ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ ಬರುವ ನಾಗರಿಕರಿಗೆ ಬೆಳಗಾವಿ ಗಡಿಯಲ್ಲಿ ಸಹಾಯಕೇಂದ್ರ : ಡಿಸಿ
ಉಡುಪಿ, ಮೇ 13: ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ ಬರುವ ಸಾರ್ವಜನಿಕರಿಗೆ ರಾಜ್ಯಕ್ಕೆ ಪ್ರವೇಶಿಸಲು ಅಗತ್ಯ ನೆರವು ನೀಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ಸೂಚನೆಯಂತೆ ಉಡುಪಿಯಿಂದ ತೆರಳಿರುವ ಅಧಿಕಾರಿಗಳ ತಂಡ, ಬೆಳಗಾವಿ ಗಡಿಭಾಗ ವಾದ ನಿಪ್ಪಾಣಿಯಲ್ಲಿ ತೆರೆದಿರುವ ಸಹಾಯಕೇಂದ್ರದಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ.
ಮಹಾರಾಷ್ಟ್ರದಿಂದ ಬರುವ ಜಿಲ್ಲೆಯ ನಾಗರಿಕರ ಉಡುಪಿ ಜಿಲ್ಲೆಯ ವಿಳಾಸದ ಕುರಿತು ಪರಿಶೀಲನೆ ನಡೆಸಿ ಅದನ್ನು ದೃಢೀಕರಿಸಿ, ಅವರು ರಾಜ್ಯ ಪ್ರವೇಶಿಸಲು ಸಹಾಯ ಮಾಡುವುದು ಮಾತ್ರವಲ್ಲದೇ ಉಡುಪಿ ಜಿಲ್ಲೆಗೆ ಆಗಮಿಸಿದ ನಂತರದ ಇಲ್ಲಿನ ಕ್ವಾರಂಟೈನ್ ಕ್ರಮಗಳು, ಜಿಲ್ಲಾಡಳಿತ ಒದಗಿಸುವ ಸೌಲಭ್ಯಗಳು ಮತ್ತಿತರ ಅಗತ್ಯ ಮಾಹಿತಿಗಳನ್ನು ಸಹ ಇಲ್ಲಿ ನೀಡಲಾಗುತ್ತದೆ.
ಈ ಮೂಲಕ ಜಿಲ್ಲೆಗೆ ಬರುವ ನಾಗರಿಕರ ಅನಗತ್ಯ ಆತಂಕವನ್ನು ದೂರ ಮಾಡಿ, ನಿರಾಳವಾಗಿ ಜಿಲ್ಲೆ ತಲುಪಲು ಬೇಕಾದ ವ್ಯವಸ್ಥೆಯನ್ನು ಮಾಡಲಾ ಗುತ್ತದೆ. ಅಲ್ಲದೇ ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ಸಾರ್ವಜನಿಕರ ಸಂಪೂರ್ಣ ವಿವರಗಳನ್ನು ಅವರು ಜಿಲ್ಲೆ ತಲುಪುವ ಮೊದಲೇ ಜಿಲ್ಲಾಡಳಿತಕ್ಕೆ ತಲುಪಿಸಲಾಗುತ್ತಿದೆ.
ಈ ತಂಡ ಕಾರ್ಯ ನಿರ್ವಹಿಸುವ ಮೊದಲು, ರಾಜ್ಯದ ಗಡಿ ಪ್ರವೇಶಿಸಲು ಅನೇಕ ಸಮಸ್ಯೆ ಎದುರಿಸುತ್ತಿದ್ದ ಜಿಲ್ಲೆಯ ಸಾರ್ವಜನಿಕರು ಈಗ ಸುಗಮವಾಗಿ ಆಗಮಿಸುತ್ತಿದ್ದು, ಪ್ರಸ್ತುತ ಪ್ರತಿನಿತ್ಯ ಸರಾಸರಿ 600 ಮಂದಿ ಉಡುಪಿ ಜಿಲ್ಲೆಯ ನಾಗರಿಕರು ಮುಂಬೈ ಸೇರಿದಂತೆ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ನಿಪ್ಪಾಣಿ ಗಡಿಗೆ ಆಗಮಿಸುತ್ತಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯ ಪ್ರವೇಶಿಸಿ, ಉಡುಪಿ ಜಿಲ್ಲೆಗೆ ಆಗಮಿಸಲು ಈ ತಂಡದ ಮೂಲ ಅಗತ್ಯ ನೆರವು ನೀಡಲಾಗುತ್ತಿದೆ.
ಈ ತಂಡದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಮತ್ತು ಸಹಾಯಕರಾಗಿ ಜಿಲ್ಲಾ ನಗರಾಭಿವೃಧ್ದಿ ಕೋಶದ ಕಾಶೀನಾಥ್ ಕಾರ್ಯ ನಿರ್ವಹಿಸುತ್ತಿದ್ದಾರೆ.







