ಕೊರೋನ ವೈರಸ್: ದ.ಕ. ಜಿಲ್ಲೆಯಲ್ಲಿ 124 ವರದಿ ನೆಗೆಟಿವ್
ಓರ್ವ ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ
ಮಂಗಳೂರು, ಮೇ 11: ಕೊರೋನ ವೈರಸ್ ರೋಗಕ್ಕೆ ಸಂಬಂಧಿಸಿ ಸೋಮವಾರ ಪ್ರಯೋಗಾಲಯದಿಂದ ಸ್ವೀಕರಿಸಲಾದ 124 ವರದಿ ನೆಗೆಟಿವ್ ಬಂದಿದೆ. ಇನ್ನೂ 128 ಮಂದಿಯ ವರದಿ ಬರಲು ಬಾಕಿ ಇದೆ. ಸೋಮವಾರ 48 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದ್ದು, ಇದರೊಂದಿಗೆ ಈವರೆಗೆ 40,574 ಮಂದಿಯ ಸ್ಕ್ರೀನಿಂಗ್ ಮಾಡಿದಂತಾಗಿದೆ.
ಸಂಚಾರ ಕ್ಲಿನಿಕ್ನಲ್ಲಿ 351 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದೆ. ಅಲ್ಲದೆ 68 ಮಂದಿಯ ಗಂಟಲಿನ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜ್ವರ ಕ್ಲಿನಿಕ್ಗಳಲ್ಲಿ ಈವರೆಗೆ 2949 ಮಂದಿ ತಪಾಸಣೆ ಮಾಡಿಸಿಕೊಂಡಿದ್ದಾರೆ.
ಎನ್ಐಟಿಕೆಯಲ್ಲಿ ಕ್ವಾರಂಟೈನ್ನಲ್ಲಿದ್ದ 32 ಮಂದಿಯ ಪೈಕಿ 12 ಮತ್ತು ಇಎಸ್ಐ ಆಸ್ಪತ್ರೆಯಲ್ಲಿದ್ದ 40 ಮಂದಿ ಪೈಕಿ 16 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಉಳಿದಂತೆ 13 ಮಂದಿಯ ಮೇಲೆ ವಿಶೇಷ ನಿಗಾ ಇಡಲಾಗಿದೆ.
ಈವರೆಗೆ 4,398ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಆ ಪೈಕಿ 4,270 ಮಂದಿಯ ವರದಿಯನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 4239 ಮಂದಿಯ ವರದಿಯು ನೆಗೆಟಿವ್ ಮತ್ತು 31 ಮಂದಿಯ ವರದಿಯು ಪಾಸಿಟಿವ್ ಬಂದಿದೆ. ಪಾಸಿಟಿವ್ ಪೈಕಿ 25 ದ.ಕ.ಜಿಲ್ಲೆಯ ನಿವಾಸಿಗಳು, ಕಾಸರಗೋಡಿನ 4, ಕಾರ್ಕಳದ 1 ಮತ್ತು ಭಟ್ಕಳದ 1 ಪ್ರಕರಣ ಸೇರಿವೆ. ಅಲ್ಲದೆ ಪಾಸಿಟಿವ್ಗಳ ಪೈಕಿ 14 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಈಗಾಗಲೆ ಬಿಡುಗಡೆಗೊಂಡಿದ್ದರೆ, 14 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಪೈಕಿ 12 ಮಂದಿಯ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ. ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯುವಿನಿಂದ ಬಳಲುತ್ತಿರುವ ಕುಲಶೇಖರ ಸಮೀಪದ ಶಕ್ತಿನಗರದ 80 ವರ್ಷದ ವೃದ್ದೆಯ ಆರೋಗ್ಯ ಸ್ಥಿತಿ ನಾಜೂಕಾಗಿದೆ. ಮೆದುಳಿನ ಸೋಂಕು ಮತ್ತು ಕ್ಷಯ ರೋಗದಿಂದ ಬಳಲುತ್ತಿರುವ ಬೋಳೂರಿನ 58 ವರ್ಷ ಪ್ರಾಯದ ಮಹಿಳೆಯು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಸ್ಥಿತಿ ಗಂಭೀರವಾಗಿದೆ. ಎ.19ರಂದು ಮಹಿಳೆ ಮತ್ತು ಎ.24 ಹಾಗೂ ಎ.30ರಂದು ಇಬ್ಬರು ವೃದ್ಧೆಯರು ಮೃತಪಟ್ಟಿದ್ದಾರೆ.
ಬಿಡುಗಡೆ: ಪಾಸಿಟಿವ್ ಸಂಖ್ಯೆ 489ನೆ ರೋಗಿ ಗುಣಮುಖರಾಗಿ ಸೋಮವಾರ ವೆನ್ಲಾಕ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇವರು ದ.ಕ. ಜಿಲ್ಲೆಯಲ್ಲಿ ಕೊರೋನಕ್ಕೆ ಬಲಿಯಾದ ಮೂರನೆಯ ಮಹಿಳೆಯ ಮಗಳು.
1,151 ವಲಸೆ ಕಾರ್ಮಿಕರು ಉತ್ತರ ಪ್ರದೇಶಕ್ಕೆ ಪ್ರಯಾಣ: ದ.ಕ.ಜಿಲ್ಲೆಯ ವಿವಿಧ ಕಡೆ ಇದ್ದ ವಲಸೆ ಕಾರ್ಮಿಕರನ್ನು ಆಯಾ ತವರು ಜಿಲ್ಲೆಗೆ ಕಳಿಸಿಕೊಡುವ ಪ್ರಕ್ರಿಯೆ ಸೋಮವಾರವೂ ನಡೆದಿದ್ದು, ಒಟ್ಟು 1151 ವಲಸೆ ಕಾರ್ಮಿಕರನ್ನು ರೈಲು ಮೂಲಕ ಕಳುಹಿಸಿಕೊಡಲಾಯಿತು.







