ಈ ರಾಜ್ಯದಲ್ಲಿ ಕೊರೋನ ಸೋಂಕಿತರ ಮರಣ ದರ ಕನಿಷ್ಠ
ಹೊಸದಿಲ್ಲಿ, ಮೇ 19: ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಕೊರೋನ ವೈರಸ್ ಸೋಂಕು ಪ್ರಕರಣಗಳನ್ನು ಗಮನಿಸಿದರೆ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ಹಾಗೂ ದಿಲ್ಲಿಯಲ್ಲಿ ಪರಿಸ್ಥಿತಿ ಭೀಕರವಾಗಿದೆ ಎನ್ನುವುದು ತಿಳಿಯುತ್ತದೆ. ಆದಾಗ್ಯೂ, ಪ್ರತಿ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರು ಮತ್ತು ಗುಣಮುಖರಾದವರ ಅನುಪಾತವನ್ನು ನೋಡಿದರೆ ಭಿನ್ನ ಚಿತ್ರಣ ಸಿಗುತ್ತದೆ.
ಇದುವರೆಗೆ ಕೇವಲ ನಾಲ್ಕು ಮಂದಿ ಮಾತ್ರ ಮೃತಪಟ್ಟಿರುವ ಕೇರಳದಲ್ಲಿ ಸಹಜವಾಗಿಯೇ ಪ್ರತಿ ಸಾವಿಗೆ ಹೋಲಿಸಿದರೆ ಗುಣಮುಖರಾದವರ ಸಂಖ್ಯೆ ಗರಿಷ್ಠ. ಇಲ್ಲಿ ಪ್ರತಿ ಒಂದು ಸಾವು ಸಂಭವಿಸುವ ಮಧ್ಯೆ 124 ಮಂದಿ ಗುಣಮುಖರಾಗಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಪಶ್ಚಿಮ ಬಂಗಾಳದಲ್ಲಿ ಒಬ್ಬ ಸೋಂಕಿತ ವ್ಯಕ್ತಿ ಮೃತಪಡುವ ಮಧ್ಯೆ ನಾಲ್ಕು ಮಂದಿ ಮಾತ್ರ ಚೇತರಿಸಿಕೊಂಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಸರಾಸರಿ 12 ಮಂದಿ ಗುಣಮುಖರಾಗಿ, ಒಬ್ಬರು ಜೀವ ಕಳೆದುಕೊಳ್ಳುತ್ತಿದ್ದಾರೆ.
ಈ ಮಾನದಂಡದಿಂದ ನೋಡಿದರೆ ತಮಿಳುನಾಡಿನಲ್ಲಿ ಪ್ರತಿ ಸಾವಿನ ನಡುವೆ 53 ಮಂದಿ ಚೇತರಿಸಿಕೊಳ್ಳುತ್ತಿದ್ದರೆ. ದಿಲ್ಲಿಯಲ್ಲಿ 28 ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ.
ಕೇವಲ 2,677 ಪ್ರಕರಣಗಳು ದೃಢಪಟ್ಟ ಪಶ್ಚಿಮ ಬಂಗಾಳದಲ್ಲಿ ಶಂಕಿತರ ಪರೀಕ್ಷೆ ಪ್ರಮಾಣ ಕೂಡಾ ಕನಿಷ್ಠವಾಗಿದ್ದು, ಪ್ರತಿ ಲಕ್ಷ ಮಂದಿಯ ಪೈಕಿ 86 ಮಂದಿಯನ್ನಷ್ಟೇ ಪರೀಕ್ಷೆಗೆ ಗುರಿಪಡಿಸಲಾಗಿದೆ. ಗುಣಮುಖರಾಗುತ್ತಿರುವವರು ಮತ್ತು ಜೀವ ಕಳೆದುಕೊಳ್ಳುತ್ತಿರುವವರ ನಡುವಿನ ಅನುಪಾತವನ್ನು ಗಮನಿಸಿದರೆ ಮಹಾರಾಷ್ಟ್ರದ ಸಾಧನೆ ತೀರಾ ಕಳಪೆ. ಪಶ್ಚಿಮ ಬಂಗಾಳದಲ್ಲಿ ಮಾತ್ರ ಇದಕ್ಕಿಂತ ಕಳಪೆ ಸಾಧನೆ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಪ್ರತಿ ಸಾವಿನ ನಡುವೆ ಆರು ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ. ಗುಜರಾತ್ನಲ್ಲಿ ಪ್ರತಿ ಸಾವಿನ ನಡುವೆ ಏಳು ಮಂದಿ ಗುಣಮುಖರಾಗಿದ್ದು, ಎರಡೂ ರಾಜ್ಯಗಳಲ್ಲಿ ಪ್ರತಿ ಲಕ್ಷಕ್ಕೆ 200 ಮಂದಿಯ ತಪಾಸಣೆ ನಡೆಸಲಾಗಿದೆ.
ಕೇರಳ ಹೊರತುಪಡಿಸಿದರೆ ಬಿಹಾರ (59) ಹಾಗೂ ಒಡಿಶಾ (55)ದಲ್ಲಿ ಉತ್ತಮ ಚೇತರಿಕೆ ಕಂಡುಬಂದಿದೆ.