ಕೋವಿಡ್-19 ವಿವಾದದ ನಡುವೆಯೇ ಪ.ಬಂ.ಆರೋಗ್ಯ ಕಾರ್ಯದರ್ಶಿ ವರ್ಗ
ಹೊಸದಿಲ್ಲಿ,ಮೇ 12: ಪ.ಬಂಗಾಳ ಸರಕಾರವು ಆರೋಗ್ಯ ಕಾರ್ಯದರ್ಶಿ ವಿವೇಕ್ ಕುಮಾರ್ ಅವರನ್ನು ಪರಿಸರ ಇಲಾಖೆಗೆ ವರ್ಗಾವಣೆಗೊಳಿಸಿದ್ದು,ಅವರ ಸ್ಥಾನಕ್ಕೆ ಸಾರಿಗೆ ಕಾರ್ಯದರ್ಶಿ ನಾರಾಯಣ ಸ್ವರೂಪ ನಿಗಮ್ ಅವರನ್ನು ನಿಯೋಜಿಸಿ ಸೋಮವಾರ ಅಧಿಸೂಚನೆಯನ್ನು ಹೊರಡಿಸಿದೆ. ರಾಜ್ಯದ ಕೋವಿಡ್-19 ಅಂಕಿಅಂಶಗಳ ಕುರಿತು ವಿವಾದವೊಂದು ಸೃಷ್ಟಿಯಾದ ಕೆಲವೇ ದಿನಗಳಲ್ಲಿ ಕುಮಾರ ಅವರ ವರ್ಗಾವಣೆ ನಡೆದಿದೆ.
ಪ.ಬಂಗಾಳದ ಕೋವಿಡ್-19 ಪರೀಕ್ಷೆಯ ಮಟ್ಟ ಮತ್ತು ದೇಶದಲ್ಲಿಯೇ ಅತ್ಯಧಿಕವಾಗಿರುವ ಅದರ ಸಾವಿನ ದರ (ಶೇ.13.2) ಸೇರಿದಂತೆ ಕೊರೋನ ವೈರಸ್ ಪಿಡುಗನ್ನು ನಿಭಾಯಿಸುತ್ತಿರುವ ರೀತಿಗಾಗಿ ಕೇಂದ್ರವು ಹಲವಾರು ಬಾರಿ ರಾಜ್ಯವನ್ನು ಟೀಕಿಸಿದೆ. ಕೊರೋನ ವೈರಸ್ ಸ್ಥಿತಿಯನ್ನು ಪರಿಶೀಲಿಸಲು ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರದ ತಂಡವು ಕಳಪೆ ಪರೀಕ್ಷಾ ವ್ಯವಸ್ಥೆ,ದುರ್ಬಲ ನಿಗಾ ಮತ್ತು ಪ್ರಕರಣಗಳನ್ನು ವರದಿ ಮಾಡುವಲ್ಲಿ ವ್ಯತ್ಯಾಸಗಳನ್ನು ತನ್ನ ವರದಿಯಲ್ಲಿ ಬೆಟ್ಟು ಮಾಡಿತ್ತು.
ರವಿವಾರ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ್ದ ಸಭೆಯಲ್ಲಿ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಕೇಂದ್ರವು ರಾಜಕೀಯ ನಡೆಸುತ್ತಿದೆ ಮತ್ತು ರಾಜ್ಯಗಳನ್ನು ಉಪೇಕ್ಷಿಸುತ್ತಿದೆ ಎಂದು ಆರೋಪಿಸಿದ್ದರು. ಕೊರೋನ ವೈರಸ್ ಪಿಡುಗಿನ ನಡುವೆ ಕೇಂದ್ರದ ಕೆಲವು ಕ್ರಮಗಳನ್ನು ಪ್ರಶ್ನಿಸಿ ಮೋದಿ,ಗೃಹಸಚಿವ ಅಮಿತ್ ಶಾ ಮತ್ತು ಅಧಿಕಾರಿಗಳ ವಿರುದ್ಧ ದಾಳಿ ನಡೆಸಿದ್ದರು.
ಲಾಕ್ಡೌನ್ ಸಡಿಲಿಸುವ ಮತ್ತು ರೈಲು ಸೇವೆಯನ್ನು ಪುನರಾರಂಭಿಸುವ ಕೇಂದ್ರದ ಉದ್ದೇಶಿತ ಯೋಜನೆಯನ್ನು ವಿರೋಧಿಸಿದ್ದ ಮುಖ್ಯಮಂತ್ರಿಗಳಲ್ಲಿ ಬ್ಯಾನರ್ಜಿ ಕೂಡ ಒಬ್ಬರಾಗಿದ್ದರು.
ಸೋಮವಾರದವರೆಗೆ ಪ.ಬಂಗಾಳದಲ್ಲಿ ಒಟ್ಟು 1,939 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು,118 ಜನರು ಮೃತಪಟ್ಟಿದ್ದಾರೆ. ಇತರ 72 ಸಾವುಗಳಿಗೆ ಇತರ ಕಾಯಿಲೆಗಳು ಕಾರಣವಾಗಿದ್ದು,ಕೋವಿಡ್-19 ಆನುಷಂಗಿಕವಾಗಿತ್ತಷ್ಟೇ ಎಂದು ಸರಕಾರವು ಹೇಳಿದೆ.