ಭಾರತದಲ್ಲಿ ದ್ವೇಷಭಾಷಣಕ್ಕೆ ಉತ್ತೇಜನ ನೀಡಿದ ಪೌರತ್ವ ಕಾಯ್ದೆ: ವಿಶ್ವಸಂಸ್ಥೆಯ ಅಧಿಕಾರಿ ಆತಂಕ
ಹೊಸದಿಲ್ಲಿ, ಮೇ 20: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿರುವುದು ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದ್ವೇಷಭಾಷಣ ಪ್ರಕರಣ ಹಾಗೂ ಅವರ ವಿರುದ್ಧದ ತಾರತಮ್ಯದ ಧೋರಣೆ ಹೆಚ್ಚಲು ಕಾರಣವಾಗಿದೆ ಎಂದು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿ ಅದಾಮ ದಿಯೆಂಗ್ ಹೇಳಿದ್ದಾರೆ.
ಜನಾಂಗ ಹತ್ಯೆ ತಡೆಯುವ ಬಗ್ಗೆ ವಿಶ್ವಸಂಸ್ಥೆಗೆ ವಿಶೇಷ ಸಲಹೆಗಾರರಾಗಿರುವ ದಿಯೆಂಗ್, ಕಾಯ್ದೆಯಲ್ಲಿರುವ ಅಲ್ಪಸಂಖ್ಯಾತರಿಗೆ ರಕ್ಷಣೆ ಒದಗಿಸುವ ಉದ್ದೇಶ ಪ್ರಶಂಸನೀಯವಾಗಿದೆ. ಆದರೆ ಈ ರಕ್ಷಣೆ ಮುಸ್ಲಿಮರ ಸಹಿತ ಎಲ್ಲಾ ವರ್ಗದವರಿಗೂ ವ್ಯಾಪಿಸಿಲ್ಲ ಎಂಬುದು ಆತಂಕಕ್ಕೆ ಕಾರಣವಾಗಿದೆ. ಇದು ಅಂತರಾಷ್ಟ್ರೀಯ ಮಾನವ ಹಕ್ಕು ಕಾನೂನಿಗೆ ಭಾರತದ ಬದ್ಧತೆಗೆ ಮತ್ತು ತಾರತಮ್ಯ ರಹಿತ ಧೋರಣೆಗೆ ವಿರುದ್ಧವಾಗಿದೆ ಎಂದು ವಿಶ್ವಸಂಸ್ಥೆಯ ಮೂಲಕ ಹೊರಡಿಸಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಯ್ದೆಯನ್ನು ವಿರೋಧಿಸಿ ಭಾರತದಲ್ಲಿ ನಡೆದ ಹಲವು ಪ್ರತಿಭಟನೆಗಳನ್ನು ಚದುರಿಸುವ ಸಂದರ್ಭ ಸರಕಾರದ ಕಾರ್ಯಾಚರಣೆಯಿಂದ ಹಲವಾರು ನಾಗರಿಕರು ಸಾವನ್ನಪ್ಪಿದ್ದು ಇನ್ನೂ ಹಲವರು ಗಾಯಗೊಂಡಿದ್ದಾರೆ . ಧಾರ್ಮಿಕ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ ಮತ್ತು ಭಾರತದ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ವ್ಯಕ್ತಪಡಿಸುವ ಪ್ರಕರಣ ಹೆಚ್ಚಿದೆ ಎಂಬ ವರದಿಯ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಆಡಳಿತ ಪಕ್ಷದ ಮುಖಂಡರೇ ಇಂತಹ ದ್ವೇಷ ಭಾಷಣದ ಮುಂಚೂಣಿಯಲ್ಲಿದ್ದಾರೆ. ಸಂಸದ ಸುಬ್ರಮಣಿಯನ್ ಸ್ವಾಮಿ ನೀಡಿರುವ ‘ಎಲ್ಲಾ ಜನರು ಸಮಾನರಲ್ಲ ಮತ್ತು ಮುಸ್ಲಿಮರು ಸಮಾನ ವರ್ಗದಲ್ಲಿಲ್ಲ’ ಎಂಬ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ಇಂತಹ ಹೇಳಿಕೆಗಳು ಎಚ್ಚರಿಕೆಯ ಗಂಟೆ ಬಾರಿಸುತ್ತಿವೆ ಎಂದಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗ ಯಾವುದೇ ಜಾತಿ ಮತ್ತು ಧರ್ಮವನ್ನು ನೋಡುವುದಿಲ್ಲ ಎಂಬ ಪ್ರಧಾನಿ ಮೋದಿಯ ಹೇಳಿಕೆ ಸ್ವಾಗತಾರ್ಹವಾಗಿದೆ ಎಂದವರು ಹೇಳಿದ್ದಾರೆ.