ಜುಲೈ 30, 31ರಂದು ಸಿಇಟಿ ಪರೀಕ್ಷೆ: ಡಾ.ಅಶ್ವತ್ಥನಾರಾಯಣ
ಶೀಘ್ರದಲ್ಲೇ ದ್ವಿತೀಯ ಪಿಯುಸಿ ಬಾಕಿ ಪರೀಕ್ಷೆ

ಬೆಂಗಳೂರು, ಮೇ 13: ಸಿಇಟಿ ಪರೀಕ್ಷೆಯನ್ನು ಜುಲೈ 30, 31ರಂದು ನಡೆಸಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಶೈಕ್ಷಣಿಕ ವರ್ಷ ಆರಂಭ ಆಗಲಿದೆ. ಮೇ 31ರ ಒಳಗೆ ಅನ್ ಲೈನ್ ಮೂಲಕ ಪಾಠಗಳನ್ನು ಮುಗಿಸಲು ಮಾಡಲು ಸೂಚನೆ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಖಾತೆ ಹೊಂದಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಇಟಿ ಪರೀಕ್ಷೆಯನ್ನು ನಿರಾತಂಕವಾಗಿ ನಡೆಸಲು ಬೇಕಾದ ಎಲ್ಲ ಕ್ರಮಗಳನ್ನು ಸರಕಾರ ಕೈಗೊಳ್ಳಲಿದೆ ಎಂದು ತಿಳಿಸಿರುವ ಡಿಸಿಎಂ ಅವರು, ಕೊರೋನ ಹಿನ್ನೆಲೆಯಲ್ಲೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗುವುದು. ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ ಸೇರಿದಂತೆ ಅಗತ್ಯ ಕ್ರಮಗಳನ್ನು ತಪ್ಪದೇ ಕೈಗೊಳ್ಳಲಾಗುವುದು, ಕೊಠಡಿಗಳಲ್ಲಿ ಕಡಿಮೆ ವಿದ್ಯಾರ್ಥಿಗಳು ಇರುತ್ತಾರೆ, ಪರೀಕ್ಷಾ ಕೇಂದ್ರಗಳೂ ಹೆಚ್ಚಾಗಲಿವೆ. ಎಂದಿನಂತೆ ಆಫ್ಲೈನ್ನಲ್ಲಿ ಈ ಪರೀಕ್ಷೆ ನಡೆಯಲಿದೆ ವಿದ್ಯಾರ್ಥಿಗಳು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಧೈರ್ಯ ತುಂಬಿದ್ದಾರೆ.
ರಾಜ್ಯದಲ್ಲಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ವ್ಯಾಸಂಗ ಮಾಡಲಿರುವ ವಿದ್ಯಾರ್ಥಿಗಳಿಗಾಗಿ ಸರಕಾರ ಆರಂಭಿಸಿರುವ GetCETgo ಆನ್ಲೈನ್ ಕೋಚಿಂಗ್ ತರಗತಿಗಳು ಬಹಳಷ್ಟು ಉತ್ತಮ ಪರಿಣಾಮ ಬೀರಿವೆ. CET ಮತ್ತು NEET ಪರೀಕ್ಷೆ ಬರೆಯುವ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಇದರಿಂದ ಬಹಳಷ್ಟು ಉಪಯೋಗವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ದ್ವಿತೀಯ ಪಿಯುಸಿಯಲ್ಲಿ ಬಾಕಿ ಇರುವ ಒಂದು ಪರೀಕ್ಷೆಯನ್ನು ಆದಷ್ಟು ಬೇಗ ನಡೆಸಲಾಗುವುದು ಎಂದವರು ತಿಳಿಸಿದರು.
ಕಳೆದ ಎಪ್ರಿಲ್ 20ರಂದು ಆರಂಭವಾದ GetCETgo ಆನ್ಲೈನ್ ಕೋಚಿಂಗ್ ತರಗತಿಗಳು ತರಬೇತಿಯಿಂದ ಸುಮಾರು 1.69 ಲಕ್ಷ ವಿದ್ಯಾರ್ಥಿಗಳು ಈ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಇದುವರೆಗೂ 55,000 ಮಂದಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಲಾಗಿದೆ. ಒಟ್ಟು 52,957 ವಿದ್ಯಾರ್ಥಿಗಳು ಈವರೆಗೆ ಟೆಸ್ಟ್ ತೆಗೆದುಕೊಂಡಿದ್ದಾರೆ. ಇದರಿಂದ ನಮ್ಮ ಪ್ರಯತ್ನಕ್ಕೆ ಸಾರ್ಥಕತೆ ಬಂದಿದೆ. ಆನ್ಲೈನ್ನಲ್ಲಿ ತರಬೇತಿ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ ಎಂದು ಡಿಸಿಎಂ ಸಂತಸ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಆಫ್ ಲೈನ್ ನಲ್ಲಿಯೂ ತರಬೇತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇಂಟರ್ನೆಟ್ ಸಮಸ್ಯೆಯನ್ನು ಗಮನದಲ್ಲಿ ಇಟ್ಟುಕೊಂಡು ಕಡಿಮೆ ಎಂಬಿಯಲ್ಲೂ ಅದು ಕೆಲಸ ಮಾಡುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ನಮ್ಮ ಟೆಕ್ನಿಕಲ್ ತಂಡವು ಕಾಲಕಾಲಕ್ಕೆ ಎಲ್ಲ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುತ್ತಿದೆ. ಗೂಗಲ್ ರಿವ್ಯೂದಲ್ಲಿ ಈ ಆ್ಯಪ್ಗೆ 4 ಸ್ಟಾರ್ ರೇಟಿಂಗ್ ಇರುವುದು ನಮ್ಮ ಕೆಲಸಕ್ಕೆ ಮತ್ತಷ್ಟು ಬಲ ತುಂಬಿದೆ ಎಂದು ಅವರು ಹೇಳಿದ್ದಾರೆ.
ಸಿಇಟಿ, ನೀಟ್ಗೆ ಅನುಕೂಲವಾಗುವ ವಿಡಿಯೋಗಳು, ಟೆಸ್ಟುಗಳು ಹಾಗೂ ಪಠ್ಯಗಳ ವಿವರಗಳು ಈ ಆನ್ಲೈನ್ ತರಬೇತಿಯಲ್ಲಿವೆ. ಈಗಾಗಲೇ ಕೋರ್ಸ್ ಆರಂಭವಾಗಿದ್ದು, 1,70,510 ಜನರು ಈ ಪೇಜ್ ನೋಡಿದ್ದಾರೆ. 77,983 ವಿದ್ಯಾರ್ಥಿಗಳು ಲಾಗಿನ್ ಆಗಿದ್ದಾರೆ. 38 ಸಾವಿರ ವಿದ್ಯಾರ್ಥಿಗಳು ಆ್ಯಪ್ ಮೂಲಕ ಲಾಗಿನ್ ಆಗಿದ್ದಾರೆ. 38 ಸಾವಿರ ವಿದ್ಯಾರ್ಥಿಗಳು ವೆಬ್ ಪೋರ್ಟಲ್ ಮೂಲಕ ಲಾಗಿನ್ ಆಗಿದ್ದಾರೆ. ವಿದ್ಯಾರ್ಥಿಗಳಿಗೆ ಮತ್ತಷ್ಟು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಹಾಯವಾಣಿಯನ್ನು ಕೂಡ ಆರಂಭ ಮಾಡಲಾಗಿದೆ ಅವರು ಮಾಹಿತಿ ನೀಡಿದ್ದಾರೆ.
ಉಳಿದಂತೆ ಎಂಜಿನೀಯರಿಂಗ್ ಕಾಲೇಜ್ ಮತ್ತು ಪದವಿ ಕಾಲೇಜುಗಳ ಪಠ್ಯದ ಬಗ್ಗೆ ಈಗಾಗಲೇ ಕೆಲ ಮಹತ್ವದ ಸೂಚನೆಗಳನ್ನು ನೀಡಲಾಗಿದೆ. ಪಾಠಗಳನ್ನು ಆನ್ಲೈನ್ ಮೂಲಕ ಮೇ 31ರೊಳಗೆ ಮುಗಿಸಲು ತಿಳಿಸಲಾಗಿದೆ. ನಂತರ ಪರೀಕ್ಷೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸೀಟ್ ಬ್ಲಾಕಿಂಗ್ ದಂಧಗೆ ಕಡಿವಾಣ:
ಸಿಇಟಿ ಪರೀಕ್ಷೆ ಮೂಲಕ ಎಂಜಿನಿಯರಿಂಗ್ ನಲ್ಲಿ 40 ಸಾವಿರ ಸೀಟುಗಳು ಭರ್ತಿ ಆಗಲಿವೆ. ಸೀಟ್ ಬ್ಲಾಕಿಂಗ್, ಸೀಟ್ ಸರೆಂಡರ್ ದಂಧೆ ಬಗ್ಗೆ ಈಗಾಗಲೇ ತನಿಖಾ ತಂಡ ರಚಿಸಲಾಗಿದೆ. ವರದಿ ಕೈಸೇರಿದ ಬಳಿಕ ಕ್ರಮ ಕೈಗೊಳ್ಳಲು ಸಿದ್ದ ಇದ್ದೇವೆ. ಮಾಪ್ ಅಪ್ ರೌಂಡ್ ಗೆ ಮುನ್ನ ಸೀಟ್ ಸರೆಂಡರ್ ಮಾಡಿದರೆ ಸಮಸ್ಯೆ ತಪ್ಪುತ್ತದೆ ಎಂಬ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.
ಮೆಡಿಕಲ್ ಸೀಟ್ ಬ್ಲಾಕಿಂಗ್ ವಿಚಾರದಲ್ಲೂ ಸರಕಾರ ಕಠಿಣವಾಗಿ ವರ್ತಿಸಲಿದೆ. ಈ ಬಗ್ಗೆ ಈಗಾಗಲೇ ಸಮಿತಿ ರಚನೆ ಮಾಡಿ ವರದಿ ನೀಡಿದೆ. ವರದಿಯಲ್ಲಿ ಏನಿದೆ ಎಂಬುದನ್ನು ಈಗಿನ ಸಚಿವರು ನೋಡಿ ಕ್ರಮ ತೆಗೆದುಕೊಳ್ತಾರೆ. ಎಂಜಿನಿಯರಿಂಗ್ ಸೀಟ್ ಶುಲ್ಕ ಮಾಡಬೇಕು ಎಂದು ಮನವಿ ಬಂದಿದೆ. ಈ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ಮಾಡಿಲ್ಲ. ಇದು ಕೊರೊನಾ ಸಂದರ್ಭ ಆಗಿರುವುದರಿಂದ ಈ ಬಾರಿ ಅಡ್ಮಿಷನ್ ವಿಚಾರವೇ ದೊಡ್ಡದಾಗಲಿದೆ. ಹೀಗಾಗಿ ಶುಲ್ಕ ಹೆಚ್ಚಳದ ಬಗ್ಗೆ ವೈಜ್ಞಾನಿಕ ದೃಷ್ಟಿಯಿಂದ ಚಿಂತನೆ ಮಾಡಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೆಲ ಪ್ರಶ್ನೆಗಳಿಗೆ ಡಿಸಿಎಂ ಉತ್ತರ ನೀಡಿದ್ದಾರೆ







