ಡಿ.ಕೆ.ಶಿವಕುಮಾರ್ ದ್ವಂದ್ವ ನೀತಿ ಬಿಡಲಿ: ಸಚಿವ ಬಿ.ಸಿ.ಪಾಟೀಲ್

ಕೊಪ್ಪಳ, ಮೇ 19: ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಳಗೊಂದು ಹೊರಗೊಂದು ಮಾತನಾಡುವ ದ್ವಂದ್ವನೀತಿ ಬಿಡಬೇಕೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರವು ಹಂಚುವ ಆಹಾರ ಧಾನ್ಯ ಮತ್ತಿತರ ಅವಶ್ಯಕ ಪದಾರ್ಥಗಳ ಕಿಟ್ ಮೇಲೆ ಬಿಜೆಪಿ ಚಿಹ್ನೆ ಹಾಕಿ ವಿತರಿಸುತ್ತಿದ್ದಾರೆ ಎಂಬ ಅವರ ಟೀಕೆ ಹುರುಳಿಲ್ಲದ್ದು ಎಂದು ಹೇಳಿದರು.
ಬಿಜೆಪಿ ಮುಖಂಡರು ತಮ್ಮ ಸ್ವಂತ ಖರ್ಚಿನಲ್ಲಿ ವಿತರಣೆ ಮಾಡುತ್ತಿರುವ ಕಿಟ್ಗಳನ್ನು ತಂದು ಅವರು ಈ ರೀತಿ ಆರೋಪ ಮಾಡುವುದು ಸರಿಯಲ್ಲ. ವಿವರಗಳನ್ನು ಪರಿಶೀಲಿಸಿ ಮಾತನಾಡಬೇಕು ಎಂದು ಬಿ.ಸಿ.ಪಾಟೀಲ್ ಹೇಳಿದರು.
ಇತ್ತೀಚೆಗೆ ವಿಧಾನಸೌಧದಲ್ಲಿ ಸರಕಾರ ನಡೆಸಿದ ಸರ್ವಪಕ್ಷಗಳ ಮುಖಂಡರ ಸಭೆಯಲ್ಲಿ ಡಿ.ಕೆ.ಶಿವಕುಮಾರ್, ಯಡಿಯೂರಪ್ಪ ನೇತೃತ್ವದ ಸರಕಾರ ಕೊರೋನ ಸಂಕಷ್ಟ ಸಮಯದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಹತ್ತಾರು ಬಾರಿ ಹೊಗಳಿದರು. ಹೀಗೆ ಹೇಳಿದವರು ಹೊರಗೆ ಅನಗತ್ಯ ಟೀಕೆ-ಆರೋಪ ಮಾಡುತ್ತಿದ್ದಾರೆ. ಇಂಥ ಇಬ್ಬಗೆ ನೀತಿಯನ್ನು ಅವರು ಬಿಡಬೇಕು ಎಂದು ಬಿ.ಸಿ.ಪಾಟೀಲ್ ಆಗ್ರಹಿಸಿದರು.
ಹುರುಳಿಲ್ಲದಿದ್ದರೂ ಟೀಕೆ ಮಾಡುತ್ತಲೇ ಇರುವ ಅವರಿಗೆ ಟೀಕೆ ಮಾಡದಿದ್ದರೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಪಟ್ಟದಿಂದ ಕಿತ್ತೊಗೆಯುತ್ತಾರೆ ಎಂಬ ಭೀತಿ ಆವರಿಸಿಕೊಂಡಿದೆ ಎಂದು ಅವರು ವ್ಯಂಗ್ಯವಾಡಿದರು.
ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಮಾಡುವ ಹುರುಳಿಲ್ಲದ ಟೀಕೆಗಳಿಗೆ ಮಹತ್ವ ನೀಡುವ ಅಗತ್ಯವಿಲ್ಲ. ಎಪ್ರಿಲ್ ತಿಂಗಳಿನಲ್ಲಿ ತೀರಾ ಅವಶ್ಯಕ ಸೇವೆ ಹೊರತುಪಡಿಸಿ ಉಳಿದ ಸರಕಾರಿ ಕಚೇರಿಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಈಗ ಅವು ಪುನಾರಂಭವಾಗಿದ್ದು ಎಲ್ಲ ಬಿಲ್ ಗಳನ್ನು ಕ್ರಮವಾಗಿ ವಿಲೇವಾರಿ ಮಾಡುತ್ತಿದ್ದಾರೆ. ಬಿಲ್ ಮತ್ತು ಸಂಬಳ ನೀಡಲಾಗದಂಥ ಮಟ್ಟಕ್ಕೆ ಸರಕಾರ ಹೋಗಿಲ್ಲ ಎಂದು ಬಿ.ಸಿ.ಪಾಟೀಲ್ ಹೇಳಿದರು.
ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ವಿವರಿಸಿದ ಅವರು, ಪ್ರತಿ ರಾಜ್ಯಕ್ಕೂ ಓರ್ವ ಐಎಎಸ್ ಹಂತದ ಅಧಿಕಾರಿಯನ್ನು ನಿಯೋಜಿಸಿ ಸೇವಾಸಿಂಧು ಮೂಲಕ ಪ್ರಯಾಣ ಮಾಡುವವರ ವಿವರ ನೋಂದಾಯಿಸಿಕೊಂಡು ಕಳುಹಿಸಲಾಗಿದೆ ಎಂದರು.







