ನನಗೇನಾದರೂ ಆದರೆ ಅರ್ನಬ್ ಗೋಸ್ವಾಮಿ, ಆಗಿನ ಎಸ್ಪಿ, ಇನ್ಸ್ಪೆಕ್ಟರ್ ಸಂಪೂರ್ಣ ಹೊಣೆ
2018ರ ಪತಿ, ಅತ್ತೆ ಆತ್ಮಹತ್ಯೆಗೆ ರಿಪಬ್ಲಿಕ್ ಟಿವಿ ಸಂಪಾದಕ ಕಾರಣ ಎಂದ ಮಹಿಳೆ
ಮುಂಬೈ, ಮೇ 8: ಕೋಮು ಹಿಂಸೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಮಹಾರಾಷ್ಟ್ರ ಕಾಂಗ್ರೆಸ್ ಇದೀಗ 2018ರಲ್ಲಿ ನಡೆದ ಒಳಾಂಗಣ ವಿನ್ಯಾಸಗಾರ ಮತ್ತು ಆತನ ತಾಯಿಯ ಆತ್ಮಹತ್ಯೆ ಪ್ರಕರಣವನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಒಳಾಂಗಣ ವಿನ್ಯಾಸಗಾರ ಅನ್ವಯ್ ನಾಯ್ಕ (53) ಮತ್ತು ಆತನ ತಾಯಿಯ ಹತ್ಯೆಗೆ ಗೋಸ್ವಾಮಿ ಹಾಗೂ ಇತರ ಇಬ್ಬರು ಕುಮ್ಮಕ್ಕು ನೀಡಿದ ಆರೋಪವಿದೆ. ಅನ್ವಯ್, ಕಾನ್ಕಾರ್ಡ್ ಡಿಸೈನ್ಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಅಲಿಬಾಗ್ನ ಫಾರ್ಮ್ಹೌಸ್ನಲ್ಲಿ ಅನ್ವಯ್ ಹಾಗೂ ಅವರ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ತಮ್ಮ ಈ ನಿರ್ಧಾರಕ್ಕೆ 5.4 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿರುವ ಅರ್ನಬ್ ಗೋಸ್ವಾಮಿ ಹಾಗೂ ಫಿರೋಝ್ ಶೇಖ್ ಮತ್ತು ನಿತೀಶ್ ಸರ್ದಾ ಕಾರಣ ಎಂದು ಆತ್ಮಹತ್ಯೆ ಟಿಪ್ಪಣಿಯಲ್ಲಿ ದಾಖಲಿಸಿದ್ದರು. ಗೋಸ್ವಾಮಿ ತಮ್ಮ ಸ್ಟುಡಿಯೊ ವಿನ್ಯಾಸಕ್ಕೆ ನೀಡಬೇಕಿದ್ದ 83 ಲಕ್ಷ ರೂಪಾಯಿಗಳನ್ನು ಪಾವತಿಸಿಲ್ಲ ಎಂಬ ಆರೋಪದ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು. ರಿಪಬ್ಲಿಕ್ ಟಿವಿ ಈ ಆರೋಪವನ್ನು ನಿರಾಕರಿಸಿ, ವಿನ್ಯಾಸ ಗುತ್ತಿಗೆಯ ಎಲ್ಲ ಬಾಕಿ ಮೊತ್ತ ಪಾವತಿಸಿದ್ದಾಗಿ ಹೇಳಿಕೊಂಡಿತ್ತು.
ಮೇ 5ರಂದು ಮಹಾರಾಷ್ಟ್ರ ಕಾಂಗ್ರೆಸ್ ಪಕ್ಷದ ಅಧಿಕೃತ ಹ್ಯಾಂಡಲ್ನಿಂದ ಅನ್ವಯ್ ನಾಯ್ಕ್ ಅವರ ಪತ್ನಿ ಅಕ್ಷಿತಾ ನಾಯ್ಕ್ ಅವರ ವಿಡಿಯೊ ಟ್ವೀಟ್ ಮಾಡಲಾಗಿದೆ. ಅನ್ವಯ್ ಹಾಗೂ ಅವರ ತಾಯಿಯ ಎರಡನೇ ಪುಣ್ಯತಿಥಿ ಸಂದರ್ಭದಲ್ಲಿ ಈ ವಿಡಿಯೊ ಚಿತ್ರೀಕರಿಸಿರಬಹುದೆನ್ನಲಾಗಿದೆ. 2.4 ನಿಮಿಷ ಅವಧಿಯ ಈ ವಿಡಿಯೊದ ಬಹುತೇಕ ಭಾಗ ಮರಾಠಿಯಲ್ಲಿದ್ದು, ಅಕ್ಷಿತಾ ತಮ್ಮ ನ್ಯಾಯ ಹೋರಾಟದಲ್ಲಿ ಭಾರತೀಯರಿಂದ ನೆರವು ಯಾಚಿಸಿದ್ದಾರೆ. ಜತೆಗೆ ನನಗೆ ಹಾಗೂ ನನ್ನ ಪುತ್ರಿಗೆ ಏನಾದರೂ ಆದರೆ ಅದಕ್ಕೆ ಅರ್ನಬ್ ಗೋಸ್ವಾಮಿ, ಅನಿಲ್ ಪರಾಸ್ಕರ್ ಮತ್ತು ಸುರೇಶ್ ವರಾಡೆ ಕಾರಣ ಎಂದು ಆಪಾದಿಸಿದ್ದರು. ಪರಾಸ್ಕರ್ ಅವರು ಅನ್ವಯ್ ಆತ್ಮಹತ್ಯೆ ಸಂದರ್ಭದಲ್ಲಿ ರಾಯಗಢ ಎಸ್ಪಿ ಆಗಿದ್ದರು ಹಾಗೂ ಸುರೇಶ್ ವರಾಡೆ ಅಲೀಬಾಗ್ನ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದರು.
ಎಫ್ಐಆರ್ ದಾಖಲಿಸುವ ವೇಳೆ ವರಾಡೆ, ಹಲವು ಪ್ರಭಾವಿ ವ್ಯಕ್ತಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಎಚ್ಚರಿಕೆ ನೀಡಿದ್ದರು ಹಾಗೂ ದೂರು ನೀಡುವ ಮುನ್ನ ಸಮಾಲೋಚನೆ ನಡೆಸುವಂತೆ ಸಲಹೆ ನೀಡಿದ್ದರು ಎಂದು ವೀಡಿಯೊದಲ್ಲಿ ಅವರು ಆಪಾದಿಸಿದ್ದಾರೆ. ಜತೆಗೆ ತನಿಖೆಯ ವೇಳೆ ಪೊಲೀಸರಿಗೆ ನೀಡಿದ್ದ ಲ್ಯಾಪ್ಟಾಪ್ಗಳು ಹಾಗೂ ಫೋನ್ಗಳು ಇನ್ನೂ ತಮ್ಮ ಕೈಸೇರಿಲ್ಲ ಎಂದು ಹೇಳಿದ್ದರು. ಹಲವು ಪ್ರಯತ್ನದ ಬಳಿಕ ಆತ್ಮಹತ್ಯೆ ಟಿಪ್ಪಣಿ ಸಿಕ್ಕಿದೆ ಎಂದು ವಿವರಿಸಿದ್ದರು.
ಅಕ್ಷಿತಾ ನಾಯ್ಕ್ ಇಂಗ್ಲಿಷ್ನಲ್ಲಿ ಮಾತನಾಡಿರುವ ಮತ್ತೊಂದು ವೀಡಿಯೊ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪತಿಯ ಸಾವಿನ ಪ್ರಕರಣದಲ್ಲಿ ಅರ್ನಬ್ ಗೋಸ್ವಾಮಿಯೇ ಅಪರಾಧಿ ಎಂದು ಅವರು ಹೇಳಿದ್ದಾರೆ. ತಮ್ಮ ಪತಿಯ ಕೊನೆಯ ಯೋಜನೆ ರಿಪಬ್ಲಿಕ್ ಟಿವಿ ಸ್ಟುಡಿಯೊ ಆಗಿತ್ತು ಎಂದು ಹೇಳಿರುವ ಅವರು, ನೂರಾರು ಮಂದಿ ಹಗಲು ರಾತ್ರಿ ಇದಕ್ಕಾಗಿ ಶ್ರಮಿಸಿದ್ದರು. ಎರಡು ವರ್ಷಗಳ ಹಿಂದೆ ಸಲ್ಲಿಸಿದ ಎಫ್ಐಆರ್ ಬಗ್ಗೆ ವರಾಡೆ ಉತ್ತರಿಸಬೇಕು ಎಂದು ಈ ವೀಡಿಯೊದಲ್ಲಿ ಅಕ್ಷಿತಾ ಆಗ್ರಹಿಸಿದ್ದಾರೆ.
ಪತಿ ಹಾಗೂ ಅತ್ತೆಯ ಆತ್ಮಹತ್ಯೆಗೆ ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ಹಣ ಪಾವತಿಸದಿರುವುದು ಕಾರಣ ಎಂದು ಅಕ್ಷಿತಾ ಹೇಳಿದ್ದಾಗಿ ಮಹಾರಾಷ್ಟ್ರ ಕಾಂಗ್ರೆಸ್ ಟ್ವೀಟ್ ಮಾಡಿದೆ. ಇದು ಗಂಭೀರ ಆರೋಪವಾಗಿದ್ದು, ಮತ್ತಷ್ಟು ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.
ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಕಾರ್ಯಾಚಣೆಯ ಸಂಯೋಜಕ ಗೌರವ್ ಪಾಂಡಿ ಈ ಬಗ್ಗೆ ಟ್ವೀಟ್ ಮಾಡಿ, ಬಿಜೆಪಿ ಸರ್ಕಾರ ಪ್ರಕರಣವನ್ನು ಮುಚ್ಚಿಹಾಕಿದೆ. ಇದೀಗ ಪತ್ನಿ ನ್ಯಾಯಕ್ಕೆ ಮೊರೆ ಹೋಗಿದ್ದಾರೆ ಎಂದು ಹೇಳಿ ಗೋಸ್ವಾಮಿ ಬಂಧನಕ್ಕೆ ಆಗ್ರಹಿಸಿದ್ದಾರೆ.