ತೀವ್ರ ವಿರೋಧದ ನಡುವೆಯೇ ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಜಾರಿಗೆ ಸಂಪುಟ ಅಸ್ತು

ಬೆಂಗಳೂರು, ಮೇ 14: ರೈತ ಸಂಘಟನೆಗಳು, ಕಾಂಗ್ರೆಸ್-ಜೆಡಿಎಸ್ ಸೇರಿದಂತೆ ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೇ ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಜಾರಿಗೊಳಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದ್ದು, ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ಕೋರಿ ರಾಜ್ಯಪಾಲರಿಗೆ ಕಳುಹಿಸಲು ನಿರ್ಧರಿಸಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಗೆ ಅಂಕಿತ ಹಾಕದೆ ರಾಜ್ಯಪಾಲರು ಹಿಂದಕ್ಕೆ ಕಳುಹಿಸಿದ್ದಾರೆಂಬುದು ಸತ್ಯಕ್ಕೆ ದೂರ. ಸಚಿವ ಸಂಪುಟದಲ್ಲಿ ಚರ್ಚಿಸಿಲ್ಲ ಎಂಬ ಕಾರಣಕ್ಕೆ ಅವರು ತಡೆ ಹಿಡಿದಿದ್ದರು. ಇದೀಗ ಸಂಪುಟದಲ್ಲಿ ಕಾಯ್ದೆ ಬಗ್ಗೆ ಚರ್ಚಿಸಲಾಗಿದೆ. ಕೇಂದ್ರದ ಕಾಯ್ದೆಯನ್ನು ಮಾದರಿಯನ್ನಾಗಿ ಇಟ್ಟುಕೊಂಡು ರಾಜ್ಯದಲ್ಲಿ ಹೊಸ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಾಗುತ್ತಿದೆ.
ಪ್ರಧಾನಿ ಮೋದಿಯವರ ಆಶಯದಂತೆ 2020ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಹಾಗೂ ರೈತರ ಉತ್ಪನ್ನಗಳ ಮಾರಾಟ ಮಾಡಲು ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಈ ಕಾಯ್ದೆ ತಿದ್ದುಪಡಿ ಅನುಕೂಲವಾಗಲಿದೆ. ರೈತ ತನ್ನ ಉತ್ಪನ್ನಗಳನ್ನು ಎಪಿಎಂಸಿ ಮತ್ತು ಹೊರಗೆ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಹೆಚ್ಚಿನ ಬೆಲೆಗೆ ಖಾಸಗಿ ವ್ಯಕ್ತಿಗಳಿಗೂ ಮಾರಾಟ ಮಾಡುವ ಸ್ವಾತಂತ್ರ್ಯ ಸಿಗಲಿದೆ ಎಂದರು.
ರೈತರ ಹಿತರಕ್ಷಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ತಿದ್ದುಪಡಿ ಸುಗ್ರೀವಾಜ್ಞೆ ರೂಪಿಸಲಾಗಿದೆ. ರೈತನಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ. ತೂಕ ಮತ್ತು ಯಾವುದೇ ಹಣಕಾಸಿನ ವಂಚನೆಯಾಗಲು ಅವಕಾಶವಿಲ್ಲ. ಈ ಬಗ್ಗೆಯೂ ರಾಜ್ಯ ಮಟ್ಟದ ಸಮಿತಿ ನಿಯಂತ್ರಿಸಲಿದೆ ಎಂದ ಅವರು, ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಅಧಿವೇಶನ ಕರೆಯಲು ಸಾಧ್ಯವಿಲ್ಲ. ಹೀಗಾಗಿ ಸುಗ್ರೀವಾಜ್ಞೆ ಜಾರಿ ಅನಿವಾರ್ಯವಾಗಿದೆ ಎಂದರು.
ಕೃಷಿ ಉತ್ಪನ್ನಗಳಿಗೆ ಆರ್ಥಿಕ ನೆರವು: ಕೊರೋನ ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರೈತರು ಮತ್ತು ಅವರ ಕೃಷಿ ಉತ್ಪನ್ನಗಳಿಗೂ ರಾಜ್ಯ ಸರಕಾರ ನೆರವು ಘೋಷಿಸಿದ್ದು, ಈಗಾಗಲೇ ಪ್ರಕಟಿಸಿದ 1,610 ಕೋಟಿ ರೂ.ಗಳ ಜೊತೆಗೆ ಹೆಚ್ಚುವರಿಯಾಗಿ 162 ಕೋಟಿ ರೂ.ಗಳನ್ನು ಪ್ರಕಟಿಸಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.
ರಾಜ್ಯದಲ್ಲಿ 50,083 ಹೆಕ್ಟೇರ್ ಅಲ್ಲಿ ತರಕಾರಿ ಬೆಳೆದ ರೈತರಿಗೆ ಮತ್ತು 41,054 ಹೆಕ್ಟೇರ್ ನಲ್ಲಿ ಹಣ್ಣುಗಳನ್ನು ಬೆಳೆದ ರೈತರಿಗೆ ಪ್ರತಿ ಹೆಕ್ಟೇರ್ ಗೆ 15 ಸಾವಿರ ರೂ. ಪರಿಹಾರ ವಿತರಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಒಟ್ಟು 137 ಕೋಟಿ ರೂ. ಪರಿಹಾರ ನೀಡಲಾಗುವುದು ಎಂದು ಮಾಧುಸ್ವಾಮಿ ವಿವರ ನೀಡಿದರು.
ದಾಕ್ಷಿ, ಬಾಳೆ, ಪಪ್ಪಾಯಿ, ಅನಾನಸ್, ಕಲ್ಲಂಗಡಿ ಮತ್ತು ಕರ್ಬೂಜ, ಬೋರೆ, ಮತ್ತು ಬೆಣ್ಣೆಹಣ್ಣು ಮತ್ತು ತರಕಾರಿಗಳ ಪೈಕಿ ಹಸಿರು ಮೆಣಸಿನಕಾಯಿ, ಟಮೋಟೋ, ಹೂ ಕೋಸು, ಎಲೆ ಕೋಸು, ಸಿಹಿಗುಂಬಳ, ಬೂದುಗುಂಬಳ, ಕ್ಯಾರೆಟ್, ಈರುಳ್ಳಿ, ಸೊಪ್ಪು, ಹೀರೆಕಾಯಿ ಮತ್ತು ತೊಂಡೆಕಾಯಿಗೆ ಪರಿಹಾರ ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಜತೆಗೆ ಪ್ರಸ್ತುತ ಒಂದು ಬಾರಿಗೆ ಈ ಪರಿಹಾರ ಸೌಲಭ್ಯವನ್ನು ರಾಜ್ಯದಲ್ಲಿನ 1.25 ಲಕ್ಷ ವಿದ್ಯುತ್ ಚಾಲಿತ ಘಟಕಗಳಿಗೂ ವಿಸ್ತರಿಸಲಾಗುವುದು. ಇದರ ಪ್ರಕಾರ ಪ್ರತಿ ವಿದ್ಯುತ್ ಚಾಲಿತ ಘಟಕಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ತಲಾ 2 ಸಾವಿರ ರೂ.ನಂತೆ ಒಟ್ಟು 25 ಕೋಟಿ ರೂ. ಒದಗಿಸಲಾಗುವುದು ಎಂದು ಮಾಧುಸ್ವಾಮಿ ಮಾಹಿತಿ ನೀಡಿದರು.







