"ವಿಶೇಷ ಪ್ಯಾಕೇಜ್; ಮಲ್ಲಿಗೆ ಕೃಷಿಕರಿಗೆ ನಿಷ್ಪ್ರಯೋಜಕ"
ಉಡುಪಿ, ಮೇ 7: ಲಾಕ್ಡೌನ್ನಿಂದಾಗಿ ತೊಂದರೆಗೀಡಾದ ರಾಜ್ಯದ ರೈತಾಪಿ ಜನರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರಕಾರ ಬುಧವಾರ ಘೋಷಿಸಿದ ವಿಶೇಷ ಪ್ಯಾಕೇಜ್ನಲ್ಲಿ ಪುಷ್ಪ ಕೃಷಿ ನಷ್ಟ ಹೊಂದಿದ ರೈತರಿಗೆ ಹೆಕ್ಟೇರಿಗೆ 25 ಸಾವಿರ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವುದನ್ನು ಸ್ವಾಗತಿಸಿರುವ ಉಡುಪಿ ಜಿಲ್ಲಾ ಕೃಷಿಕ ಸಂಘ, ಆದರೆ ಈ ಪ್ಯಾಕೇಜ್ನಿಂದ ಕರಾವಳಿಯ ಮಲ್ಲಿಗೆ ಹೂವಿನ ಬೆಳೆಗಾರರಿಗೆ ಯಾವುದೇ ರೀತಿಯಲ್ಲಿ ಪ್ರಯೋಜನಕಾರಿಯಾಗಿಲ್ಲ ಎಂದು ದೂರಿದೆ.
ಏಕೆಂದರೆ ಜಿಲ್ಲೆಯ ಅಧಿಕ ಮಲ್ಲಿಗೆ ಬೆಳೆಗಾರರು ತುಂಡು ಭೂಮಿ ಹಿಡುವಳಿದಾರರು. ಇವರು ಒಂದು ಸೆಂಟ್ಸ್ನಿಂದ 5 ಸೆಂಟ್ಸ್ವರೆಗಿನ ಜಮೀನಿನಲ್ಲಿ 10ರಿಂದ 50 ಗಿಡಗಳನ್ನು ನೆಟ್ಟು ಬೆಳೆಸುತ್ತಾರೆ. ವಾರ್ಷಿಕವಾಗಿ ಮಲ್ಲಿಗೆ ಗಿಡ ಒಂದರ ನಿರ್ವಹಣೆ/ಉತ್ಪಾದನಾ ವೆಚ್ಚ ಒಂದು ಸಾವಿರ ರೂ.ಗಳಷ್ಟು ಇರುತ್ತದೆ. ಇದು ಅತ್ಯಧಿಕ ಖರ್ಚಿನ ಬೆಳೆಯಾಗಿದೆ ಎಂದು ಸಂಘ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಳುಹಿಸಿದ ಮನವಿಯಲ್ಲಿ ತಿಳಿಸಿದೆ.
ಜಿಲ್ಲೆಯಲ್ಲಿ ಸುಮಾರು 40 ಸಾವಿರ ಕುಟುಂಬಗಳು ಮಲ್ಲಿಗೆ ಕೃಷಿಯನ್ನು ನಂಬಿ ಜೀವನ ನಿರ್ವಹಣೆ ಮಾಡುತ್ತಿವೆ. ವರ್ಷದಲ್ಲಿ ಮಾರ್ಚ್ನಿಂದ ಮೇ ತಿಂಗಳುಗಳು ಮಲ್ಲಿಗೆ ಹೂವಿಗೆ ಅತ್ಯಧಿಕ ಬೇಡಿಕೆಯ ದಿನಗಳಾಗಿದ್ದು ಇದೇ ಕಾಲಘಟ್ಟದಲ್ಲಿ ಈ ಬಾರಿ ಕೋವಿಡ್-19ಗೆ ಲಾಕ್ಡೌನ್ ಆದ ಕಾರಣ ಮಲ್ಲಿಗೆ ಕೃಷಿ ಅಧಿಕ ಇಳುವರಿ ಇದ್ದರೂ ಬೇಡಿಕೆಯಿಲ್ಲದೆ ಆದಾಯವೂ ಇಲ್ಲದೆ ಕೃಷಿಕರು ಸಂಪೂರ್ಣವಾಗಿ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದೆ.
ಪ್ರಸ್ತುತ ಸರಕಾರ ಘೋಷಿಸಿರುವ ವಿಶೇಷ ಪ್ಯಾಕೇಜ್ ಪರಿಹಾರವನ್ನು ಜಿಲ್ಲೆಯ ಮಲ್ಲಿಗೆ ಕೃಷಿಭೂಮಿಗೆ ಅನ್ವಯಿಸಿದರೆ ಮಲ್ಲಿಗೆ ಬೆಳೆಯುತ್ತಿರುವ ಕೃಷಿಕರಿಗೆ ಸಿಗುವ ಪರಿಹಾರ ರೂ. 100ರಿಂದ ರೂ.500 ಮಾತ್ರ!. ಆದ್ದರಿಂದ ಕರಾವಳಿಯ ಮಲ್ಲಿಗೆ ಬೆಳೆಗಾರರನ್ನು ದೃಷಿಯಲ್ಲಿಟ್ಟುಕೊಂಡು ಪ್ರತೀ ಗಿಡಕ್ಕೆ ಕನಿಷ್ಠ 500ರೂ.ನಂತೆ ಪರಿಹಾರ ದೊರೆಯಲು ಕ್ರಮ ಕೈಗೊಳ್ಳುವಂತೆ ಕೃಷಿಕ ಸಂಘ ಮನವಿಯಲ್ಲಿ ಮುಖ್ಯಮಂತ್ರಿಗಳನ್ನು ವಿನಂತಿಸಿದೆ.







