ಕಾರ್ಮಿಕರನ್ನಾಗಲಿ, ರೈಲನ್ನಾಗಲಿ ತಡೆಯುವ ಪ್ರಶ್ನೆಯೇ ಇಲ್ಲ: ಗೃಹ ಸಚಿವ ಬೊಮ್ಮಾಯಿ
"ಲಾಕ್ಡೌನ್ 3 ಯಶಸ್ವಿ ಆಗದಿದ್ದರೆ ಮುಂದೆ ಕಠಿಣ ಕ್ರಮ"

ಬೆಂಗಳೂರು, ಮೇ 7: ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ತೆರಳುವುದಕ್ಕೆ ಯಾರೂ ಅಡ್ಡಿ ಮಾಡಿಲ್ಲ. ರೈಲು ನಿಲ್ಲಿಸಲಿಲ್ಲ. ಈ ಸಂಬಂಧ ಕಾಂಗ್ರೆಸ್ನವರು ಅಪಪ್ರಚಾರ ಮಾಡುತ್ತಿದ್ದಾರೆ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ನಿಲ್ಲಿಸಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಹಾರ, ಒಡಿಶಾ, ಪಶ್ಚಿಮ ಬಂಗಾಳದವರು ಕಾರ್ಮಿಕರನ್ನು ಕಳುಹಿಸಬೇಡಿ ಎನ್ನುತ್ತಿದ್ದಾರೆ. ಅವರು ಒಪ್ಪಿಗೆ ಕೊಟ್ಟರೆ ಮಾತ್ರ ರೈಲಿನಲ್ಲಿ ಕಳುಹಿಸಬಹುದು. ಇಲ್ಲವಾದರೆ ಇಲ್ಲ. ಇಲ್ಲಿಂದ ಹೋಗುವ ಸಾವಿರಗಟ್ಟಲೆ ಕಾರ್ಮಿಕರಿಗೆ ಕ್ವಾರೈಂಟೈನ್ ವ್ಯವಸ್ಥೆ ಮತ್ತು ಆರೋಗ್ಯ ವ್ಯವಸ್ಥೆಯನ್ನು ಅವರು ಮಾಡಿಕೊಳ್ಳಬೇಕು. ಅದಕ್ಕಾಗಿ ಅವರು ಕಳುಹಿಸಬೇಡಿ ಎನ್ನುತ್ತಿದ್ದಾರೆ. ಹೀಗಾಗಿ ನಾವು ಕಾರ್ಮಿಕರನ್ನಾಗಲಿ, ರೈಲನ್ನಾಗಲಿ ತಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಶುಕ್ರವಾರ ಮತ್ತು ಶನಿವಾರ ಎರಡು ರೈಲುಗಳು ಹೋಗುತ್ತವೆ ಎಂದು ತಿಳಿಸಿದ್ದಾರೆ.
ಕೋವಿಡ್-19 ಲಾಕ್ಡೌನ್ 3ನೇ ಹಂತ ಯಶಸ್ವಿಗೊಳಿಸುವ ಜವಾಬ್ದಾರಿ ಸಾರ್ವಜನಿಕರದು. ಒಂದು ವೇಳೆ ಇದು ಯಶಸ್ವಿ ಆಗದೇ ಇದ್ದರೆ ಮುಂದೆ ಕಠಿಣ ಕ್ರಮಗಳನ್ನು ಸರಕಾರ ತೆಗೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೃಷಿ ಮತ್ತು ಆರ್ಥಿಕ ಚಟುವಟಿಕೆಗಳಿಗಾಗಿ ಲಾಕ್ಡೌನ್ನಲ್ಲಿ ಕೆಲವು ಸಡಿಲಿಕೆ ಮಾಡಲಾಗಿದೆ. ಇದರ ಅರ್ಥ ಕೊರೋನ ವೈರಸ್ ಸಂಪೂರ್ಣ ತೊಲಗಿದೆ ಎಂದಲ್ಲ. ಕೊರೋನ ಇನ್ನೂ ಇದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು ಎಂದು ಅವರು ತಿಳಿಸಿದರು.
ಅಂತರ ಪಾಲನೆ, ಮಾಸ್ಕ್ ಧರಿಸುವುದು ಸೇರಿ ಇತರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೋನ ವೈರಸ್ ನಿಯಂತ್ರಣಕ್ಕೆ ಸಹಕರಿಸಬೇಕು. ಇಲ್ಲವಾದರೆ ಪರಿಸ್ಥಿತಿ ಗಂಭೀರವಾಗಲಿದೆ. ಆಗ ಇನ್ನಷ್ಟು ಕಠಿಣ ನಿಯಮ ಜಾರಿ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.
ಸ್ವೇಚ್ಛಾಚಾರಕ್ಕಲ್ಲ: ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಾತನಾಡಿ, ಲಾಕ್ಡೌನ್ ಸಡಿಲಿಕೆ ಆರ್ಥಿಕ ಚಟುವಟಿಕೆಗಳಿಗಾಗಿಯೇ ಹೊರತು ಸ್ವೇಚ್ಚಾಚಾರಕ್ಕೆ ಎಂದು ಭಾವಿಸಬಾರದು. ಸ್ವಯಂ ನಿಯಂತ್ರಣ ವಿಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮನಸ್ಥಿತಿ ಬದಲಿಸಿಕೊಳ್ಳಿ: ಲಾಕ್ಡೌನ್ ಸಡಿಲಿಕೆ ಮಾಡಿದ್ದರಿಂದ ಕೊರೋನ ಹೋಗಿದೆ ಎಂದು ಕೆಲವರು ಭಾವಿಸಿದ್ದಾರೆ. ಅದು ತಪ್ಪು. ಕೊರೋನ ಹೋಗಿಲ್ಲ, ಮನಸ್ಥಿತಿ ಬದಲಿಸಿಕೊಂಡು 1 ಮತ್ತು 2ನೇ ಲಾಕ್ಡೌನ್ನಲ್ಲಿದ್ದ ಕಟ್ಟುನಿಟ್ಟಿನ ನಿಯಮ ಪಾಲನೆ 3ನೇ ಹಂತದ ಲಾಕ್ಡೌನ್ನಲ್ಲೂ ಪಾಲಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ವ್ಯಕ್ತಿಗತ ಸ್ವಚ್ಛತೆಯ ಜತೆಗೆ, ಮಾರ್ಗಸೂಚಿಗಳನ್ನು ಪಾಲಿಸದೇ ಇದ್ದರೆ ಹಸಿರು ವಲಯ ಕೆಂಪು ವಲಯವಾಗಿ ಮಾರ್ಪಾಡಾಗುವ ಅಪಾಯವಿದೆ ಎಂದೂ ಅವರು ಎಚ್ಚರಿಸಿದರು.







