ರಾಜ್ಯದಲ್ಲಿ ಇಂದು 53 ಮಂದಿಗೆ ಕೊರೋನ ಸೋಂಕು ದೃಢ: ಸಾವಿನ ಸಂಖ್ಯೆ 31ಕ್ಕೆ ಏರಿಕೆ
ಬೆಳಗಾವಿಯಲ್ಲಿ 22, ಶಿವಮೊಗ್ಗದಲ್ಲಿ 8, ಭಟ್ಕಳದಲ್ಲಿ 7 ಪ್ರಕರಣಗಳು ಪಾಸಿಟಿವ್

ಬೆಂಗಳೂರು, ಮೇ.10: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ಹರಡುವ ಪ್ರಮಾಣ ತೀವ್ರಗೊಂಡಿದ್ದು, ಶನಿವಾರ ಸಂಜೆ 5ರಿಂದ ಇಂದು ಮದ್ಯಾಹ್ನ 12 ಗಂಟೆ ವರೆಗಿನ ಅವಧಿಯಲ್ಲಿ ಒಟ್ಟು 53 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿವೆ. ಅಲ್ಲದೇ, ಮೇ.7 ರಂದು ಮೃತಪಟ್ಟಿದ್ದ ಬೆಂಗಳೂರು ನಗರದ 56 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಸಾವಿನ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಮದ್ಯಾಹ್ನ ಬಿಡುಗಡೆಗೊಳಿಸಿರುವ ಬುಲೆಟಿನ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ರಾಜ್ಯದಲ್ಲಿ ಒಟ್ಟು ಕೊರೋನ ಸೋಂಕಿತರ ಸಂಖ್ಯೆ 847ಕ್ಕೆ ಏರಿಕೆಯಾಗಿದೆ.
ಈ ಪೈಕಿ ಬೆಳಗಾವಿಯಲ್ಲಿ 22, ಶಿವಮೊಗ್ಗದಲ್ಲಿ 8, ಬಾಗಲಕೋಟೆಯಲ್ಲಿ 8, ಭಟ್ಕಳದಲ್ಲಿ 7, ಬೆಂಗಳೂರು ನಗರ 3, ಕಲಬುರಗಿ 3, ದಾವಣಗೆರೆ ಹಾಗೂ ಚಿಕ್ಕಬಳ್ಳಾಪುರದಲ್ಲಿ ತಲಾ ಒಂದೊಂದು ಸೋಂಕು ಪ್ರಕರಣ ಪತ್ತೆಯಾಗಿದೆ.
ಈ ಪೈಕಿ ಬಾಗಲಕೋಟೆಯ 2 ವರ್ಷದ ಹೆಣ್ಣು ಮಗು, 8 ವರ್ಷದ ಬಾಲಕ, ಬೆಳಗಾವಿಯಲ್ಲಿ 3 ವರ್ಷದ ಇಬ್ಬರು ಮತ್ತು, 6 ಹಾಗೂ 8 ವರ್ಷದ ಮಕ್ಕಳು, 12 ಮತ್ತು 14 ವರ್ಷದ ಬಾಲಕರಿಗೆ ಕೊರೋನ ಪಾಸಿಟಿವ್ ಬಂದಿದೆ.
ರಾಜ್ಯದ ಒಟ್ಟು 847 ಸೋಂಕಿತರ ಪೈಕಿ 405 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೆ 31 ಮಂದಿ ಮೃತಪಟ್ಟಿದ್ದಾರೆ ಎಂದು ಬುಲೆಟಿನ್ ತಿಳಿಸಿದೆ.







