‘ಸಮಗ್ರ ಸರ್ಕಾರದ ದೃಷ್ಟಿಕೋನ’ ಇಂದಿನ ಅಗತ್ಯ: ಸೇನಾ ಮುಖ್ಯಸ್ಥರ ಅಭಿಮತ
ಹೊಸದಿಲ್ಲಿ: ಕೊರೋನ ಸಾಂಕ್ರಾಮಿಕದಂತಹ ಪ್ರಮುಖ ಬಿಕ್ಕಟ್ಟಿನ ವಿರುದ್ಧದ ನಿರ್ಣಾಯಕ ಹೋರಾಟಕ್ಕೆ ಭಾರತ ‘ಸಮಗ್ರ ಸರ್ಕಾರದ ದೃಷ್ಟಿಕೋನ’ವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ನೆರೆಯ ರಾಷ್ಟ್ರದಲ್ಲಿ ರಾಜಕೀಯ ಅಧಿಕಾರದ ಸಂಕೀರ್ಣತೆ ಬಗ್ಗೆ ಮಾತನಾಡಿದ ಅವರು, ಭಾರತ ಈ ಪ್ರದೇಶದಲ್ಲಿ ಒಟ್ಟಾರೆ ಭದ್ರತೆಯನ್ನು ಒದಗಿಸುತ್ತದೆ ಎಂಬ ಭಾವನೆಯನ್ನು ಗಟ್ಟಿಗೊಳಿಸಲು ಭಾರತದ ಸಶಸ್ತ್ರ ಪಡೆ ಬದ್ಧ ಎಂದು ಸ್ಪಷ್ಟಪಡಿಸಿದರು.
ಇದೀಗ ಪ್ರಮುಖ ಅನಿಶ್ಚಿತತೆಗಳ ವಾತಾವರಣ ಎಲ್ಲೆಡೆ ಕಂಡುಬರುತ್ತಿದ್ದು, ಇದನ್ನು ನಿಭಾಯಿಸಲು ಸಮಗ್ರ ಸರ್ಕಾರದ ದೃಷ್ಟಿಕೋನ ಇಂದಿನ ಅಗತ್ಯ ಎಂದು ಅವರು ಪ್ರತಿಪಾದಿಸಿದರು.
ಈ ಬಗ್ಗೆ ನರವಣೆ ಹೆಚ್ಚಿನ ವಿವರ ನೀಡದಿದ್ದರೂ, ಅಪ್ಘಾನಿಸ್ತಾನದ ಶಕ್ತಿ ಸಂರಚನೆಯಲ್ಲಿ ಸಕ್ರಿಯ ಪಾತ್ರ ವಹಿಸುವ ಪಾಕಿಸ್ತಾನಿ ಬೆಂಬಲಿತ ತಾಬಿಬಾನ್ ಗುರಿ ಹಾಗೂ ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್ ಮತ್ತು ಮಾಲ್ಡೀವ್ಸ್ ಜತೆಗೆ ಸೇನಾ ಸಂಬಂಧವನ್ನು ವಿಸ್ತರಿಸುವ ಚೀನಾ ಪ್ರಯತ್ನದ ಹಿನ್ನೆಲೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.
“ಭದ್ರತೆಯನ್ನು ಸಮಗ್ರ ಪರಿಕಲ್ಪನೆಯಾಗಿ ಸೇನೆ ಭಾವಿಸುತ್ತದೆ” ಎಂದು ನರವಣೆ ವಿವರಿಸಿದರು.