ಕೋವಿಡ್-19: ಉಡುಪಿಯ 67 ವರದಿ ನೆಗೆಟಿವ್, 542 ಪರೀಕ್ಷೆಗೆ ಬಾಕಿ
ಉಡುಪಿ, ಮೇ 18: ನೋವೆಲ್ ಕೊರೋನ ವೈರಸ್ (ಕೋವಿಡ್- 19) ಸೋಂಕಿನ ಪರೀಕ್ಷೆಗಾಗಿ ಕಳುಹಿಸಿದ ಶಂಕಿತರ ಗಂಟಲು ದ್ರವದ ಮಾದರಿಗಳಲ್ಲಿ ಸೋಮವಾರ ಬಂದ 67 ವರದಿಗಳು ನೆಗೆಟಿವ್ ಫಲಿತಾಂಶವನ್ನು ನೀಡಿದ್ದು, ಮುಂಬೈಯಿಂದ ಬಂದ 28ರ ಹರೆಯದ ಗರ್ಭಿಣಿ ಸೋಂಕಿಗೆ ಪಾಸಿಟಿವ್ ಆಗಿದ್ದಾರೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಸಹ ಕೊರೋನ ಸೋಂಕು ವ್ಯಾಪಕವಾಗಿರುವ ಹೊರರಾಜ್ಯಗಳಿಂದ ಆಗಮಿಸಿದ 240 ಮಂದಿಯೂ ಸೇರಿದಂತೆ ಒಟ್ಟು 269 ಮಂದಿಯ ಗಂಟಲುದ್ರವದ ಸ್ಯಾಂಪಲ್ ಗಳನ್ನು ಪರೀಕ್ಷೆಗಾಗಿ ಕಳುಹಿಸಿದ್ದು, ಇದರಿಂದ ಒಟ್ಟು 542 ಸ್ಯಾಂಪಲ್ಗಳ ಪರೀಕ್ಷಾ ವರದಿ ಬರಲು ಇನ್ನೂ ಬಾಕಿ ಇವೆ ಎಂದು ಅವರು ತಿಳಿಸಿದರು.
ಸತತ ಮೂರನೇ ದಿನ ಜಿಲ್ಲೆಯಲ್ಲಿ ಒಂದು ಪಾಸಿಟಿವ್ ಪ್ರಕರಣ ಬಂದ ಕಾರಣ ಒಟ್ಟು ಸೋಂಕಿತರ ಸಂಖ್ಯೆ ಈಗ 11ಕ್ಕೇರಿದೆ. ಮೇ 12ರಂದು ಮುಂಬಯಿಯಿಂದ ಬಂದ ಗರ್ಭಿಣಿ ಮಹಿಳೆಯಲ್ಲಿ ಇಂದು ಕೊರೋನ ಸೋಂಕು ಕಂಡು ಬಂದಿದ್ದು ಅವರನ್ನು ಕೋವಿಡ್ ಆಸ್ಪತ್ರೆಗೆ ವರ್ಗಾಯಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇಂದು ಕೊರೋನ ರೋಗದ ಗುಣಲಕ್ಷಣವಿರುವ 269 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇವುಗಳಲ್ಲಿ 15 ಮಂದಿ ಸೋಂಕಿತರ ಸಂಪರ್ಕಕ್ಕೆ ಬಂದವರು, 10 ಮಂದಿ ತೀವ್ರ ಉಸಿರಾಟ ತೊಂದರೆಯವರು, ನಾಲ್ವರು ಶೀತಜ್ವರದಿಂದ ಬಳಲುವವರು ಹಾಗೂ 240 ಮಂದಿ ಕೊರೋನ ಹಾಟ್ಸ್ಪಾಟ್ಗಳಿಂದ ಬಂದವರ ಸ್ಯಾಂಪಲ್ಗಳು ಸೇರಿವೆ ಎಂದು ಡಾ.ಸೂಡ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಸೋಮವಾರ ಸಂಜೆಯವರೆಗೆ ಒಟ್ಟು 2470 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ 1929ರ ವರದಿ ಬಂದಿದ್ದು, 1918 ನೆಗೆಟಿವ್ ಆಗಿವೆ. ಒಟ್ಟಾರೆ ಯಾಗಿ ಈವರೆಗೆ 11 ವರದಿಗಳು ಪಾಸಿಟಿವ್ ಆಗಿ ಬಂದಿವೆ.
ಶಂಕಿತ ನೋವೆಲ್ ಕೊರೋನ ಸೋಂಕಿನ ಪರೀಕ್ಷೆಗಾಗಿ ಇಂದು 15 ಮಂದಿ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರಲ್ಲಿ 11 ಮಂದಿ ಪುರುಷ ಹಾಗೂ ನಾಲ್ವರು ಮಹಿಳೆಯರಿದ್ದಾರೆ. ಆರು ಮಂದಿ ಕೊರೋನ ಶಂಕಿತರು, ಐವರು ತೀವ್ರತರದ ಉಸಿರಾಟ ತೊಂದರೆ ಹಾಗೂ ನಾಲ್ವರು ಶೀತಜ್ವರದ ಬಾಧೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿನಿಂದ ಇಂದು 17 ಮಂದಿ ಬಿಡುಗಡೆಗೊಂಡಿದ್ದು, 82 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ ಎಂದು ಡಾ.ಸೂಡ ವಿವರಿಸಿದರು.
ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ ಹಿನ್ನೆಲೆಯೊಂದಿಗೆ ಸೋಮವಾರ ಮತ್ತೆ 32 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 4633 ಮಂದಿಯನ್ನು ಕೊರೋನದ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 3251 (ಇಂದು 45) ಮಂದಿ 28 ದಿನಗಳ ನಿಗಾವನ್ನೂ, 3993 (144) ಮಂದಿ 14 ದಿನಗಳ ನಿಗಾವನ್ನು ಪೂರ್ಣಗೊಳಿಸಿದ್ದಾರೆ.
ಜಿಲ್ಲೆಯಲ್ಲಿ ಈಗಲೂ 511 ಮಂದಿ ಹೋಮ್ ಕ್ವಾರಂಟೈನ್ ಹಾಗೂ 47 ಮಂದಿ ಆಸ್ಪತ್ರೆ ಕ್ವಾರಂಟೈನ್ನಲ್ಲಿದ್ದಾರೆ ಎಂದು ಡಾ.ಸುಧೀರ್ ಚಂದ್ರ ಸೂಡ ನುಡಿದರು.







