದಪ್ಪ ತನ್ನ ಬೈಕ್ನಿಂದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪತ್ನಿಗೆ ಢಿಕ್ಕಿ ಹೊಡೆಸಿದ್ದಾನೆ. ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ಮಹಿಳೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮದ್ಯದಂಗಡಿ ತೆರೆದಿದ್ದರಿಂದ ದುಡ್ಡು ಕೊಡುವಂತೆ ಪತ್ನಿಯನ್ನು ಕೇಳಿದ್ದ. ಆದರೆ ಪತ್ನಿಯು ಹಣ ಕೊಡಲು ನಿರಾಕರಿಸಿದ್ದಳು. ಇದರಿಂದ, ಬೈಕ್ನಿಂದ ಢಿಕ್ಕಿ ಹೊಡೆಸಿ ಕೊಲೆ ಮಾಡಿದ್ದಾನೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಬಗ್ಗೆ ಮೃತ ಮಹಿಳೆಯ ಕುಟುಂಬಸ್ಥರು ಇಳಕಲ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಟ್ಟಡ ಕೆಲಸ ಮಾಡುತ್ತಿದ್ದ ಆರೋಪಿ ಚಂದಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಇಳಕಲ್ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.