ಮದ್ಯವನ್ನು ಮನೆಗೆ ತಲುಪಿಸುವುದನ್ನು ರಾಜ್ಯಗಳು ಪರಿಗಣಿಸಲಿ: ಸುಪ್ರೀಂಕೋರ್ಟ್
ಹೊಸದಿಲ್ಲಿ, ಮೇ 8: ದೇಶದೆಲ್ಲೆಡೆ ಮದ್ಯದಂಗಡಿಯ ಮುಂದೆ ಜನದಟ್ಟಣೆಯನ್ನು ಕಡಿಮೆಗೊಳಿಸಲು ಹಾಗೂ ಸುರಕ್ಷಿತ ಅಂತರ ನಿಯಮವನ್ನು ಪಾಲಿಸಲು ಎಲ್ಲ ರಾಜ್ಯಗಳು ಮದ್ಯದ ಪರೋಕ್ಷ ಮಾರಾಟ, ಮನೆಗೆ ಸರಬರಾಜು ಮಾಡುವ ಸಲಹೆಯನ್ನು ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ ಗುರುವಾರ ತಿಳಿಸಿದೆ.
ಜಸ್ಟಿಸ್ ಅಶೋಕ್ ಭೂಷಣ್, ಸಂಜಯ್ ಕಿಶನ್ ಕೌಲ್ ಹಾಗೂ ಬಿ ಆರ್ ಗವಾಯಿ ಅವರನ್ನೊಳಗೊಂಡ ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಲೇವಾರಿ ಮಾಡಿತು.
ನಾವು ಯಾವುದೇ ಆದೇಶವನ್ನು ನೀಡುವುದಿಲ್ಲ.ಆದರೆ ಸುರಕ್ಷಿತ ಅಂತರ ಕಾಪಾಡಲು ರಾಜ್ಯ ಸರಕಾರಗಳು ಪರೋಕ್ಷ ಮಾರಾಟ ಅಥವಾ ಮನೆಮನೆಗೆ ಮದ್ಯ ಸರಬರಾಜು ಮಾಡುವುದನ್ನು ಪರಿಗಣಿಸಬೇಕು ಎಂದು ತ್ರಿಸದಸ್ಯ ಪೀಠ ಸಲಹೆ ನೀಡಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಮಾರ್ಚ್ 25ರಿಂದ ದೇಶಾದ್ಯಂತ ಮದ್ಯದಂಗಡಿಗಳು ಮುಚ್ಚಿದ್ದವು. ಈ ವಾರ ಮದ್ಯದಂಗಡಿ ತೆರೆಯಲು ಅನುಮತಿ ನೀಡಲಾಗಿತ್ತು. ಮದ್ಯದಂಗಡಿಯ ಮುಂದೆ ದೊಡ್ಡ ಸರದಿ ಸಾಲು ಕಂಡುಬಂದಿತ್ತು. ಸುರಕ್ಷಿತ ಅಂತರ ನಿಯಮ ಪಾಲಿಸುವಂತೆ ಪೊಲೀಸರು ಜನರಿಗೆ ಬುದ್ದಿ ಹೇಳಿದ್ದರು.