ವಲಸೆ ಕಾರ್ಮಿಕರಿಗೆ ಆತಂಕ ಬೇಡ : ದ.ಕ. ಜಿಲ್ಲಾಧಿಕಾರಿ
ಮಂಗಳೂರು : ದ.ಕ. ಜಿಲ್ಲೆಯಿಂದ ಅಂತಾರಾಜ್ಯಕ್ಕೆ ಕಾರ್ಮಿಕರು ಹೋಗಬೇಕಾದರೆ ಆಯಾ ರಾಜ್ಯದವರೂ ಒಪ್ಪಿಗೆ ಕೊಡಬೇಕು. ಮಂಗಳೂರಿನಲ್ಲಿ ಜಾರ್ಖಂಡ್ ರಾಜ್ಯದವರು ತುಂಬಾ ಮಂದಿ ಇದ್ದಾರೆ. ಆದರೆ ಅಲ್ಲಿನ ಸರಕಾರದಿಂದ ಒಪ್ಪಿಗೆ ಬಂದಿರಲಿಲ್ಲ. ಇದೀಗ ರಾಜ್ಯ ಸರಕಾರ, ಅಲ್ಲಿನ ಸರಕಾರ ಜೊತೆ ಮಾತುಕತೆ ನಡೆಸುತ್ತಿದೆ. ಒಂದು ರೈಲಿನಲ್ಲಿ 1,460 ಜನ ಮಾತ್ರ ಹೋಗಲು ಸಾಧ್ಯ. ಹೀಗಾಗಿ ಅಂತಾರಾಜ್ಯಕ್ಕೆ ತೆರಳಲು ನೋಂದಣಿ ಮಾಡಿದವರನ್ನು ಆಯಾ ರಾಜ್ಯಗಳಿಗೆ ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿದೆ. ಈ ಕಾರಣಕ್ಕಾಗಿ ವಲಸೆ ಕಾರ್ಮಿಕರು ಯಾರೂ ಕೂಡ ಹೆದರುವ ಅಗತ್ಯವಿಲ್ಲ ಹಾಗೂ ಸುಳ್ಳುಸುದ್ದಿಗಳನ್ನು ನಂಬಬೇಡಿ. ಹಂತ ಹಂತವಾಗಿ ಎಲ್ಲರನ್ನೂ ಕಳುಹಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನುಡಿದರು.
ದ.ಕ. ಜಿಲ್ಲೆಗೆ ಆಗಮಿಸಲು ಮಹಾರಾಷ್ಟ್ರ ಸಹಿತ ಬೇರೆ ರಾಜ್ಯದಿಂದ ಇಲ್ಲಿಯವರೆಗೆ 6,489 ಅರ್ಜಿ ಬಂದಿದ್ದು, ಅಂದಾಜು 25,000 ಮಂದಿ ಆಗಮಿಸುವ ಸಾಧ್ಯತೆಯಿದೆ. ಬರುವ ಎಲ್ಲರೂ ಕಡ್ಡಾಯಾವಾಗಿ ಜಿಲ್ಲಾಡಳಿತದ ಕ್ವಾರಂಟೈನ್ ಕೇಂದ್ರದಲ್ಲಿ 14 ದಿನ ಇರಬೇಕು. ಇದಕ್ಕಾಗಿ ಜಿಲ್ಲೆಯಲ್ಲಿ ಸುಮಾರು 10000 ರೂಂಗಳ ವ್ಯವಸ್ಥೆಯಿದ್ದು, ಖಾಸಗಿ ಹೊಟೇಲ್ಗಳನ್ನೂ ನಿಗದಿಪಡಿಸಲಾಗಿದೆ. ಹಂತ ಹಂತವಾಗಿ ಹೊರ ರಾಜ್ಯದವರನ್ನು ಇಲ್ಲಿಗೆ ಕರೆಸಿಕೊಳ್ಳಲಾಗುತ್ತದೆ. ಈ ನಿಯಮ ಬಂದ ಮೇಲೆ 25 ಮಂದಿ ಈಗ ಕ್ವಾರಂಟೈನ್ನಲ್ಲಿದ್ದಾರೆ ಎಂದರು.
ದ.ಕ.ದಲ್ಲಿ 40,510 ವಲಸೆ ಕಾರ್ಮಿಕರು
ದ.ಕ. ಜಿಲ್ಲೆಯಲ್ಲಿ 40,510 ವಲಸೆ ಕಾರ್ಮಿಕರಿದ್ದು, ಅವರು ‘ಸೇವಾ ಸಿಂಧೂ’ ಆ್ಯಪ್ ಮೂಲಕ ಹೊರರಾಜ್ಯಕ್ಕೆ ತೆರಳಲು ನೋಂದಣಿ ಮಾಡಿದ್ದಾರೆ. ಬಿಹಾರದ 7,589 ಮಂದಿ, ಜಾರ್ಖಂಡ್ನ 7,976, ಉತ್ತರಪ್ರದೇಶದ 9,700, ಪಶ್ಚಿಮ ಬಂಗಾಳದ 4,609 ಮಂದಿಯಿದ್ದು, ಈ ಪೈಕಿ ಉತ್ತರ ಪ್ರದೇಶದ 6,000, ಬಿಹಾರದ 4,200, ಜಾರ್ಖಂಡ್ನ 1,148 ಮಂದಿ 8 ರೈಲುಗಳ ಮೂಲಕ ಈಗಾಗಲೇ ದ.ಕ. ಜಿಲ್ಲೆಯಿಂದ ತೆರಳಿದ್ದಾರೆ. ದ.ಕ. ಜಿಲ್ಲೆಯಲ್ಲಿದ್ದ ಬಾಗಲಕೋಟೆ, ಗದಗ, ವಿಜಯಪುರ ಸೇರಿದಂತೆ 25 ಜಿಲ್ಲೆಗಳ 12,970 ಮಂದಿ 500 ಬಸ್ಗಳ ಮೂಲಕ ತೆರಳಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.







