ಅನಿವಾಸಿ ಕನ್ನಡಿಗರ ಕ್ವಾರಂಟೈನ್ ವ್ಯವಸ್ಥೆಗೆ ಸರಕಾರಿ ಇಲಾಖೆಗಳು ಸ್ಪಂದಿಸಿಲ್ಲ: ವೆಲ್ಫೇರ್ ಪಾರ್ಟಿ ಆರೋಪ
ಮಂಗಳೂರು, ಮೇ 17 : ದುಬೈಯಿಂದ ಮೇ 12ರಂದು ಮಂಗಳೂರಿಗೆ ಪ್ರಥಮ ವಿಮಾನ ತಲುಪಿದೆ. ಆದರೆ ಇದರ ಬಗ್ಗೆ ಇಲ್ಲಿನ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು ತಮ್ಮ ಪ್ರಾದೇಶಿಕ ಘಟಕಗಳ ಮೂಲಕ ಕೊರೋನ ಲಕ್ಷಣ ಹೊಂದಿರುವ ಶಂಕಿತ ಮತ್ತು ಸೋಂಕಿತರನ್ನು ದ. ಕ. ಜಿಲ್ಲೆಯ ಎಲ್ಲಾ ಮಂದಿಗಳಿಗೆ ಅಥವಾ ಸಾಧ್ಯಂತ ಜನಗಳಿಗೆ ಕ್ವಾರಂಟೈನ್ ವ್ಯವಸ್ಥೆಗೆ ಸಜ್ಜುಗೊಳಿಸಲು ಬೇಕಾದ ಎಲ್ಲಾ ಅಗತ್ಯಗಳನ್ನು ಪೂರೈಸುವ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದಿತ್ತು. ಆದರೆ ಇತ್ಯಾದಿ ಎಲ್ಲಾ ಶ್ರಮಗಳಿಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ತೋರಿದ ನಿರ್ಲಕ್ಷ್ಯವೇ ಇತ್ತೀಚೆಗೆ ನಡೆದ ಅವಾಂತರಗಳಿಗೆ ಕಾರಣ ಎಂದು ವೆಲ್ಫೇರ್ ಪಾರ್ಟಿ ಜಿಲ್ಲಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ ಪ್ರಕಟಣೆಯಲ್ಲಿ ಆರೋಪಿಸಿದರು.
ಅಧಿಕಾರಿ ವರ್ಗಗಳ ಉಡಾಪೆ ವರ್ತನೆಯನ್ನು ಖಂಡಿಸುವುದಾಗಿ ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕೊರೋನ ಜಾಗೃತಿಯ ಅಂಗವಾಗಿ ಅವಶ್ಯವೆಂದು ಕಂಡ ಎಲ್ಲರಿಗೂ, ಕ್ವಾರಂಟೈನ್ ಗೆ ಬೇಕಾದ ಎಲ್ಲಾ ಅಗತ್ಯಗಳನ್ನೂ ವ್ಯವಸ್ಥಿತಗೊಳಿಸುವ ಬಗ್ಗೆ ವೆಲ್ಪೇರ್ ಪಾರ್ಟಿ ಮಾ. 25 ರಂದೇ ಸಂಬಂಧಿಸಿದಂತೆ, ಜಿಲ್ಲಾ ಆರೋಗ್ಯ ಅಧಿಕಾರಿಯನ್ನು ಸಂಪರ್ಕಿಸಿದೆಯೆಂದು ಹೇಳಿದರು. ಈ ಬಗ್ಗೆ ವಿವರಿಸಿದ ಅವರು, ನಾವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಯನ್ನು ಜನತಾ ಕರ್ಫ್ಯೂ ಘೋಷಣೆಯಾದ ಮೂರೇ ದಿನಗಳ ನಂತರ ಮಾತನಾಡಿದ್ದು, ಕ್ವಾರಂಟೈನ್ ಅಗತ್ಯತೆ ಹೊಂದಿರುವ ಯಾರೇ ಇದ್ದರೂ ಅವರಿಗೆ ತಂಗಲು ಬೇಕಾದ ವಸತಿ ಸೌಲಭ್ಯ ಮತ್ತು ಆಹಾರ ಮಾತ್ರವಲ್ಲ ಇನ್ನಿತರ ಅಗತ್ಯದ ಬೇಡಿಕೆಗಳನ್ನು ಸರಕಾರದ ಸಹಕಾರದೊಂದಿಗೆ, ಪೂರೈಸುವಲ್ಲಿ ಸಂಪೂರ್ಣ ಸಜ್ಜಾಗಿರುವ ತಂಡ ನಮ್ಮಲ್ಲಿರುವುದನ್ನು ತಿಳಿಸಿದ್ದೆವು ಎಂದ ಅವರು, ಅಂದಿನ ಚರ್ಚೆಯಲ್ಲಿ ನಾವು ಸೂಚಿಸಿದ ಕ್ವಾರಂಟಯಿನ್ ವ್ಯವಸ್ಥೆಯ ಕೇಂದ್ರಗಳ ಪೂರ್ಣ ವಿಳಾಸ ಹಾಗೂ ಇತರ ಮಾಹಿತಿಗಳನ್ನು ನೀಡಲು ಹೇಳಿದ್ದರು, ಆದ್ದರಿಂದ ನಾವು ಕೂಡಲೇ ಮಂಗಳೂರು, ಬಂಟ್ವಾಳ ಮತ್ತು ಪುತ್ತೂರು ತಾಲೂಕುಗಳಲ್ಲಿನ ನಮ್ಮ ಕೆಲವು ಶಿಕ್ಷಣ ಸಂಸ್ಥೆಗಳ ಮತ್ತು ನಮ್ಮಲ್ಲಿ ಒಪ್ಪಿಕೊಂಡಿದ್ದ ಇತರ ಕೆಲವು ಆಹಾರ ಮತ್ತು ವಸತಿ ವ್ಯವಸ್ಥೆಗಳನ್ನು ನೀಡಲು ಮುಂದಾದ ಒಟ್ಟು ಹತ್ತು ಕ್ವಾರಂಟೈನ್ ಕೇಂದ್ರಗಳ ಹೆಸರನ್ನು ಸೂಚಿಸಿದ್ದೆವು ಮಾತ್ರವಲ್ಲದೆ, ತಮ್ಮ (ಸರಕಾರಿ ನೋಡೆಲ್ ಅಧಿಕಾರಿಗಳ) ಮಾರ್ಗದರ್ಶನದಲ್ಲಿ ಅಲ್ಲಿಗೆ ಬೇಕಾದ ಪರಿಚಾರಕರ ಸಹಿತ ಸರ್ವಸಿದ್ಧತೆಗಳನ್ನು ನಮ್ಮ ಕಾರ್ಯಕರ್ತರ ಮೂಲಕ ನಾವೇ ಒದಗಿಸಿಕೊಡುವ ಭರವಸೆಯನ್ನು ನೀಡಿದ್ದೆವು. ಅಂದು, ಅದಕ್ಕೆ ಸಕರಾತ್ಮಕವಾಗಿಯೇ ಸ್ಪಂದಿಸಿದ್ದ ಅಧಿಕಾರಿ ವರ್ಗ ಮುಂದೆ ಯಾರ ಮತ್ತು ಯಾವ ಒತ್ತಡಕ್ಕೆ ಮಣಿದು ನಿರ್ಲಕ್ಷ್ಯತನರಾದರು ಎಂಬುವುದಾಗಿ ತಿಳಿದಿಲ್ಲ ಎಂದು ಸುಲೈಮಾನ್ ವಿಷಾದ ವ್ಯಕ್ತಪಡಿಸಿದರು.
ಒಂದು ವೇಳೆ ಕ್ವಾರೆಂಟೈನ್ಗೆ ಪ್ರತಿಯೊಂದು ಕೊಠಡಿಗೂ ಶೌಚಾಲಯ ಹೊಂದಿಕೊಂಡಿರುವಂತಹದ್ದು ಆಗಬೇಕೆಂದಿದ್ದರೆ ಅದನ್ನು ಸ್ವಲ್ಪ ಮುಂಚಿತವಾಗಿ ಜಿಲ್ಲಾಡಳಿತಕ್ಕೆ ಸೂಚಿಸಬಹುದಿತ್ತು. ಇದನ್ನೆಲ್ಲಾ ಸ್ವಲ್ಪ ಮುಂದಾಲೋಚನೆಯಿಂದ ಜಿಲ್ಲಾಡಳಿತ ಮಾಡುತ್ತಿದ್ದರೆ ಮೊನ್ನೆ ವಿಮಾನ ನಿಲ್ದಾಣದಲ್ಲಿ ಇಂತಹ ಗೊಂದಲವೇರ್ಪಡುತ್ತಿರಲಿಲ್ಲ ಮಾತ್ರವಲ್ಲ ಅಷ್ಟೊಂದು ಸಮಯ ಪ್ರಯಾಣಿಕರನ್ನು ಕಾದು ಸುಸ್ತಾಗಿಸುವ ಪರಿಸ್ಥಿತಿ ಬರುತ್ತಿರಲಿಲ್ಲ. ಒಟ್ಟಿನಲ್ಲಿ ಕೆಲವು ವಿಷಯಗಳಲ್ಲಿ ಸರಕಾರದ ದ್ವಿಮುಖ ನೀತಿ ಮತ್ತು ಮಲತಾಯಿ ಧೋರಣೆ ಖಂಡನಾರ್ಹವಾಗಿದ್ದು, ದೇಶದ ಸೌಹಾರ್ದ ಪರಂಪರೆಯನ್ನು ಆಳುವ ವರ್ಗಕ್ಕೆ ಸಾರ್ವಜನಿಕರು ತಿಳಿ ಹೇಳಿ ಕೊಡಬೇಕಾದ ಪರಿಸ್ಥಿತಿ ಸಂಜಾತವಾಗಿರುವುದು ಪ್ರಚಲಿತ ಭಾರತದ ದುರಂತವಾಗಿದೆ ಎಂದವರು ಹೇಳಿದರು.
ಮುಂದಿನ ದಿನಗಳಲ್ಲಿ ಯುಎಇ, ಸೌದಿ ಅರೇಬಿಯಾ ಸೇರಿ ಗಲ್ಫ್ ರಾಷ್ಟ್ರಗಳಿಂದ ಹಂತ ಹಂತವಾಗಿ ಬರಲಿರುವ ಅನಿವಾಸಿ ಕನ್ನಡಿಗರಿಗೆ ಯಾವುದೇ ಸಮಸ್ಯೆಗಳು ಆಗದಂತೆ ಜಿಲ್ಲಾಡಳಿತ ಬಹಳ ಸೂಕ್ಷ್ಮತೆಯಿಂದ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗಿದೆ ಎಂದು ಸುಲೈಮಾನ್ ಕಲ್ಲರ್ಪೆ ತಿಳಿಸಿದರು.







