ಅಂಫಾನ್ ಚಂಡಮಾರುತ ತೀವ್ರ : ಹವಾಮಾನ ಇಲಾಖೆ ಎಚ್ಚರಿಕೆ
![ಅಂಫಾನ್ ಚಂಡಮಾರುತ ತೀವ್ರ : ಹವಾಮಾನ ಇಲಾಖೆ ಎಚ್ಚರಿಕೆ ಅಂಫಾನ್ ಚಂಡಮಾರುತ ತೀವ್ರ : ಹವಾಮಾನ ಇಲಾಖೆ ಎಚ್ಚರಿಕೆ](/images/placeholder.jpg)
ಹೊಸದಿಲ್ಲಿ : ಬಂಗಾಳಕೊಲ್ಲಿಯ ದಕ್ಷಿಣ ಭಾಗದಲ್ಲಿ ಎದ್ದಿರುವ ಅಂಫಾನ್ ಚಂಡಮಾರುತ ಮುಂದಿನ ಆರು ಗಂಟೆಗಳಲ್ಲಿ ಇನ್ನಷ್ಟು ತೀವ್ರತೆ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ತೀವ್ರ ಸ್ವರೂಪದ ಚಂಡಮಾರುತ ಅಂಫಾನ್, ಒಡಿಶಾದ ಪರದೀಪ್ ಬಳಿ ಇದ್ದು, ಇದು ಮುಂದಿನ ಆರು ಗಂಟೆಗಳಲ್ಲಿ ಮತ್ತಷ್ಟು ತೀವ್ರತೆ ಪಡೆಯಲಿದೆ. ಮೇ 20ರ ಮಧ್ಯಾಹ್ನದ ವೇಳೆಗೆ ಪಶ್ಚಿಮ ಬಂಗಾಳ- ಬಾಂಗ್ಲಾದೇಶ ಕರಾವಳಿಯನ್ನು ದಿಘಾ ಮತ್ತು ಹಾತಿಯಾ ದ್ವೀಪಗಳ ನಡುವೆ ಹಾದುಹೋಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಹ್ಯಾಂಡಲ್ನಿಂದ ಟ್ವೀಟ್ ಮಾಡಲಾಗಿದೆ.
ಕರಾವಳಿ ಪ್ರದೇಶದಲ್ಲಿ ಭಾರಿ ಮಳೆ, ಗುಡುಗು- ಸಿಡಿಲು ನಿರೀಕ್ಷಿಸಲಾಗಿದೆ ಎಂದು ಒಡಿಶಾ ಸರ್ಕಾರದ ವಿಶೇಷ ಪರಿಹಾರ ಸಂಸ್ಥೆ ಪ್ರಕಟಿಸಿದೆ.
ಈ ಮಧ್ಯೆ ಚಂಡಮಾರುತ ಪರಿಹಾರ ಕಾರ್ಯಗಳಿಗಾಗಿ ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆ ಒಡಿಶಾಗೆ 10 ಹಾಗೂ ಪಶ್ಚಿಮ ಬಂಗಾಳಕ್ಕೆ 7 ತಂಡಗಳನ್ನು ಕಳುಹಿಸಿಕೊಟ್ಟಿದೆ. ಪಶ್ಚಿಮ ಬಂಗಾಳದ ಸೌತ್ 24 ಪರಗಣ, ನಾರ್ಥ್ 24 ಪರಗಣ, ಪೂರ್ವ ಹಾಗೂ ಪಶ್ಚಿಮ ಮಿಡ್ನಾಪುರ, ಹೌರ ಹಾಗೂ ಹೂಗ್ಲಿಗಳಲ್ಲಿ ತಂಡಗಳನ್ನು ನಿಯೋಜಿಸಲಾಗುತ್ತಿದೆ. ಒಡಿಶಾದ ಪುರಿ, ಜಗತ್ಸಿಂಗ್ಪುರ, ಕೇಂದ್ರಪಾರಾ, ಬಲಸೋರ್, ಜಜ್ಪುರ, ಭದ್ರಕ್ ಮತ್ತು ಮಯೂರಭಂಜ್ನಲ್ಲಿ ಪಡೆಗಳನ್ನು ನಿಯೋಜಿಸಲಾಗುತ್ತಿದೆ.