ಉಡುಪಿ: ಹೊರರಾಜ್ಯದ ಮೀನುಗಾರಿಕಾ ಕಾರ್ಮಿಕರಿಗೆ ಊರಿಗೆ ತೆರಳುವ ಭಾಗ್ಯ
ಜಿಲ್ಲಿಯ ಬಂದರುಗಳಲ್ಲಿ 692 ಕಾರ್ಮಿಕರು: ಜಿಲ್ಲಾಡಳಿತದಿಂದ ಪಾಸ್ ವ್ಯವಸ್ಥೆ

ಉಡುಪಿ, ಮೇ 7: ಲಾಕ್ಡೌನ್ನಿಂದಾಗಿ ಕಳೆದ 45 ದಿನಗಳಿಂದ ಜಿಲ್ಲೆಯ ಮೂರು ಬಂದರುಗಳಲ್ಲಿ ಬಾಕಿಯಾಗಿ ಉಳಿದುಕೊಂಡಿರುವ ಮೀನುಗಾರಿಕಾ ಬೋಟುಗಳಲ್ಲಿ ದುಡಿಯತ್ತಿರುವ ಹೊರರಾಜ್ಯಗಳ ನೂರಾರು ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸಿಕೊಡಲು ಉಡುಪಿ ಜಿಲ್ಲಾಡಳಿತ ಸಿದ್ಧತೆಗಳನ್ನು ನಡೆಸುತ್ತಿದೆ.
ಮಲ್ಪೆ ಬಂದರಿನಲ್ಲಿ ಆಂದ್ರ ಪ್ರದೇಶದ 194, ಒರಿಸ್ಸಾ-183, ಪಶ್ಚಿಮ ಬಂಗಾಳ-37, ಛತ್ತೀಸ್ಗಡ್-107, ಉತ್ತರಪ್ರದೇಶ- 5, ಜಾರ್ಖಂಡ್-77, ಅಸ್ಸಾಂ- 4, ತಮಿಳುನಾಡು- 28, ಮಹಾರಾಷ್ಟ್ರ- 4 ಸೇರಿದಂತೆ ಒಟ್ಟು 639, ಕೋಡಿಬೆಂಗ್ರೆ ಬಂದರಿನಲ್ಲಿ ಒರಿಸ್ಸಾ- 4, ಛತ್ತೀಸ್ಗಡ್- 7, ಉತ್ತರ ಪ್ರದೇಶ -4, ಜಾರ್ಖಂಡ್-10 ಸಹಿತ ಒಟ್ಟು 25 ಮತ್ತು ಗಂಗೊಳ್ಳಿ ಬಂದರಿನಲ್ಲಿ ಒರಿಸ್ಸಾ-26, ಪಶ್ಚಿಮ ಬಂಗಾಳ-2 ಸೇರಿದಂತೆ ಒಟ್ಟು 28 ಮಂದಿ ಕಾರ್ಮಿಕರು ಇದ್ದಾರೆ. ಹೀಗೆ ಜಿಲ್ಲೆಯ ಮೂರು ಬಂದರುಗಳಲ್ಲಿ 9 ರಾಜ್ಯಗಳ ಒಟ್ಟು 692 ಮಂದಿ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಲು ಹಾತೊರೆಯುತ್ತಿದ್ದಾರೆ. ಲಾಕ್ಡೌನ್ ಆರಂಭವಾಗಿ ಮೀನುಗಾರಿಕೆ ಸ್ಥಗಿತಗೊಂಡ ಮಾ.25ರಿಂದ ಇವರೆಲ್ಲ ತಮ್ಮ ಊರುಗಳಿಗೆ ಹೋಗಲು ರೈಲು ಹಾಗೂ ಬಸ್ಸಿನ ವ್ಯವಸ್ಥೆಗಳಿಲ್ಲದೆ ಬಂದರುಗಳಲ್ಲಿಯೇ ಉಳಿದುಕೊಂಡಿದ್ದರು. ಜಿಲ್ಲಾಡಳಿತದ ಸೂಚನೆಯಂತೆ ಇವರಿಗೆ ಬಂದರಿನಲ್ಲಿ ವಸತಿ ವ್ಯವಸ್ಥೆ ಮತ್ತು ಮೀನುಗಾರರ ಸಂಘದಿಂದ ಊಟ ನೀಡಲಾಗುತ್ತಿತ್ತು. ಕೆಲವು ದಿನಗಳಿಂದ ಸಂಘವು ಇವರಿಗೆ ಊಟ ನೀಡುವು ದನ್ನು ಸ್ಥಗಿತಗೊಳಿಸಿರುವುದರಿಂದ ಜಿಲ್ಲಾಡಳಿತವೇ ಇವರಿಗೆ ಊಟ- ಉಹಾರದ ವ್ಯವಸ್ಥೆಯನ್ನು ಮಾಡಿದೆ.
ನಾಯ್ಡು ಮನವಿಗೆ ಸಿಎಂ ಸ್ಪಂದನೆ
ಕಾರ್ಮಿಕರಿಗೆ ಜಿಲ್ಲೆಯ ಮೂರು ಮೀನುಗಾರಿಕಾ ಬಂದರುಗಳಲ್ಲಿ ಉಳಿದು ಕೊಳ್ಳಲು ಎಲ್ಲ ವ್ಯವಸ್ಥೆಗಳನ್ನು ಮಾಡಿದರೂ ಇವರೆಲ್ಲ ತಮ್ಮ ತಮ್ಮ ಊರುಗಳಿಗೆ ತೆರಳುವ ಬೇಡಿಕೆ ಮುಂದಿಟ್ಟಿದ್ದಾರೆ.
ಅದೇ ರೀತಿ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೂಡ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರೊಂದಿಗೆ ಮಾತ ನಾಡಿ, ಆಂದ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಕಾರ್ಮಿಕರನ್ನು ಕಳುಹಿಸಿ ಕೊಡುವಂತೆ ತಿಳಿಸಿದ್ದರು. ಅದಕ್ಕೆ ಯಡಿಯೂರಪ್ಪ ಪೂರಕವಾಗಿ ಸ್ಪಂದಿಸಿ ಕೂಡಲೇ ಸಹಾಯ ಮಾಡುವ ಭರವಸೆ ನೀಡಿದ್ದಾರೆಂದು ಚಂದ್ರಬಾಬು ನಾಯ್ಡು ಮೇ 6ರಂದು ಟ್ವೀಟ್ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಉಡುಪಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದು, ಅದರಂತೆ ಜಿಲ್ಲಾಡಳಿತ ಆಂಧ್ರ ಸೇರಿದಂತೆ ಜಿಲ್ಲೆಯ ಮೀನುಗಾರಿಕಾ ಬೋಟುಗಳಲ್ಲಿ ದುಡಿಯುವ ಎಲ್ಲ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸಲು ತಯಾರಿ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಮೀನುಗಾರಿಕಾ ಇಲಾಖೆಯು ಈ ಕಾರ್ಮಿಕರಿಗೆ ಸೇವಾಸಿಂಧು ವೆಬ್ಸೈಟ್ ಮೂಲಕ ಆನ್ ಲೈನ್ನಲ್ಲಿ ನೋಂದಣಿ ಮಾಡಿ ಪಾಸ್ ಒದಗಿಸುವ ಕೆಲಸ ಮಾಡುತ್ತಿದೆ.
ಇವರಲ್ಲಿ ಮೊದಲ ಹಂತದಲ್ಲಿ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಕಾರ್ಮಿಕರನ್ನು ಕೆಎಸ್ಆರ್ಟಿಸಿ ಬಸ್ಗಳಲ್ಲಿ ಕಳುಹಿಸಿಕೊಡಲು ಇಲಾಖೆ ಕ್ರಮ ತೆಗೆದುಕೊಂಡಿದೆ. ಮುಂದೆ ದೂರದ ರಾಜ್ಯಗಳ ಕಾರ್ಮಿಕರನ್ನು ರೈಲಿನ ಮೂಲಕ ಕಳುಹಿಸಲು ಇಲಾಖೆ ಚಿಂತನೆ ನಡೆಸುತ್ತಿದೆ.
ಜಿಲ್ಲಾಡಳಿತದ ಸೂಚನೆಯಂತೆ ಬೋಟುಗಳಲ್ಲಿ ದುಡಿಯುವ ಹೊರರಾಜ್ಯದ ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳುಹಿಸುವ ಪ್ರಕ್ರಿಯೆ ಆರಂಭ ಗೊಂಡಿದೆ. ಮೊದಲು ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡಿನ ಕಾರ್ಮಿಕ ರನ್ನು ಕಳುಹಿಸಿ ಕೊಡಲಾಗುವುದು. ಅದಕ್ಕಾಗಿ ಅವರಿಗೆ ಸೇವಾ ಸಿಂಧು ಮೂಲಕ ಪಾಸ್ ಒದಗಿಸುವ ಕಾರ್ಯ ಮಾಡಲಾಗುತ್ತಿದೆ. ಈಗಾಗಲೇ ಸುಮಾರು 202 ಪಾಸ್ಗಳು ಮಂಜೂರಾಗಿವೆ. ಇವರನ್ನು ಕೆಎಸ್ಆರ್ಟಿಸಿ ಬಸ್ಗಳಲ್ಲಿ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.
-ಗಣೇಶ್, ಉಪನಿರ್ದೇಶಕರು, ಮೀನುಗಾರಿಕೆ ಇಲಾಖೆ, ಉಡುಪಿ.
ಶುಕ್ರವಾರ 9 ಬಸ್ಗಳಲ್ಲಿ ಪ್ರಯಾಣ
ಜಿಲ್ಲೆಯ 3 ಬಂದರುಗಳಲ್ಲಿರುವ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಮೀನುಗಾರಿಕಾ ಬೋಟುಗಳ ಕಾರ್ಮಿಕರನ್ನು ಜಿಲ್ಲಾಡಳಿತದ ಸೂಚನೆಯಂತೆ ಮೇ 8ರಂದು ಒಟ್ಟು 9 ಕೆಎಸ್ಆರ್ಟಿಸಿ ಬಸ್ಗಳಲ್ಲಿ ಕರೆದು ಕೊಂಡು ಹೋಗಲಾಗುವುದು. ಒಂದೊಂದು ಬಸ್ಗಳಲ್ಲಿ 30 ಮಂದಿ ಪ್ರಯಾಣ ಮಾಡಲಿದ್ದಾರೆ ಎಂದು ಉಡುಪಿ ಕೆಎಸ್ಆರ್ಟಿಸಿ ಡಿಪೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.







