ಪೂರ್ವಯೋಜನೆ ಇಲ್ಲದೇ ಲಾಕ್ಡೌನ್ ಘೋಷಣೆ: ಕೇಂದ್ರದ ವಿರುದ್ಧ ಹರಿಹಾಯ್ದ ಛತ್ತೀಸ್ಗಢ ಸಿಎಂ
ರಾಂಚಿ, ಮೇ 21: ದೇಶದಲ್ಲಿ ಯಾವುದೇ ಪೂರ್ವಯೋಜನೆ ಇಲ್ಲದೇ ಕೇಂದ್ರ ಸರ್ಕಾರ ಲಾಕ್ಡೌನ್ ಘೋಷಿಸಿದೆ ಎಂದು ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲಾ ಕಿಡಿ ಕಾರಿದ್ದಾರೆ.
ಕೇಂದ್ರ ಸರ್ಕಾರಕ್ಕೆ ನಂಬಿಕೆ ಇರುವುದು ಘಟನೆಗಳ ಮೇಲೆ; ಸರ್ಕಾರ ನೋಟು ರದ್ದತಿಯನ್ನು ಘೋಷಿಸಿದ್ದು, ಜಿಎಸ್ಟಿಗೆ ಚಾಲನೆ ನೀಡಿದ್ದು ರಾತ್ರೋರಾತ್ರಿ. ಅಂತೆಯೇ ಯಾವುದೇ ಪೂರ್ವಯೋಜನೆಯಿಲ್ಲದೇ ದೇಶಾದ್ಯಂತ ಲಾಕ್ಡೌನ್ ಘೋಷಿಸಿತು. ಲಾಕ್ಡೌನ್ ಘೋಷಣೆಗೆ ಮುನ್ನ ಅಥವಾ ಬಳಿಕ ಅದರ ಸೂಕ್ತ ನಿರ್ವಹಣೆಗೆ ಸರ್ಕಾರದ ಬಳಿ ಯಾವ ಕಾರ್ಯತಂತ್ರವೂ ಇರಲಿಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ಇಡೀ ವಿಶ್ವದಲ್ಲಿ ಈ ಸಾಂಕ್ರಾಮಿಕ ಹರಡುತ್ತಿರುವ ಬಗ್ಗೆ ಸರ್ಕಾರಕ್ಕೆ ಸ್ವಲ್ಪವಾದರೂ ಜ್ಞಾನ ಇದ್ದಿದ್ದರೆ, ಅದಕ್ಕೆ ಸಜ್ಜಾಗಬಹುದಿತ್ತು.. ವಿವಿಧ ರಾಜ್ಯಗಳಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರಿದ್ದಾರೆ. ಲಾಕ್ಡೌನ್ಗೆ ಮುನ್ನ ಇವರಿಗಾಗಿ ಏಕೆ ವಿಶೇಷ ರೈಲು ವ್ಯವಸ್ಥೆ ಮಾಡಿಲ್ಲ? ಲಾಕ್ಡೌನ್ಗೆ ಮುನ್ನವೇ ವಲಸೆ ಕಾರ್ಮಿಕರನ್ನು ವಾಪಸ್ ಕಳುಹಿಸಬೇಕಿತ್ತು. ಆಗ ವಲಸೆ ಕಾರ್ಮಿಕರು ಸಾಯುವುದನ್ನು ಹಾಗೂ ಅವರ ಬವಣೆ ತಪ್ಪಿಸಬಹುದಿತ್ತು ಎಂದು ಅಭಿಪ್ರಾಯಪಟ್ಟರು.
ಇವೆಲ್ಲದರ ನಡುವೆಯೂ ಛತ್ತೀಸ್ಗಢ ಸರ್ಕಾರ, ರಾಜ್ಯದ ಮೂಲಕ ಹಾದುಹೋಗುವ ವಲಸೆ ಕಾರ್ಮಿಕರಿಗಾಗಿ ಬಸ್ಸು, ಆಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಿದೆ. ಅವರ ತವರು ರಾಜ್ಯಗಳಿಗೆ ಹೋಗಲು ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು. ರಾಜ್ಯದಲ್ಲಿ ಕೃಷಿಗೆ ಪುನಶ್ಚೇತನ ನೀಡುವ ಪ್ರಯತ್ನವಾಗಿ ರಾಜ್ಯ ಸರ್ಕಾರ ರಾಜೀವ್ ಗಾಂಧಿ ಕಿಸಾನ್ ನ್ಯಾಯ ಯೋಜನೆ ಅನುಷ್ಠಾನಗೊಳಿಸಿದೆ ಎಂದು ಅವರು ವಿವರಿಸಿದರು.