'ಗರ್ಭಿಣಿಗೆ ಸೂಕ್ತ ಚಿಕಿತ್ಸೆ ಇಲ್ಲದೆ ಮಗು ಸಾವನ್ನಪ್ಪಿತು'
![ಗರ್ಭಿಣಿಗೆ ಸೂಕ್ತ ಚಿಕಿತ್ಸೆ ಇಲ್ಲದೆ ಮಗು ಸಾವನ್ನಪ್ಪಿತು ಗರ್ಭಿಣಿಗೆ ಸೂಕ್ತ ಚಿಕಿತ್ಸೆ ಇಲ್ಲದೆ ಮಗು ಸಾವನ್ನಪ್ಪಿತು](https://www.varthabharati.in/sites/default/files/images/articles/2020/05/28/245243-1590658741.jpg)
'ಗರ್ಭಿಣಿಗೆ ಸೂಕ್ತ ಚಿಕಿತ್ಸೆ ಇಲ್ಲದೆ ಮಗು ಸಾವನ್ನಪ್ಪಿತು' ಎಂಬ ಮಾಧ್ಯಮ ವರದಿ ಓದಿದಾಗ ಬರೆಯಬೇಕೆನಿಸಿತು. ಕೋವಿಡ್ 19 ಸಾಂಕ್ರಮಿಕ ರೋಗದಿಂದಾಗಿ ಚೀನಾ, ಇಟಲಿ ಜಗತ್ತಿನ ಇತರ ದೇಶಗಳು ಅನುಭವಿಸಿದ, ಈಗಲೂ ಅನುಭವಿಸುತ್ತಿರುವ ಸಂಕಷ್ಟಗಳ ಚಿತ್ರಣ ಇನ್ನೂ ನಮ್ಮ ಕಣ್ಣ ಮುಂದೆ ಇದೆ. ದೂರದ ಸುದ್ದಿ ಎಂಬಂತೆ ಹಾಯಾಗಿದ್ದೆವು. ಆದರೆ ಇಂದು ನಮ್ಮ ದೇಶಕ್ಕೂ ,ನಮ್ಮ ಸಮೀಪಕ್ಕೂ ಬಂದು ಮುಟ್ಟಿದೆ. ಸರಕಾರವು ಮುನ್ನೆಚ್ಚರಿಕೆಯಾಗಿ ಶೀಘ್ರವೇ ಲಾಕ್ ಡೌನ್ ಘೋಷಿಸಿದ ಕಾರಣ ಪ್ರತೀ ಜಿಲ್ಲೆಯ ಅಧಿಕಾರಿಗಳಿಂದ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿತ್ತು .ಜಿಲ್ಲಾಧಿಕಾರಿಯವರ ಕ್ರಮಕ್ಕೆ ನಾಗರಿಕರ ಬೆಂಬಲ ಕೂಡ ಸಿಕ್ಕಿತ್ತು.
ಆದರೆ ಇದೀಗ ಕೋವಿಡ್ 19 ನಾಲ್ಕನೆಯ ಹಂತಕ್ಕೆ ಬಂದಾಗ ಸಡಿಲಿಕೆಗೆ ಅನುಮತಿ ನೀಡಲಾಗಿದೆ. ತಜ್ಞ ವೈದ್ಯರು ಇನ್ನೂ ಮನೆಗಳಿಂದ ಹೊರಬಂದಿಲ್ಲ. ಕ್ಲಿನಿಕ್ ಗಳು ತೆರೆದಿಲ್ಲ. ಜನಸಾಮಾನ್ಯರು ಮಾತ್ರ ಎಂದಿನಂತೆ ಕಾರ್ಯ ಪ್ರವೃತ್ತರಾಗಿದ್ದಾರೆ. ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆ. ಕೊರೋನದೊಂದಿಗೆ ಬದುಕಲು ಕಲಿಯಬೇಕು ಎಂದು ಸಮಾಧಾನಪಡಿಸಲಾಗುತ್ತದೆ. ಇನ್ನೊಂದು ಕಡೆ ಗರ್ಭಿಣಿಗೆ ಸೂಕ್ತ ಚಿಕಿತ್ಸೆ ಇಲ್ಲದೆ ಮಗು ಸಾವನ್ನಪ್ಪುತ್ತದೆ. ಇದು ಏನನ್ನು ಸೂಚಿಸುತ್ತದೆ ? ಆದ್ದರಿಂದ ಸರಕಾರ ಲಾಕ್ ಡೌನ್ ಸಡಿಲಿಕೆಗೆ ಆದೇಶ ಹೊರಡಿಸಿದೆ ಎಂಬ ಕಾರಣಕ್ಕೆ ನಾವು ಅದನ್ನು ಪಾಲಿಸಿದರೆ ಅದರ ನಷ್ಟ ಅನುಭವಿಸಬೇಕಾದವರು ನಾವೇ. ದೇಶದ ನಾಗರಿಕರು ಸಾಧ್ಯವಾದಷ್ಟು ಸರಳ ಜೀವನಕ್ಕೆ ಒಗ್ಗಿಕೊಳ್ಳುವ ಮೂಲಕ ತಮಗೆ ತಾವೇ ಲಾಕ್ ಡೌನ್ ವಿಧಿಸಬೇಕು. ವಿಶೇಷವಾಗಿ ಮಕ್ಕಳು, ವಯಸ್ಸಾದದವರು, ಗರ್ಭಿಣಿಯರ ಸಂಕಷ್ಟವನ್ನು ನೆನೆದು ಸಾಧ್ಯವಾದಷ್ಟು ಸಾಮಾಜಿಕ ಅಂತರ ಪಾಲಿಸುವಲ್ಲಿ ನಿರ್ಲಕ್ಷ್ಯ ತೋರಬಾರದು. ಸರಕಾರವು ಘೋಷಿಸಿದಾಗ ಮಾತ್ರ ಲಾಕ್ ಡೌನ್ ಎಂಬ ಮೂರ್ಖತನದಿಂದ ಹೊರಬರಬೇಕು. ಸರಳ ಜೀವನ ನಮ್ಮಿಂದ ಸಾಧ್ಯವಿದೆ ಎಂಬುದನ್ನು ವಿಶೇಷವಾಗಿ ಮಹಿಳೆಯರು ತೋರಿಸಿಕೊಡ ಬೇಕು. ಅಪೇಕ್ಷಿತರಿದ್ದರೆ ತಮ್ಮ ತಮ್ಮ ನೆರೆಹೊರೆ, ಕುಟುಂಬದವರೊಂದಿಗೆ ಹಂಚಿ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಬೇಕು. ಮಸೀದಿ ಮಂದಿರ ಚರ್ಚುಗಳ ಮೂಲಕ ಈಗಾಗಲೇ ರೇಷನ್ ವಿತರಿಸಲಾಗಿದೆ. ಈ ಪ್ರಕ್ರಿಯೆ ಮುಂದುವರಿಯಬೇಕು. ಕೊರೋನ ಕರ್ತವ್ಯ ನಿರತ ನರ್ಸ್ ಗಳ ಬಗ್ಗೆ ಯೂ ನಮಗೆ ಹೆಚ್ಚು ಕಾಳಜಿ ಇರಬೇಕು. ಅವರಿಗಾಗಿ ಅವರ ಕುಟುಂಬದ ಹಿತದೃಷ್ಟಿಯಿಂದ ನಾವು ಮನೆಯಲ್ಲೇ ಇರೋಣ.
ಕಾರಂಟೈನ್ ಅನುಭವಿಸಿದವರ ಅನುಭವಗಳು ಮುಂದೆ ಆಗಬಹುದಾದ ಭಯಾನಕತೆಯ ಕಡೆಗೆ ಬೆಳಕು ಚೆಲ್ಲತ್ತದೆ. ಅವರ ಅನುಭವಗಳನ್ನು ಗಂಭೀರವಾಗಿ ಪರಿಗಣಿಸೋಣ. ಪ್ರತಿ ಕುಟುಂಬ ಸೇರಿ ಸಮಾಜವಾಗುತ್ತದೆ. ಪ್ರತೀ ಕುಟುಂಬ ತೀರ್ಮಾನಿಸಿ ಕಟ್ಟುನಿಟ್ಟಿನ ಕ್ರಮ ಪಾಲಿಸುವುದು ಅಸಾಧ್ಯವೇನಲ್ಲ. ಆರಂಭದಲ್ಲಿ ಒಂದು ಎರಡು ಪಾಸಿಟಿವ್ ಕೇಸುಗಳಷ್ಟೇ ವರದಿಯಾಗುತ್ತಿದ್ದವು. ಇದೀಗ ಪಾಸಿಟಿವ್ ಪ್ರಕರಣಗಳು ಹೆಚ್ಚಾಗು ತ್ತಲೇ ಇದೆ. ಲಾಕ್ ಡೌನ್ ಸಡಿಲಿಕೆಯಾಗಿದೆ. ಸರಕಾರದ ದೌರ್ಬಲ್ಯ ಎದ್ದು ಕಾಣುತ್ತಿದೆ. ಇದಕ್ಕೆ ಆಂತರಿಕ ಕಾರಣಗಳಿರಲೂಬಹುದು. ಆದ್ದರಿಂದ ಸರಕಾರದ ಸಡಿಲಿಕೆ ನೀತಿಯನ್ನು ನಾವು ದುರುಪಯೋಗಪಡಿಸದೆ ಸಾಧ್ಯವಾದಷ್ಟು ಮನೆಯಲ್ಲಿರುವ ಮೂಲಕ ಸರಕಾರಕ್ಕೆ ನೆರವಾಗೋಣ. ಕೋವಿಡ್ 19 ವಿರುದ್ಧ ಜಯಸಾಧಿಸೋಣ. ದೇವನು ಅನುಗ್ರಹಿಸಲಿ.