ಆ ಒಂದು ಫೋನ್ ಕರೆ 16 ಕಾರ್ಮಿಕರ ಜೀವ ಉಳಿಸುತ್ತಿತ್ತು
ಭೋಪಾಲ್, ಮೇ 9: ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ರೈಲಿನಡಿ ಸಿಕ್ಕಿ ಮಧ್ಯ ಪ್ರದೇಶದ 16 ಮಂದಿ ವಲಸೆ ಕಾರ್ಮಿಕರು ಮೃತಪಟ್ಟ ಘಟನೆ, ಎರಡು ನೆರೆ ರಾಜ್ಯಗಳ ನಡುವಿನ ಸಮನ್ವಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮಧ್ಯಪ್ರದೇಶ ಸರ್ಕಾರದ ಆಗ್ರಹದಂತೆ 31 ರೈಲುಗಳಲ್ಲಿ ವಲಸೆ ಕಾರ್ಮಿಕರನ್ನು ಮಹಾರಾಷ್ಟ್ರದಿಂದ ಕರೆತರಲು ವ್ಯವಸ್ಥೆ ಮಾಡಿದ್ದರೂ, ಹಲವು ಮಂದಿ ಕಾರ್ಮಿಕರಿಗೆ ತವರು ರಾಜ್ಯಕ್ಕೆ ತೆರಳಲು ಪಾಸ್ ಸಿಕ್ಕಿರಲಿಲ್ಲ. ಹತಾಶರಾಗಿ ತಮ್ಮ ಕುಟುಂಬಗಳನ್ನು ಸೇರಿಕೊಳ್ಳುವ ತವಕದಲ್ಲಿದ್ದ ಮಹಾರಾಷ್ಟ್ರದ ಜಲ್ನಾ ಫ್ಯಾಕ್ಟರಿಯಲ್ಲಿ ಉದ್ಯೋಗದಲ್ಲಿದ್ದ ವಲಸೆ ಕಾರ್ಮಿಕರು ಗುರುವಾರ ಸಂಜೆ 7 ಗಂಟೆಗೆ ಕಾಲ್ನಡಿಗೆ ಆರಂಭಿಸಿ ಬಳಿಕ ರೈಲು ಹಳಿಯ ಮೇಲೆ ವಿಶ್ರಾಂತಿ ಪಡೆಯುತ್ತಿದ್ದರು. ಸರಕು ಸಾಗಣೆ ರೈಲು ಅವರ ಮೇಲೆ ಹರಿದು 16 ಮಂದಿ ಮೃತಪಟ್ಟಿದ್ದರು.
ನಮ್ಮ ತವರು ಜಿಲ್ಲೆಯಾದ ಉಮರಿಯಾಗೆ ವಾಪಸ್ಸಾಗಲು ಪಾಸ್ ಪಡೆಯಲು ಅರ್ಜಿ ಸಲ್ಲಿಸಿದ್ದೆವು. ಆದರೆ ಪಾಸ್ ವಿಚಾರ ಹಾಗಿರಲಿ; ಹಲವು ವಾರ ಮೊದಲೇ ಅರ್ಜಿ ಸಲ್ಲಿಸಿದ್ದರೂ, ಸ್ಪಂದನೆ ಕೂಡಾ ಸಿಕ್ಕಿಲ್ಲ ಎಂದು ಘಟನೆಯಲ್ಲಿ ಉಳಿದುಕೊಂಡಿರುವ ವೀರೇಂದ್ರ ಸಿಂಗ್ ವಿವರಿಸಿದರು.
ಪ್ರಧಾನ ಕಾರ್ಯದರ್ಶಿ ಶ್ರೇಣಿಯ ಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು, ವಿವಿಧ ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರ ವಾಪಸ್ಸಾತಿ ಪ್ರಕ್ರಿಯೆಯ ಸಮನ್ವಯ ಕಾರ್ಯಕ್ಕಾಗಿ ಎಪ್ರಿಲ್ 30ರಂದು ನಿಯೋಜಿಸಲಾಗಿತ್ತು. 1994ನೇ ಬ್ಯಾಚ್ನ ಅಧಿಕಾರಿ, ಬುಡಕಟ್ಟು ವ್ಯವಹಾರಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ದೀಪಾಲಿ ರಸ್ತೋಗಿ ವಾಸ್ತವವಾಗಿ ಮಹಾರಾಷ್ಟ್ರ ಜತೆ ಸಮನ್ವಯ ಮಾಡಬೇಕಿತ್ತು. ಆದರೆ ಈ ಕಾರ್ಯಕ್ಕೆ ನಿಯೋಜಿತರಾದವರು ದೂರವಾಣಿ ಕರೆಯನ್ನೂ ಸ್ವೀಕರಿಸುತ್ತಿಲ್ಲ ಎಂದು ವಿರೋಧ ಪಕ್ಷಗಳು ಆಪಾದಿಸಿವೆ. ಈ ದುರಂತದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಆಗ್ರಹಿಸಿದ್ದಾರೆ.
ಮಧ್ಯಪ್ರದೇಶ ಸರ್ಕಾರ ವಲಸೆ ಕಾರ್ಮಿಕರ ನೋಂದಣಿಗೆ ಪ್ರಯತ್ನಿಸಿದೆಯೇ? ಹೌದಾದಲ್ಲಿ, ವಲಸೆ ಕಾರ್ಮಿಕರನ್ನು ತವರು ರಾಜ್ಯಕ್ಕೆ ಕರೆ ತರಲು ಯಾವ ಪ್ರಯತ್ನಗಳನ್ನು ಮಾಡಿದೆ? ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇದಕ್ಕೆ ಉತ್ತರಿಸಬೇಕಿದೆ ಹಾಗೂ ನಾಚಿಕೆಪಡಬೇಕು. ಪ್ರತಿದಿನ ಮಾಧ್ಯಮದ ಮುಂದೆ ಹೇಳಿಕೆ ನೀಡುವ ಬದಲು, ಅವರು ಕೆಲಸದ ಬಗ್ಗೆ ಗಮನ ಹರಿಸಬೇಕಿತ್ತು ಎಂದು ಟ್ವೀಟ್ ಮಾಡಿದ್ದಾರೆ.