ಈದುಲ್ ಫಿತ್ರ್ ಸರಳವಾಗಿ ಆಚರಿಸಲು ಉಡುಪಿ, ಚಿಕ್ಕಮಗಳೂರು, ಹಾಸನ ಜಿಲ್ಲಾ ಖಾಝಿ ಬೇಕಲ ಉಸ್ತಾದ್ ಕರೆ
►ಫಿತ್ರ್ ಝಕಾತ್ ಅರ್ಹರಿಗೆ ತಲುಪಿಸಿ ►ಖಬರ್ ಝಿಯಾರತ್ ಮುಂದೂಡಿ ►ಮಕ್ಕಳು,ಮಹಿಳೆಯರು, ವೃದ್ಧರು ಮನೆಯಲ್ಲೇ ಇರಿ

ಮಂಗಳೂರು, ಮೇ 18: ಕೊರೋನ-ಲಾಕ್ಡೌನ್ ಹಿನ್ನೆಲೆಯಲ್ಲಿ ಮೇ 23 ಅಥವಾ 24ರಂದು ನಡೆಯಲಿರುವ ಪೆರ್ನಾಳ್ (ಈದುಲ್ ಫಿತ್ರ್) ಅನ್ನು ಅತ್ಯಂತ ಸರಳವಾಗಿ ಆಚರಿಸಲು ಉಡುಪಿ, ಚಿಕ್ಕಮಗಳೂರು, ಹಾಸನ ಜಿಲ್ಲಾ ಸಂಯುಕ್ತ ಖಾಝಿ ಅಲ್ಹಾಜ್ ಬೇಕಲ ಇಬ್ರಾಹೀಂ ಮುಸ್ಲಿಯಾರ್ ಕರೆ ನೀಡಿದ್ದಾರೆ.
ಕೊರೋನ ಸೋಂಕು ರೋಗ ಹಬ್ಬದಂತೆ ಈಗಾಗಲೆ ಕೇಂದ್ರ ಮತ್ತು ರಾಜ್ಯ ಸರಕಾರವು ಲಾಕ್ಡೌನ್ ವಿಧಿಸುವ ಮೂಲಕ ಕೆಲವು ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿದೆ. ಆ ಪೈಕಿ ಸಾಮೂಹಿಕ ನಮಾಝ್, ಕೂಟು ಝಿಯಾರತ್ ಇತ್ಯಾದಿ ಧಾರ್ಮಿಕ ಕಾರ್ಯಕ್ರಮವೂ ಸೇರಿದೆ. ಸರಕಾರದ ನಿರ್ದೇಶನದ ಮೇರೆಗೆ ಸಮುದಾಯದ ವಿದ್ವಾಂಸರು, ಮುಖಂಡರ ಮನವಿಗೆ ಸ್ಪಂದಿಸಿರುವ ಮುಸ್ಲಿಂ ಬಾಂಧವರು ಈವರೆಗೆ ಶುಕ್ರವಾರದ ಜುಮಾ ನಮಾಝ್, ರಮಝಾನ್ನ ತರಾವೀಹ್ ನಮಾಝ್, ಕೂಟು ಝಿಯಾರತ್ ಸಹಿತ ಬಟ್ಟೆಬರೆ ಖರೀದಿಯಿಂದಲೂ ದೂರ ಸರಿದು ಸರಳ ರೀತಿಯಲ್ಲಿ ಪೆರ್ನಾಳ್ ಆಚರಿಸಲು ನಿರ್ಧರಿಸಿರುವುದು ಗಮನಾರ್ಹ. ಇನ್ನೀಗ ಲಾಕ್ಡೌನ್ ವಿಸ್ತರಣೆಯೊಂದಿಗೆ ಪೆರ್ನಾಳ್ ಅಂದು ಮಸೀದಿ ಮತ್ತು ಈದ್ಗಾಗಳಲ್ಲಿ ಈದ್ ನಮಾಝ್ಗೂ ನಿರ್ಬಂಧ ಹೇರಲಾಗಿದೆ. ಹಾಗಾಗಿ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ಈದ್ ನಮಾಝ್ ನಿರ್ವಹಿಸಬೇಕಿದೆ. ಈ ಸಂದರ್ಭ ಈದ್ ಖುತ್ಬಾದ ಆವಶ್ಯಕತೆ ಇರುವುದಿಲ್ಲ. ಎರಡೂ ರಕಾಅತ್ಗಳಲ್ಲೂ ತಕ್ಬೀರ್ನೊಂದಿಗೆ ನಮಾಝ್ ಮಾಡಲು ಖಾಝಿ ಬೇಕಲ್ ಉಸ್ತಾದ್ ಸೂಚಿಸಿದ್ದಾರೆ.
‘ಫಿತ್ರ್ ಝಕಾತ್’ ಕಡ್ಡಾಯವಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಪೆರ್ನಾಳ್ ಹಬ್ಬದ ಮುಂಚಿನ ದಿನದಂದು ಅಥವಾ ಹಬ್ಬದ ದಿನದಂದು ಮಗ್ರಿಬ್ಗೆ ಮುನ್ನ ಅರ್ಹರಿಗೆ ತಲುಪಿಸಬೇಕಾಗಿದೆ. ಈ ಸಂದರ್ಭ ಸಮಾಜದ ಆರೋಗ್ಯದ ದೃಷ್ಟಿಯಿಂದ ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದನ್ನು ಮರೆಯಬಾರದು.
ಈ ಬಾರಿಯ ‘ಪೆರ್ನಾಳ್’ನಂದು ಖಬರ್ ಝಿಯಾರತ್ನಿಂದ ದೂರ ಸರಿಯಬೇಕಿದೆ. ಹಬ್ಬದ ದಿನದಂದು ಸಾಮಾನ್ಯವಾಗಿ ಕೂಡು ಕುಟುಂಬದ ಮನೆಗಳಿಗೆ ತೆರಳಿ ಪರಸ್ಪರ ಹಸ್ತಲಾಘವ ಮಾಡಲಾಗುತ್ತದೆ. ಎಲ್ಲರೂ ಒಂದೆಡೆ ಗುಂಪು ಸೇರುವುದರಿಂದ ಈ ರೋಗ ಹಬ್ಬುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿರುವ ಕಾರಣ ಎಲ್ಲರೂ ಮನೆಯಲ್ಲೇ ಇದ್ದು ಹಬ್ಬವನ್ನು ಸರಳವಾಗಿ ಆಚರಿಸಲು ಮುಂದಾಗ ಬೇಕಿದೆ. ಲಾಕ್ಡೌನ್ ಸಡಿಲಿಕೆಯ ನೆಪದಲ್ಲಿ ಖಬರ್ ಝಿಯಾರತ್ಗೆ ಹೋಗುವುದು ಮತ್ತು ಕುಟುಂಬಸ್ಥರ ಮನೆಗೆ ತೆರಳುವುದಕ್ಕೆ ಸ್ವತಃ ನಿರ್ಬಂಧ ಹೇರಬೇಕಿದೆ. ಸಣ್ಣ ಮಕ್ಕಳು, ಮಹಿಳೆಯರು ಅದರಲ್ಲೂ ಗರ್ಭಿಣಿಯರು, ವೃದ್ಧರು, ವೃದ್ಧೆಯರು ಹಬ್ಬದ ಖುಷಿಯಲ್ಲಿ ಮನೆಯಿಂದ ಹೊರ ಹೋಗಬಾರದು. ಕೊರೋನ ನಿರ್ಮೂಲನೆಗಾಗಿ ಸರಕಾರದ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಮಸೀದಿಗಳ ಬಾಗಿಲು ಮುಚ್ಚಿರುವಾಗ ಮತ್ತು ಮಸೀದಿ-ಈದ್ಗಾಗಳಲ್ಲಿ ಈದ್ ನಮಾಝ್ಗೆ ಅವಕಾಶವಿಲ್ಲದಿರುವಾಗ ಯಾರೂ ಈ ಹಬ್ಬವನ್ನು ಸಂಭ್ರಮಿಸುವುದು ತರವಲ್ಲ. ಹಾಗಾಗಿ ಎಲ್ಲರೂ ಅತ್ಯಂತ ಸರಳವಾಗಿ ಪೆರ್ನಾಳ್ ಆಚರಿಸಿ ಸಮಾಜಕ್ಕೆ ಮಾದರಿಯಾಗಬೇಕಿದೆ ಎಂದು ಸಂಯುಕ್ತ ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್ ಅಭಿಪ್ರಾಯಪಟ್ಟಿದ್ದಾರೆ.







