ಭಾರತದಲ್ಲಿ ಲಾಕ್ಡೌನ್ ಯಶಸ್ವಿಯಾಗಬೇಕಾದರೆ ಮೂಲ ಆದಾಯ ಯೋಜನೆ ಅಗತ್ಯ: ಫ್ರಾನ್ಸ್ ಅರ್ಥಶಾಸ್ತ್ರಜ್ಞ
![ಭಾರತದಲ್ಲಿ ಲಾಕ್ಡೌನ್ ಯಶಸ್ವಿಯಾಗಬೇಕಾದರೆ ಮೂಲ ಆದಾಯ ಯೋಜನೆ ಅಗತ್ಯ: ಫ್ರಾನ್ಸ್ ಅರ್ಥಶಾಸ್ತ್ರಜ್ಞ ಭಾರತದಲ್ಲಿ ಲಾಕ್ಡೌನ್ ಯಶಸ್ವಿಯಾಗಬೇಕಾದರೆ ಮೂಲ ಆದಾಯ ಯೋಜನೆ ಅಗತ್ಯ: ಫ್ರಾನ್ಸ್ ಅರ್ಥಶಾಸ್ತ್ರಜ್ಞ](https://www.varthabharati.in/sites/default/files/images/articles/2020/05/12/243417-1589304695.jpg)
ಹೊಸದಿಲ್ಲಿ: ಭಾರತದಲ್ಲಿ ಲಾಕ್ಡೌನ್ ನಿಜ ಅರ್ಥದಲ್ಲಿ ಯಶಸ್ವಿಯಾಗಬೇಕಾದರೆ ದೇಶ ಮೂಲ ಆದಾಯ ಯೋಜನೆಯನ್ನು ಆರಂಭಿಸುವುದು ಅಗತ್ಯ ಎಂದು ಫ್ರಾನ್ಸ್ನ ಅರ್ಥಶಾಸ್ತ್ರಜ್ಞ ಥಾಮಸ್ ಪೆಕೆಟ್ಟಿ ಹೇಳಿದ್ದಾರೆ.
ಭಾರತ ಅಸಮಾನತೆಯ ಸಮಸ್ಯೆಯನ್ನು ನಿವಾರಿಸಲು ಯಶಸ್ವಿಯಾದಲ್ಲಿ 21ನೇ ಶತಮಾನದ ಜಾಗತಿಕ ಪ್ರಜಾಸತ್ತಾತ್ಮಕ ನಾಯಕ ರಾಷ್ಟ್ರವಾಗಿ ಬೆಳೆಯುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿ ಕೊರೋನ ವೈರಸ್ ಸೋಂಕು ಹರಡದಂತೆ ತಡೆಯುವ ಸಲುವಾಗಿ ಸರ್ಕಾರ ಮಾರ್ಚ್ 25ರಿಂದ ಲಾಕ್ಡೌನ್ ಘೋಷಿಸಿದೆ.
“ನನ್ನ ಪ್ರಕಾರ, ಸರ್ಕಾರಕ್ಕೆ ಮೂಲ ಆದಾಯ ಯೋಜನೆ ಆರಂಭಿಸುವಂತೆ ಸಲಹೆ ಮಾಡುವುದು ಉತ್ತಮ. ಜತೆಗೆ ದೇಶದಲ್ಲಿ ಸುರಕ್ಷಾ ಜಾಲವನ್ನು ಅಭಿವೃದ್ಧಿಪಡಿಸುವುದೂ ಅಗತ್ಯ. ಆದಾಯ ನಿರ್ವಹಣೆ ಇಲ್ಲದೇ ಲಾಕ್ಡೌನ್ ಹೇಗೆ ಕಾರ್ಯನಿರ್ವಹಿಸಬಲ್ಲದು ಎಂದು ನನಗೆ ತಿಳಿಯತ್ತಿಲ್ಲ” ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದರು.
ಆಸಕ್ತಿದಾಯಕ ವಿಚಾರವೆಂದರೆ 2016-17ರ ಆರ್ಥಿಕ ಸಮೀಕ್ಷೆಯಲ್ಲಿ ಕೂಡಾ ಸಾರ್ವತ್ರಿಕ ಮೂಲ ಆದಾಯದ ಕಲ್ಪನೆಯನ್ನು ಪ್ರಸ್ತಾಪಿಸಲಾಗಿದೆ. ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯನ್ ಈ ಸಲಹೆ ಮುಂದಿಟ್ಟಿದ್ದರು.
ಪೆಕೆಟ್ಟಿ ಕೂಡಾ ಸಂಪತ್ತು ತೆರಿಗೆ ಹಾಗೂ ಪಿತ್ರಾರ್ಜಿತ ತೆರಿಗೆ ಸೇರಿದಂತೆ ಹೆಚ್ಚು ಸಮತೋಲಿತ ಹಾಗೂ ಪ್ರಗತಿಪರ ತೆರಿಗೆ ಪದ್ಧತಿಯನ್ನು ಆರಂಭಿಸುವಂತೆ ಸಲಹೆ ಮಾಡಿದ್ದಾರೆ. ದೇಶದಲ್ಲಿ ಮೀಸಲಾತಿ ವ್ಯವಸ್ಥೆಗೆ ನೀಡಿದಷ್ಟು ಗಮನವನ್ನು, ಭೂಸುಧಾರಣೆ ಮತ್ತು ಆಸ್ತಿಗಳ ಮರುಹಂಚಿಕೆಯಂಥ ಇತರ ವಿಷಯಗಳಿಗೆ ನೀಡಿಲ್ಲ. ಸೂಕ್ತ ಶಿಕ್ಷಣ, ಮೂಲಸೌಕರ್ಯ ಮತ್ತು ಆರೋಗ್ಯ ಹೂಡಿಕೆ ಕೂಡ ಅಸಮರ್ಪಕ. ಹೆಚ್ಚು ಸಮಾನ ಹಾಗೂ ಪ್ರಗತಿಪರ ತೆರಿಗೆ ವ್ಯವಸ್ಥೆ ಮೂಲಕ ಇದನ್ನು ಸರಿಪಡಿಸಬೇಕು ಎಂದು ಹೇಳಿದ್ದಾರೆ.
ತಮ್ಮ ಇತ್ತೀಚಿನ ಕ್ಯಾಪಿಟಲ್ ಆ್ಯಂಡ್ ಐಡಿಯಾಲಜಿ ಎಂಬ ಕೃತಿಯಲ್ಲಿ ಪಿಕೆಟ್ಟಿ, ಕೋವಿಡ್-19 ಸಾಂಕ್ರಾಮಿಕವು ಅಸಮಾನತೆಯ ಮೇಲೆ ತದ್ವಿರುದ್ಧ ಪರಿಣಾಮವನ್ನು ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ಒಂದೆಡೆ ಆರೋಗ್ಯ, ಮೂಲಸೌಕರ್ಯ ಮತ್ತು ಶಿಕ್ಷಣ ಕ್ಷೇತ್ರದ ಕಾನೂನುಬದ್ಧ ನೆರವನ್ನು ಹೆಚ್ಚಿಸುತ್ತದೆ. ಆದರೆ ಇನ್ನೊಂದೆಡೆ, ಇದು ಆಗಂತುಕರ ಭೀತಿಯನ್ನು ಹೆಚ್ಚಿಸುತ್ತದೆ ಹಾಗೂ ಪ್ರತ್ಯೇಕತೆಯ ಸಂಘರ್ಷಗಳ ಬಗೆಗಿನ ಪ್ರವೃತ್ತಿಗಳು ಹೆಚ್ಚಲು ಕಾರಣವಾಗುತ್ತದೆ ಎಂದು ಅವರು ವಿಶ್ಲೇಷಿಸಿದ್ದರು.