ಪುತ್ತೂರು: ಟೀಮ್ ಬಿ - ಹ್ಯೂಮನ್ ನಿಂದ 2ನೇ ಹಂತದ ರಮಝಾನ್ ಕಿಟ್ ವಿತರಣೆ

ಪುತ್ತೂರು, ಮೇ 9: ಮಂಗಳೂರಿನ ಟೀಮ್ ಬಿ-ಹ್ಯೂಮನ್ ಸಂಘಟನೆ ಇಂದು ಪುತ್ತೂರು ತಾಲೂಕಿನಲ್ಲಿ 2ನೇ ಹಂತದ ರಮಝಾನ್ ಕಿಟ್ ವಿತರಣೆ ನಡೆಸಿತು.
ತಾಲೂಕಿನ ಕೂಡುರಸ್ತೆ ಜಮಾಅತ್ ವ್ಯಾಪ್ತಿಯ ಎಲ್ಲ 70 ಕುಟುಂಬಗಳಿಗೆ ಹಾಗೂ ಕಳೆದ ವಾರ ಕಿಟ್ ತಲುಪಿಸಲು ಬಾಕಿ ಉಳಿದಿದ್ದ ಪಾಪೆತ್ತಡ್ಕ ಜಮಾಅತ್ ನ 30 ಕುಟುಂಬಗಳಿಗೆ ಇಂದು ಕಿಟ್ಗಳನ್ನು ವಿತರಿಸಲಾಯಿತು.
ಇದರೊಂದಿಗೆ ಪುತ್ತೂರು ತಾಲೂಕಿನಲ್ಲಿ ಕೂಡುರಸ್ತೆ, ಪಾಪತ್ತಡ್ಕ ಮತ್ತು ತ್ಯಾಗರಾಜೇ ಜಮಾಅತ್ಗೆ ಒಳಪಟ್ಟ ಎಲ್ಲಾ ಮನೆಗಳಿಗೆ ಒಟ್ಟು 200 ರಂಝಾನ್ ಕಿಟ್ ವಿತರಣೆ ನಡೆಸಿದಂತಾಗಿದೆ. ಇದಲ್ಲದೆ ಪುತ್ತೂರಿನ ಗ್ರಾಮೀಣ ಪ್ರದೇಶದ ಕೆಲವು ಬಡ ಕುಟುಂಬಗಳಿಗೂ ಕಿಟ್ ವಿತರಿಸಲಾಗಿದೆ.
ದ.ಕ. ಜಿಲ್ಲೆಯಲ್ಲಿ ಲಾಕ್ ಡೌನ್ ಸಂಕಷ್ಟದಲ್ಲಿರುವ 750 ವಲಸೆ ಕಾರ್ಮಿಕರಿಗೆ ಪ್ರತಿದಿನ ಉಪಹಾರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಎಲ್ಲ ಜಾತಿ, ಧರ್ಮದ ಸಾವಿರಾರು ನಿರ್ಗತಿಕ ಕುಟುಂಬಗಳಿಗೆ ದಿನಸಿ ಕಿಟ್, ಪ್ರತಿದಿನ 450 ಉಪವಾಸಿಗರಿಗೆ ಇಫ್ತಾರ್ ಮತ್ತು ಸಹರಿ ಅನ್ನಾಹಾರ ಟೀಂ ಬಿ-ಹ್ಯೂಮೆನ್ ಸಂಸ್ಥೆಯಿಂದ ನೀಡಲಾಗುತ್ತಿದೆ.
ಎಪ್ರಿಲ್ 23ರಿಂದ ಒಟ್ಟು 35 ಸಾವಿರ ಜನರಿಗೆ ಅನ್ನಾಹಾರ ನೀಡಲಾಗಿದ್ದು, ಈ ಯೋಜನೆ ಮುಂದುವರಿಯಲಿದೆ. ಜಿಲ್ಲೆಯ ಇನ್ನೂ ಕೆಲವು ಜಮಾಅತ್ಗಳು ರಮಝಾನ್ ಕಿಟ್ಗಾಗಿ ಮನವಿ ಸಲ್ಲಿಸಿದ್ದು, ಮುಂದಿನ ಹಂತದಲ್ಲಿ ಪರಿಶೀಲನೆ ನಡೆಸಿ, ವಿತರಿಸಲು ಪ್ರಯತ್ನಿಸಲಾಗುವುದು ಎಂದು ಟೀಮ್ ಬಿ-ಹ್ಯೂಮನ್ ಸ್ಥಾಪಕಾಧ್ಯಕ್ಷ ಆಸೀಫ್ ಡೀಲ್ಸ್ ತಿಳಿಸಿದ್ದಾರೆ.
ಇಂದು ನಡೆದ ಕಿಟ್ ವಿತರಣೆಗೆ ಕೂಡುರಸ್ತೆ ಜುಮಾ ಮಸೀದಿಯ ಖತೀಬ್ ಯಾಕೂಬ್ ದಾರಿಮಿ ದುಆ ಮೂಲಕ ಚಾಲನೆ ನೀಡಿದರು. ತಂಡದಲ್ಲಿ ಟೀಮ್ ಬಿ - ಹ್ಯೂಮನ್ ಸದಸ್ಯರಾದ ಅಶ್ರಫ್ ಐನಾ ಗ್ರೂಪ್, ಅಲ್ತಾಫ್, ಶಿಯಾ ಡೀಲ್ಸ್, ಅಹ್ನಫ್ ಡೀಲ್ಸ್, ಶುಕೂರ್ ಹಾಜಿ ಕಲ್ಲೇಗ, ಇ-ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಇಮ್ತಿಯಾಝ್ ಪಾರ್ಲೆ, ಸಾಮಾಜಿಕ ಕಾರ್ಯಕರ್ತ ಸಲೀಂ ಯು.ಬಿ., ಕೂಡುರಸ್ತೆ ಜುಮಾ ಮಸ್ಜಿದ್ ಅಧ್ಯಕ್ಷ ಪಿ.ಕೆ ಮುಹಮ್ಮದ್, ಶಾಫಿ ಪಾಪೆತ್ತಡ್ಕ ಮತ್ತಿತರರಿದ್ದರು.








