ಬೆಂಗಳೂರಿನಲ್ಲಿ ಇಂದು 6 ಕೊರೋನ ಪ್ರಕರಣಗಳು ದೃಢ

ಬೆಂಗಳೂರು, ಮೇ 19: ನಗರದಲ್ಲಿ ಮಂಗಳವಾರ ಹೊಸದಾಗಿ ಆರು ಪ್ರಕರಣ ಪತ್ತೆಯಾಗಿದ್ದು, ಪಾದರಾಯನಪುರದ ಮೂವರು, ಮಂಗಮ್ಮನಪಾಳ್ಯ ಒಂದು, ಕೆ.ಜಿ ಹಳ್ಳಿಯ ಒಂದು ಸೇರಿದಂತೆ ಜ್ಞಾನಭಾರತಿ ವಾರ್ಡ್ ಮೃತ ವ್ಯಕ್ತಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ.
ನಗರದ ಕಂಟೈನ್ಮೆಂಟ್ ವಲಯ ಪಾದರಾಯನಪುರದ ರೋಗಿ-608ರ ಸಂಪರ್ಕದಿಂದ ಮೂವರಿಗೆ ಕೊರೋನ ದೃಢಪಟ್ಟಿದೆ. ಇವರನ್ನು ಹೊಟೇಲ್ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು, ಕ್ವಾರಂಟೈನ್ ಅವಧಿ ಮುಗಿದ ವೇಳೆ ತಪಾಸಣೆ ನಡೆಸಿದ್ದಾಗ ಕೊರೋನ ದೃಢಪಟ್ಟಿದೆ. ಆದರೆ, 78 ವರ್ಷದ ವೃದ್ಧ ಸೇರಿದಂತೆ ಮೂವರಲ್ಲಿ ಯಾವುದೇ ರೋಗ ಲಕ್ಷಣ ಇರಲಿಲ್ಲ. ಇನ್ನು ಮಂಗಮ್ಮನಪಾಳ್ಯದಲ್ಲಿ ರ್ಯಾಂಡಮ್ ತಪಾಸಣೆ ವೇಳೆ ಇಪ್ಪತ್ತು ವರ್ಷದ ರೋಗಿ-1306 ಮಹಿಳೆಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ. ಕೆ.ಜಿ ಹಳ್ಳಿಯ ನಿವಾಸಿ 32 ವ್ಯಕ್ತಿಯು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿಯೂ ಕೊರೋನ ಸೋಂಕು ದೃಢಪಟ್ಟಿದೆ. ಇವರ ಸಂಪರ್ಕದಲ್ಲಿದ್ದ ಎಲ್ಲರನ್ನು ಕ್ವಾರಂಟೈನ್ ಮಾಡಲಾಗಿದೆ.
ಮಗು ನೋಡಲು ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿ ಕೊರೋನಕ್ಕೆ ಬಲಿ: ನಗರದ 129 ವಾರ್ಡ್ನ 54 ವರ್ಷದ ನಿವಾಸಿ, ನಗರದ ಬಿಜಿಎಸ್ ಆಸ್ಪತ್ರೆಯಲ್ಲಿ ಮಗುವನ್ನು ನೋಡಿ ವಾಪಾಸು ಬರುತ್ತಿದ್ದಾಗ ಮೃತಪಟ್ಟಿದ್ದಾರೆ. ಕೂಡಲೇ ಆಸ್ಪತ್ರೆ ಸಿಬ್ಬಂದಿ ಇಸಿಜಿ ಮಾಡಿದ್ದಾರೆ. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ತಿಳಿಯಲಾಗಿತ್ತು. ಆದರೆ, ವಯಸ್ಸಾದ ಹಿನ್ನೆಲೆಯಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೊರೋನ ಇರುವುದು ದೃಢಪಟ್ಟಿದೆ. ಹೀಗಾಗಿ ಕೂಡಲೇ ಅವರ ಮನೆಯಲ್ಲಿದ್ದ ಆರು ಮಂದಿ ಪ್ರಥಮ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ದೀಪಾ ಕಾಂಪ್ಲೆಕ್ಸ್ ಬಳಿಯ ನೂರು ಮೀಟರ್ ಸುತ್ತಲಿನ ಜಾಗವನ್ನು ಕಂಟೈನ್ ಮೆಂಟ್ ಮಾಡಲಾಗಿದೆ.
251 ಕೊರೋನ ಪ್ರಕರಣ ಪತ್ತೆ: ನಗರದಲ್ಲಿ ಇಲ್ಲಿಯವರಿಗೆ 251 ಪ್ರಕರಣ ಪತ್ತೆಯಾಗಿದ್ದು, 123 ಜನರು ಗುಣಮುಖರಾಗಿದ್ದು, 114 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಜನರು ಮರಣ ಹೊಂದಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಗಳಲ್ಲಿ ಒಟ್ಟು 9,058 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿರುವ ಒಟ್ಟು 1,286 ಜನರು ಹಾಗೂ ಸೆಕೆಂಡರಿ ಸಂಪರ್ಕದಲ್ಲಿರುವ 5,014 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.