ಜುಲೈ ಕೊನೆಯ ವೇಳೆಗೆ ಭಾರತದಲ್ಲಿ ಕೊರೋನ ಗರಿಷ್ಠಮಟ್ಟ ತಲುಪಲಿದೆ: ಡಬ್ಲ್ಯುಎಚ್ಓ ರಾಯಭಾರಿ
ಹೊಸದಿಲ್ಲಿ: ಭಾರತ ಕೊರೋನ ವೈರಸ್ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿದ ಕಾರಣದಿಂದಾಗಿ ಸೋಂಕಿತರ ಸಂಖ್ಯೆ ದೇಶದಲ್ಲಿ ಕಡಿಮೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ರಾಯಭಾರಿ ಡೇವಿಡ್ ನಬರ್ರೂ ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿ ಜುಲೈ ಅಂತ್ಯದ ವೇಳೆಗೆ ಸೋಂಕು ಪ್ರಮಾಣ ಗರಿಷ್ಠಮಟ್ಟ ತಲುಪಲಿದೆ ಎಂದು ಆರೋಗ್ಯ ತಜ್ಞರೂ ಆಗಿರುವ ಅವರು ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ನಿರ್ಬಂಧಗಳನ್ನು ಕಿತ್ತುಹಾಕಿದ ಬಳಿಕವೂ ಕೊರೋನ ವೈರಸ್ ನಾಶವಾಗುವುದಿಲ್ಲ. ಲಾಕ್ಡೌನ್ ಅಂತ್ಯವಾದ ಬಳಿಕ ಪ್ರಕರಣಗಳ ಸಂಖ್ಯೆ ಹೆಚ್ಚಲಿದೆ.
ಆ ಬಳಿಕ ಇಳಿಮುಖವಾಗುತ್ತದೆ. ಜುಲೈ ಕೊನೆಯ ಸುಮಾರಿಗೆ ಗರಿಷ್ಠ ಪ್ರಮಾಣ ತಲುಪಿದ ಬಳಿಕ ಸಂಖ್ಯೆ ಕಡಿಮೆಯಾಗಲಿದೆ ಎಂದು ಲಂಡನ್ನ ಇಂಪೀರಿಯಲ್ ಕಾಲೇಜಿನಲ್ಲಿ ಜಾಗತಿಕ ಆರೋಗ್ಯ ವಿಭಾಗದ ಪ್ರೊಫೆಸರ್ ಆಗಿರುವ ಅವರು ಹೇಳಿದ್ದಾರೆ.
ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ದೆಹಲಿ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಅಧಿಕ ಸಂಖ್ಯೆಯ ಪ್ರಕರಣಗಳು ಪತ್ತೆಯಾಗಿದ್ದರೂ, ಬಹುತೇಕ ನಗರಗಳಿಗೆ ಸೀಮಿತವಾಗಿವೆ. ಭಾರತದಲ್ಲಿ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ. ಆದರೆ ಭಾರತದ ಜನಸಂಖ್ಯೆಗೆ ಹೋಲಿಸಿದರೆ ಈ ಸಂಖ್ಯೆ ಅಷ್ಟೊಂದು ದೊಡ್ಡದಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.