ವೈದ್ಯಕೀಯ ಪ್ರಮಾಣ ಪತ್ರಕ್ಕಾಗಿ ಸುರಕ್ಷಿತ ಅಂತರ ಮರೆತು ಮುಗಿಬಿದ್ದ ಬಿಎಂಟಿಸಿ ಸಿಬ್ಬಂದಿ
ಬೆಂಗಳೂರು, ಮೇ 16: ಬಿಎಂಟಿಸಿ ಎಲ್ಲ ನೌಕರರು ಮೇ 18ರಿಂದ ಕೆಲಸಕ್ಕೆ ಹಾಜರಾಗುವಾಗ ವೈದ್ಯಕೀಯ ಪ್ರಮಾಣ ಪತ್ರ ಕಡ್ಡಾಯ ಎಂಬ ಸೂಚನೆಯ ಹಿನ್ನೆಲೆ, ನೌಕರರು ವೈದ್ಯಕೀಯ ಪ್ರಮಾಣ ಪತ್ರ ಪಡೆಯಲು ಸುರಕ್ಷಿತ ಅಂತರ ಮರೆತು ಮುಗಿಬಿದ್ದ ಘಟನೆ ಕೆಂಗೇರಿಯಲ್ಲಿ ನಡೆದಿದೆ.
ಬಿಎಂಟಿಸಿ ತನ್ನ ಎಲ್ಲ ಸಿಬ್ಬಂದಿಗಳಿಗೆ ಮೇ 17ಕ್ಕೆ ಲಾಕ್ಡೌನ್ ಮುಕ್ತಾಯಗೊಳ್ಳಲಿದೆ, ಮೇ 18ಕ್ಕೆ ಎಲ್ಲ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶವನ್ನು ನೀಡಿತ್ತು. ಇದರ ಜೊತೆಗೆ ವೈದ್ಯಕೀಯ ಪ್ರಮಾಣ ಪತ್ರವನ್ನು ಸಿಬ್ಬಂದಿಗಳು ಕಡ್ಡಾಯವಾಗಿ ಸಲ್ಲಿಸುವಂತೆ ತಿಳಿಸಿತ್ತು.
ಆದ್ದರಿಂದ ಕೆಂಗೇರಿಯ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ವೈದ್ಯಕೀಯ ತಪಾಸಣೆ ನಡೆಸಿ, ಪ್ರಮಾಣ ಪತ್ರ ನೀಡುವ ಕಾರ್ಯವನ್ನು ಇಲಾಖೆ ಹಮ್ಮಿಕೊಂಡಿತ್ತು. ಸತತ ನಾಲ್ಕು ದಿನಗಳಿಂದ ವೈದ್ಯಕೀಯ ಪ್ರಮಾಣ ಪತ್ರ ನೀಡುವ ಕಾರ್ಯ ಕೂಡ ನಡೆಸಿದೆ. ಇಂದು ಸ್ಥಳಕ್ಕೆ ಆಗಮಿಸಿದ ನೂರಾರು ಬಿಎಂಟಿಸಿ ಸಿಬ್ಬಂದಿಗಳಲ್ಲಿ ಕೆಲವರು ಮಾಸ್ಕ್ ಧರಿಸಿದರೆ ಮತ್ತೆ ಕೆಲವರು ಮಾಸ್ಕ್ ಧರಿಸದೇ ಪ್ರಮಾಣ ಪತ್ರಕ್ಕಾಗಿ ಸರದಿ ಸಾಲಿನಲ್ಲಿ ನಿಂತಿದ್ದರು. ಇನ್ನೂ ಸರದಿ ಸಾಲಿನಲ್ಲಿ ಸುರಕ್ಷಿತ ಅಂತರವನ್ನೇ ಮರೆತ ಬಿಎಂಟಿಸಿ ಸಿಬ್ಬಂದಿಗಳು ಒಬ್ಬರಿಗೊಬ್ಬರು ಒತ್ತೊತ್ತಾಗಿ ನಿಂತು, ವೈದ್ಯಕೀಯ ಪ್ರಮಾಣ ಪತ್ರ ಪಡೆಯಲು ಮುಗಿಬಿದ್ದಿದ್ದರು ಎಂಬ ಆರೋಪ ಕೇಳಿಬಂದಿದೆ.