ಆಂಧ್ರದ ರಾಸಾಯನಿಕ ಸ್ಥಾವರದಲ್ಲಿ ವಿಷಕಾರಿ ಅನಿಲ ಸೋರಿಕೆ: 11 ಮಂದಿ ಮೃತ್ಯು,ಸಾವಿರಾರು ಜನ ಅಸ್ವಸ್ಥ
ಹೊಸದಿಲ್ಲಿ,ಮೇ 7: ಆಂಧ್ರಪ್ರದೇಶದ ಬಂದರು ನಗರ ವಿಶಾಖಪಟ್ಟಣ ಸಮೀಪದ ಆರ್.ಕೆ.ವೆಂಕಟಾಪುರಮ್ನ ರಾಸಾಯನಿಕ ಕಾರ್ಖಾನೆಯಲ್ಲಿ ಗುರುವಾರ ಬೆಳಗಿನ ಜಾವ ವಿಷಾನಿಲ ಸೋರಿಕೆಯುಂಟಾಗಿ ಒಂದು ಮಗು ಸೇರಿದಂತೆ ಕನಿಷ್ಠ 11 ಜನರು ಮೃತಪಟ್ಟಿದ್ದಾರೆ.
ಸಾವಿರಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿದ್ದು,ಈ ಪೈಕಿ 25 ಜನರ ಸ್ಥಿತಿ ಗಂಭೀರವಾಗಿದೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (ಎನ್ಡಿಆರ್ಎಫ್)ಯು ಈ ದುರ್ಘಟನೆಯನ್ನು ರಾಸಾಯನಿಕ ದುರಂತ ಎಂದು ಘೋಷಿಸಿದೆ.
ಕೋವಿಡ್-19 ಲಾಕ್ಡೌನ್ನಿಂದಾಗಿ 40 ದಿನಗಳಿಗೂ ಅಧಿಕ ಸಮಯದಿಂದ ಮುಚ್ಚಲ್ಪಟ್ಟಿದ್ದ ಎಲ್ಜಿ ಪಾಲಿಮರ್ಸ್ ಇಂಡಿಯಾ ಕಾರ್ಖಾನೆಯು ಯಾವುದೇ ಮುನ್ನೆಚ್ಚರಿಕೆ ಕ್ರಮಗಳಿಲ್ಲದೆ ಬುಧವಾರ ಮಧ್ಯರಾತ್ರಿಯ ಬಳಿಕ ಪುನಃ ಕಾರ್ಯಾರಂಭಗೊಂಡಿತ್ತು. ನಸುಕಿನ ಮೂರು ಗಂಟೆಗೆ ತಲಾ 5,000 ಟನ್ ಸಾಮರ್ಥ್ಯದ ಎರಡು ಟ್ಯಾಂಕ್ಗಳಿಂದ ವಿಷಯುಕ್ತ ಸ್ಟೈರಿನ್ ಅನಿಲ ಸೋರಿಕೆಯಾಗಿತ್ತು. ಬೆಳಕು ಹರಿದಾಗ ಪರಿಸರದ ಓಣಿಗಳಲ್ಲಿ,ರಸ್ತೆಬದಿಗಳಲ್ಲಿ ಮತ್ತು ತಮ್ಮ ಮನೆಗಳ ಬಳಿ ನೂರಾರು ಜನರು ಪ್ರಜ್ಞಾಶೂನ್ಯರಾಗಿ ಬಿದ್ದುಕೊಂಡಿದ್ದು ಕಂಡುಬಂದಿತ್ತು.
60 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಹರಡಿಕೊಂಡಿರುವ ಕಾರ್ಖಾನೆಯ ಸುತ್ತಮುತ್ತಲಿನ ಕನಿಷ್ಠ ಮೂರು ಗ್ರಾಮಗಳಿಂದ ಸುಮಾರು 1,500 ಜನರನ್ನು ತೆರವುಗೊಳಿಸಲಾಗಿದ್ದು,ಅಧಿಕಾರಿಗಳು ಮನೆಗಳ ಬಾಗಿಲುಗಳನ್ನು ಪಡೆದು ಒಳಗೆ ಪ್ರಜ್ಞಾಹೀನರಾಗಿ ಬಿದ್ದಿದ್ದ ಜನರನ್ನು ಆಸ್ಪತ್ರೆಗೆ ಸಾಗಿಸಿದರು.
ದುರಂತದ ಘೋರವನ್ನು ಬಿಂಬಿಸುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರಸ್ತೆಗಳಲ್ಲಿ ಜನರು ಅಸ್ವಸ್ಥರಾಗಿ ಬಿದ್ದಿರುವುದನ್ನು ಈ ವೀಡಿಯೊಗಳು ತೋರಿಸುತ್ತಿವೆ. ಇಬ್ಬರು ವ್ಯಕ್ತಿಗಳು ವಿಷಾನಿಲ ಸೇವನೆಯಿಂದ ತಲೆ ಸುತ್ತಿ ಸಮೀಪದ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದರೆ, ಓರ್ವ ಮಹಿಳೆ ತಾನು ವಾಸವಿದ್ದ ಕಟ್ಟಡದ ಎರಡನೇ ಮಹಡಿಯಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾಳೆ. ನಿಯಂತ್ರಣ ಕಳೆದುಕೊಂಡ ದ್ವಿಚಕ್ರ ವಾಹನವೊಂದು ರಸ್ತೆ ಪಕ್ಕದ ಹೊಂಡಕ್ಕೆ ಬಿದ್ದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮೃತರಾಗಿದ್ದಾರೆ.
ಜನರು ನಿಂತಲ್ಲಿಯೇ ಕುಸಿದು ಬೀಳುತ್ತಿರುವ ದೃಶ್ಯಗಳು ವೀಡಿಯೊದಲ್ಲಿ ದಾಖಲಾಗಿವೆ.
ಕಾರ್ಖಾನೆಯ ಸಮೀಪದ ನಿವಾಸಿಗಳಲ್ಲಿ ಕಣ್ಣುಗಳು ಮತ್ತು ಚರ್ಮದಲ್ಲಿ ಉರಿ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದರು. ಸುದೀರ್ಘ ಸಮಯ ಸ್ಟೈರಿನ್ ಉಸಿರಾಡಿಸಿದರೆ ಅದು ನರಗಳ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಮೂತ್ರಪಿಂಡಗಳ ಹಾನಿಗೂ ಕಾರಣವಾಗುತ್ತದೆ. ವಿಷಾನಿಲ ಸೋರಿಕೆಯಿಂದ ಸಾವಿರಕ್ಕೂ ಅಧಿಕ ಜನರು ಬಾಧಿತರಾಗಿದ್ದಾರೆ ಎಂದು ಎನ್ಡಿಆರ್ಎಫ್ ಮುಖ್ಯಸ್ಥ ಎಸ್.ಎನ್.ಪ್ರಧಾನ ತಿಳಿಸಿದರು.
ತಮ್ಮ ಮನೆಗಳಲ್ಲಿಯೇ ಇರುವಂತೆ ಪರಿಸರದ ಜನರಿಗೆ ಎಚ್ಚರಿಕೆ ನೀಡಿರುವ ಮುನ್ಸಿಪಲ್ ಕಚೇರಿಯು,ಒದ್ದೆ ಮಾಸ್ಕ್ಗಳನ್ನು ಧರಿಸುವಂತೆ ಅಥವಾ ಒದ್ದೆ ಟವೆಲ್ಗಳಿಂದ ಮುಖ ಮುಚ್ಚಿಕೊಳ್ಳುವಂತೆ ಸೂಚಿಸಿದೆ.
ಕಾರ್ಖಾನೆಯು ಫೈಬರ್ಗ್ಲಾಸ್,ರಬ್ಬರ್,ಲ್ಯಾಟೆಕ್ಸ್,ಆಟಿಕೆಗಳು ಮತ್ತು ಇತರ ಉತ್ಪನ್ನಗಳಲ್ಲಿ ಬಳಸಲಾಗುವ ಪಾಲಿಸ್ಟೈರಿನ್ ಅನ್ನು ಉತ್ಪಾದಿಸುತ್ತದೆ. 1961ರಲ್ಲಿ ಹಿಂದುಸ್ಥಾನ ಪಾಲಿಮರ್ಸ್ ಹೆಸರಿನಲ್ಲಿ ಆರಂಭಗೊಂಡಿದ್ದ ಕಾರ್ಖಾನೆಯನ್ನು 1997ರಲ್ಲಿ ದಕ್ಷಿಣ ಕೊರಿಯಾದ ಎಲ್ಜಿ ಕೆಮಿಕಲ್ಸ್ ಲಿ.ಖರೀದಿಸಿ ಎಲ್ಜಿ ಪಾಲಿಮರ್ಸ್ ಇಂಡಿಯಾ ಎಂದು ಮರುನಾಮಕರಣ ಮಾಡಿತ್ತು.
ಅನಿಲ ಸೋರಿಕೆ ಸ್ಥಿತಿಯು ನಿಯಂತ್ರಣದಲ್ಲಿದೆ ಮತ್ತು ಸಂತ್ರಸ್ತರಿಗೆ ತ್ವರಿತ ಚಿಕಿತ್ಸೆಯನ್ನು ಒದಗಿಸಲು ಮಾರ್ಗೋಪಾಯ ಗಳನ್ನು ಕಂಡುಕೊಳ್ಳುತ್ತಿದ್ದೇವೆ. ಹಾನಿಯ ವ್ಯಾಪ್ತಿ,ಅನಿಲ ಸೋರಿಕೆಗೆ ನಿಖರ ಕಾರಣ ಮತ್ತು ಸಾವುಗಳ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಎಲ್ಜಿ ಕೆಮಿಕಲ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಈ ದುರ್ಘಟನೆಯು ಸುಮಾರು 3,500 ಜನರನ್ನು ಬಲಿ ತೆಗೆದುಕೊಂಡಿದ್ದ 1984ರ ಭೋಪಾಲ ಅನಿಲ ದುರಂತವನ್ನು ನೆನಪಿಸಿದೆ.
ಕೇಂದ್ರ, ಆಂಧ್ರ ಸರಕಾರಕ್ಕೆ ಎನ್ಎಚ್ಆರ್ಸಿ ನೋಟಿಸ್
ಅನಿಲ ಸೋರಿಕೆಯಿಂದಾಗಿ ಸಂಭವಿಸಿರುವ ಸಾವುಗಳು ಮತ್ತು ಜನರ ಸಂಕಷ್ಟಗಳ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ಸಿ)ವು ಗುರುವಾರ ಕೇಂದ್ರ ಮತ್ತು ಆಂಧ್ರಪ್ರದೇಶ ಸರಕಾರಗಳಿಗೆ ನೋಟಿಸ್ಗಳನ್ನು ಹೊರಡಿಸಿದೆ.
ಬಲಿಪಶುಗಳ ಬದುಕುವ ಹಕ್ಕನ್ನು ಸಾರಾಸಗಟಾಗಿ ಉಲ್ಲಂಘಿಸಲಾಗಿದೆ. ಕೊರೋನ ವೈರಸ್ ಹರಡುವಿಕೆಯಿಂದಾಗಿ ದೇಶಾದ್ಯಂತ ಮಾನವ ಜೀವಗಳು ಅಪಾಯಕ್ಕೆ ಸಿಲುಕಿರುವ ಮತ್ತು ಪ್ರತಿಯೊಬ್ಬರೂ ಅನಿವಾರ್ಯವಾಗಿ ಮನೆಗಳಲ್ಲಿ ಇರಬೇಕಾಗಿರುವ ಈ ಸಮಯದಲ್ಲಿ ಈ ಭೀಕರ ದುರಂತವು ಬರಸಿಡಿಲಿನಂತೆ ಎರಗಿದೆ ಎಂದು ತಿಳಿಸಿರುವ ಆಯೋಗವು,ನಾಲ್ಕು ವಾರಗಳಲ್ಲಿ ವಿವರವಾದ ವರದಿಗಳೊಂದಿಗೆ ನೋಟಿಸಿಗೆ ಉತ್ತರಿಸುವಂತೆ ಉಭಯ ಸರಕಾರಗಳಿಗೆ ನಿರ್ದೇಶ ನೀಡಿದೆ.
ತನಿಖೆಗೆ ಆಂಧ್ರಪ್ರದೇಶ ಸರಕಾರದ ಆದೇಶ
ಆಂಧ್ರಪ್ರದೇಶ ಸರಕಾರವು ವಿಷಾನಿಲ ಸೋರಿಕೆ ಘಟನೆ ಕುರಿತು ತನಿಖೆಗೆ ಆದೇಶಿಸಿದೆ.
ಪರಿಸ್ಥಿತಿಯನ್ನು ಅವಲೋಕಿಸಲು ಉನ್ನತ ಮಟ್ಟದ ಸಭೆಯನ್ನು ನಡೆಸಿರುವ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ ರೆಡ್ಡಿ ಅವರು ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ ಎಂದು ಆಂಧ್ರಪ್ರದೇಶ ಡಿಜಿಪಿ ಡಿ.ಗೌತಮ ಸವಾಂಗ್ ತಿಳಿಸಿದರು. ಅನಿಲ ಸೋರಿಕೆ ನಿಂತಿದ್ದು,ಪರಿಸ್ಥಿತಿಯು ಸ್ಥಿರವಾಗಿದೆ ಮತ್ತು ನಿಯಂತ್ರಣದಲ್ಲಿದೆ. ಕನಿಷ್ಠ 246 ಜನರು ವಿಶಾಖಪಟ್ಟಣದ ಕಿಂಗ್ ಜಾರ್ಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,20 ಜನರಿಗೆ ವೆಂಟಿಲೇಟರ್ ಅಳವಡಿಸಲಾಗಿದೆ ಎಂದರು.
ಅನಿಲ ಸೋರಿಕೆ ಮತ್ತು ಅದನ್ನು ತಡೆಯಲು ಕಾರ್ಖಾನೆಯಲ್ಲಿನ ಪ್ರತಿಬಂಧಕ ವ್ಯವಸ್ಥೆಯ ವೈಫಲ್ಯದ ಬಗ್ಗೆ ತನಿಖೆ ನಡೆಸಲಾಗುವುದು. ಸ್ಟೈರಿನ್ ವಿಷಾನಿಲವಲ್ಲ,ಆದರೆ ಅದನ್ನು ಅತಿಯಾಗಿ ಉಸಿರಾಡಿದರೆ ಮಾತ್ರ ಮಾರಣಾಂತಿಕವಾಗಬಲ್ಲದು ಎಂದು ಸವಾಂಗ್ ತಿಳಿಸಿದರು.
ಲಾಕ್ಡೌನ್ನಿಂದಾಗಿ ನಿರ್ಲಕ್ಷ
ಲಾಕ್ಡೌನ್ನಿಂದಾಗಿ ಸ್ಟೈರಿನ್ ತುಂಬಿದ್ದ ಎರಡು ಟ್ಯಾಂಕ್ಗಳನ್ನು ನೋಡಿಕೊಳ್ಳುವವರು ಇರಲಿಲ್ಲ. ಇದರಿಂದಾಗಿ ರಾಸಾಯನಿಕ ಪ್ರಕ್ರಿಯೆ ಉಂಟಾಗಿ ಟ್ಯಾಂಕ್ಗಳು ಬಿಸಿಯಾಗಿದ್ದವು ಮತ್ತು ಇದು ಅನಿಲ ಸೋರಿಕೆಗೆ ಕಾರಣವಾಗಿತ್ತು ಎಂದು ಎಸಿಪಿ ಸ್ವರೂಪ ರಾಣಿ ತಿಳಿಸಿದರೆ,ಲಾಕ್ಡೌನ್ನಿಂದಾಗಿ ಕಾರ್ಖಾನೆಯನ್ನು ಮುಚ್ಚಲಾಗಿತ್ತಾದರೂ ನಿರ್ವಹಣಾ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಎಲ್ಜಿ ಕೆಮಿಕಲ್ಸ್ನ ವಕ್ತಾರರು ಸಿಯೋಲ್ನಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.
ಪ್ರಧಾನಿ ಹೇಳಿಕೆ
ದುರ್ಘಟನೆ ಸಂಭವಿಸಿರುವ ಸ್ಥಳದಲ್ಲಿರುವ ಗೃಹ ಸಚಿವಾಲಯದ ಮತ್ತು ಎನ್ಡಿಆರ್ಎಫ್ ಅಧಿಕಾರಿಗಳೊಂದಿಗೆ ತಾನು ಮಾತನಾಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.