ರೆಡ್ಕ್ರಾಸ್ ಶತಮಾನೋತ್ಸವದ ಅಂಗವಾಗಿ ರಕ್ತದಾನ ಶಿಬಿರ
ಉಡುಪಿ, ಮೇ 27: ಕೊವೀಡ್-19 ಹೋರಾಟದಲ್ಲಿ ರೆಡ್ಕ್ರಾಸ್ ಸಂಸ್ಥೆ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿರುವುದುಹೆಮ್ಮೆಯ ವಿಷಯ. ಇತ್ತೀಚಿನ ಕೊವೀಡ್-19 ಹೋರಾಟದಲ್ಲಿ ಹೆಚ್ಚು ರಕ್ತದ ಅವಶ್ಯಕತೆ ಇರುವುದರಿಂದ ಈ ತುರ್ತು ಸಂದರ್ಭದಲ್ಲಿ ರೆಡ್ಕ್ರಾಸ್ ಸಂಸ್ಥೆ ರಕ್ತದಾನ ಶಿಬಿರವನ್ನು ಆಯೋಜಿಸಿ ಉತ್ತಮ ಸಹಕಾರ ನೀಡುತ್ತಿದೆ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದ್ದಾರೆ.
ಬುಧವಾರ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಶತಮಾನೋತ್ಸವ ದಿನಾಚರಣೆ ಅಂಗವಾಗಿ ಅಜ್ಜರಕಾಡಿನಲ್ಲಿರುವ ರೆಡ್ಕ್ರಾಸ್ ಭವನದಲ್ಲಿ ಆಯೋಜಿಸಿದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲೆ ಅತಿ ಹೆಚ್ಚು ರಕ್ತದಾನಿಗಳ ಜಿಲ್ಲೆಯಾಗಿದ್ದು, ಕೋವಿಡ್-19 ಅವಧಿಯಲ್ಲಿ ಉಂಟಾಗಿರುವ ರಕ್ತದ ಕೊರತೆಯನ್ನು ಜಿಲ್ಲೆಯ ರಕ್ತದಾನಿಗಳ ಸಹಕಾರದಿಂದ ನೀಗಿಸಲಾಗುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ರೆಡ್ ಕ್ರಾಸ್ ಉಡುಪಿ ಘಟಕದ ಸಭಾಪತಿ ಬಸ್ರೂರು ರಾಜಿವ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕುಂದಾಪುರ ಭಾರತೀಯ ರೆಡ್ಕ್ರಾಸ್ ಘಟಕದ ಸಭಾಪತಿ ಎಸ್. ಜಯಕರ್ ಶೆಟ್ಟಿ, ಉಡುಪಿ ಘಟಕದ ಉಪಸಭಾಪತಿ ಡಾ. ಅಶೋಕ್ ಕುಮಾರ್ವೈ.ಜಿ, ಗೌರವ ಖಜಾಂಚಿ ಟಿ ಚಂದ್ರಶೇಖರ್, ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ರಕ್ತದಾನಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜಗದೀಶ್ ಆಚಾರ್ ನಿರ್ವಹಿಸಿದರು.