ಗ್ರಾಮೀಣ ಭಾಗದ ಪ್ರತೀ ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ: ಜಿಪಂ ಸಿಇಒ
ಮಂಗಳೂರು, ಮೇ 8: ಕೇಂದ್ರ ಸರಕಾರದ ಜಲಜೀವನ ಮಿಷನ್ ಯೋಜನೆಯಿಂದ ಗ್ರಾಮೀಣದ ಪ್ರತಿ ಮನೆಗೆ ನಳ್ಳಿ ನೀರಿನ ಸಂಪರ್ಕವನ್ನು ಒದಗಿಸುವ ಯೋಜನೆಯು ಪ್ರಾರಂಭವಾಗಿದೆ. ದ.ಕ.ಜಿಪಂ ಈಗಾಗಲೇ ಈ ಬಗ್ಗೆ ಸರ್ವೆ ನಡೆಸಿದ್ದು, ಆದಷ್ಟು ಶ್ರೀಘ್ರದಲ್ಲಿ ಈ ಯೋಜನೆಯು ಜಾರಿಗೆ ಬರಲಿದೆ ಎಂದು ಜಿಪಂ ಸಿಇಒ ಡಾ. ಸೆಲ್ವಮಣಿ ತಿಳಿಸಿದ್ದಾರೆ.
ದ.ಕ.ಜಿಪಂ ನಲ್ಲಿ ಶುಕ್ರವಾರ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪ್ರಸುತ್ತ 74 ಗ್ರಾಪಂನಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ. ಇದರ ವೆಚ್ಚವನ್ನು ಕೇಂದ್ರ ಸರಕಾರ ಶೇ.45 ರಷ್ಟು ಮತ್ತು ರಾಜ್ಯ ಸರಕಾರ 45 ರಷ್ಟು ಹಾಗೂ ಸಾರ್ವಜನಿಕ ಚಂದಾದಾರರು ಶೇ.10ರಷ್ಟು ಪಾವತಿಸಬೇಕಾಗುತ್ತದೆ. ಜಲಜೀವನ ಮಿಷನ್ನಿಂದ ಗ್ರಾಮೀಣ ಸಮುದಾಯದ ಪ್ರತಿ ಮನೆಗೆ ಗುಣಮಟ್ಟದ ಆಧಾರಿತ ನೀರನ್ನು ಪ್ರತಿದಿನ ನೀಡಲು ಸರಕಾರ ನಿರ್ಧರಿಸಿದೆ. ಯೋಜನೆ ಅನುಷ್ಠಾನಕ್ಕೆ ಕ್ರಿಯಾ ಯೋಜನೆಯನ್ನು ಗ್ರಾಮಸಭೆಗಳಲ್ಲಿ ಅನುಮೋದನೆ ಪಡೆದುಕೊಳ್ಳಲಾಗುವುದು. 2024ರೊಳಗೆ ಎಲ್ಲಾ ಮನೆಗಳಿಗೆ ನೀರಿನ ಸಂಪರ್ಕ ನೀಡುವುದು ಇದರ ಆದ್ಯತೆಯಾಗಿದೆ ಎಂದು ಡಾ. ಸೆಲ್ವಮಣಿ ಹೇಳಿದರು.
ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಕಾರ್ಯಕಾರಿ ಅಭಿಯಂತರ ನರೇಂದ್ರ ಬಾಬು, ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ರಾಜೇಶ್, ಸಾರ್ವಜಿನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲೇಸ್ವಾಮಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.





