ಮೈಸೂರು: ಅಣ್ಣನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಯುವಕ
ಮೈಸೂರು,ಮೇ.22: ಪ್ರತಿ ನಿತ್ಯ ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದ ಅಣ್ಣನನ್ನೇ ತಮ್ಮ ಕೊಲೆ ಮಾಡಿರುವ ಘಟನೆ ನಗರದ ಜೆ.ಪಿ.ನಗರದ ಬಳಿ ಇರುವ ಮಹದೇವಪುರದಲ್ಲಿ ನಡೆದಿದೆ.
ಮಹದೇವಪುರ ನಿವಾಸಿ ವಿಷ್ಣು(28) ಕೊಲೆಯಾದ ವ್ಯಕ್ತಿ. ಈತನನ್ನು ಸಹೋದರ ನಾರಾಯಣ (25) ಕೊಲೆ ಮಾಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಹಳೆಯ ರೌಡಿಶೀಟರ್ ಆದ ದಯಾನಂದ ಅವರ ಮಕ್ಕಳಾದ ವಿಷ್ಣು ಮತ್ತು ನಾರಾಯಣ ಜೊತೆಯಲ್ಲೆ ವಾಸಿಸುತ್ತಿದ್ದರು. ಈ ಇಬ್ಬರಿಗೂ ಮದುವೆಯಾಗಿರಲಿಲ್ಲ, ಪ್ರತಿ ದಿನ ಕಂಠಪೂರ್ತಿ ಮದ್ಯ ಸೇವಿಸಿ ಬರುತ್ತಿದ್ದ ವಿಷ್ಣು, ತಮ್ಮ ನಾರಾಯಣನೊಂದಿಗೆ ವಿನಾಕಾರಣ ಜಗಳ ತೆಗೆಯುತಿದ್ದ ಎನ್ನಲಾಗಿದೆ. ಅದೇ ರೀತಿ ಬುಧವಾರ ರಾತ್ರಿ ಸಹ ಕುಡಿದು ಬಂದು ಜಗಳ ತೆಗೆದಿದ್ದಾನೆ. ಇದರಿಂದ ಕುಪಿತಗೊಂಡ ನಾರಾಯಣ ಚಾಕುವಿನಿಂದ ವಿಷ್ಣುಗೆ ಮೂರು ಕಡೆ ಇರಿದು ಕೊಲೆ ಮಾಡಿದ್ದಾನೆ.
ಬಳಿಕ ಪೊಲೀಸರಿಗೆ ಕರೆ ಮಾಡಿ, ತನ್ನ ಅಣ್ಣ ತಾನೇ ಚಾಕುವಿನಿಂದ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿಸಿದ್ದಾನೆ. ಸ್ಥಳಕ್ಕೆ ಆಗಮಿಸಿ ಪೊಲೀಸರು ವಿಷ್ಣುವನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ. ಆರಂಭದಲ್ಲಿ ತನ್ನ ಅಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ನಾಟಕವಾಡಿದ್ದ ನಾರಾಯಣ, ಪೊಲೀಸರ ವಿಚಾರಣೆ ವೇಳೆ ತಾನೇ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.