ಬುಧವಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಏಕ ನ್ಯಾಯಾಧೀಶ ಪೀಠ ಅಸ್ತಿತ್ವಕ್ಕೆ

ಹೊಸದಿಲ್ಲಿ, ಮೇ 11: ಸರ್ವೋಚ್ಚ ನ್ಯಾಯಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬುಧವಾರದಿಂದ ಏಕ ನ್ಯಾಯಾಧೀಶ ಪೀಠವು ಅಸ್ತಿತ್ವಕ್ಕೆ ಬರಲಿದೆ. ಬಾಕಿಯಿರುವ ಪ್ರಕರಣಗಳ ವಿಲೇವಾರಿಗಾಗಿ ನೂತನ ವ್ಯವಸ್ಥೆ ಜಾರಿಗೊಳ್ಳಲಿದ್ದು,ಪೀಠವು ಜಾಮೀನು ಅರ್ಜಿಗಳ ವಿಚಾರಣೆಯನ್ನು ನಡೆಸಲಿದೆ.
ಸಾಮಾನ್ಯವಾಗಿ ಸರ್ವೋಚ್ಚ ನ್ಯಾಯಾಲಯದ ಪೀಠವು ಕನಿಷ್ಠ ಇಬ್ಬರು ನ್ಯಾಯಾಧೀಶರನ್ನು ಒಳಗೊಂಡಿರುತ್ತದೆ.
ಏಳು ವರ್ಷಗಳ ಜೈಲುಶಿಕ್ಷೆಯನ್ನು ಮೀರದ ದಂಡನೆಗೆ ಅರ್ಹ ಅಪರಾಧ ಪ್ರಕರಣಗಳಲ್ಲಿ ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳ ವಿಚಾರಣೆಯನ್ನು ಏಕಸದಸ್ಯ ನ್ಯಾಯಪೀಠವು ನಡೆಸಲಿದೆ. ಈ ಮೊದಲು ಇಂತಹ ಪ್ರಕರಣಗಳ ವಿಚಾರಣೆಯನ್ನು ದ್ವಿಸದಸ್ಯ ನ್ಯಾಯಪೀಠಗಳು ನಡೆಸುತ್ತಿದ್ದವು.
ಕಳೆದ ಸೆಪ್ಟೆಂಬರ್ನಲ್ಲಿ ಸರ್ವೋಚ್ಚ ನ್ಯಾಯಾಲಯವು ಜಾಮೀನು,ನಿರೀಕ್ಷಣಾ ಜಾಮೀನು ಮತ್ತು ವರ್ಗಾವಣೆ ಅರ್ಜಿಗಳ ವಿಚಾರಣೆಗೆ ಏಕ ನ್ಯಾಯಾಧೀಶರಿಗೆ ಅವಕಾಶ ಕಲ್ಪಿಸಲು ತನ್ನ ನಿಯಮಗಳಿಗೆ ತಿದ್ದುಪಡಿಯನ್ನು ತಂದಿತ್ತು.
ಕಾನೂನು ಸಚಿವಾಲಯದ ಅಂಕಿಅಂಶಗಳಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಕಳೆದ ವರ್ಷದ ಜುಲೈವರೆಗೆ 11.5 ಲಕ್ಷಕ್ಕೂ ಅಧಿಕ ಪ್ರಕರಣಗಳು ಬಾಕಿಯಿದ್ದವು. ಕೊರೋನ್ ವೈರಸ್ ಲಾಕ್ಡೌನ್ ಮಧ್ಯೆ ಸರ್ವೋಚ್ಚ ನ್ಯಾಯಾಲಯವು ಅತ್ಯಂತ ತುರ್ತು ವಿಚಾರಣೆಗಳನ್ನು ಮಾತ್ರ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸುತ್ತಿದೆ.







