ಕ್ವಾರಂಟೈನ್ ಅವಧಿ ಮುಗಿದರೂ ಮನೆಗೆ ಕಳುಹಿಸುತ್ತಿಲ್ಲ: ಕಾರ್ಮಿಕರ ಆಕ್ರೋಶ
ಯಾದಗಿರಿ, ಮೇ 28: ಯಾದಗಿರಿ ಜಿಲ್ಲೆಯ ವಿವಿಧೆಡೆ ವಲಸೆ ಕಾರ್ಮಿಕರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದ್ದು, ಅವಧಿ ಮುಗಿದರೂ ವರದಿ ಬಂದಿಲ್ಲದ ಕಾರಣ ಅಧಿಕಾರಿಗಳು ಮನೆಗೆ ಕಳುಹಿಸುತ್ತಿಲ್ಲ. ಸ್ವಾಬ್ ಸಂಗ್ರಹಿಸದ ಅಧಿಕಾರಿಗಳ ವಿರುದ್ಧ ಕ್ವಾರಂಟೈನ್ನಲ್ಲಿರುವ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಶೆಟ್ಟಿಗೇರಾ ಗ್ರಾಮದಲ್ಲಿ ಗುರುವಾರ ಕ್ವಾರಂಟೈನ್ನಲ್ಲಿದ್ದ ವಲಸಿಗರು ತಮ್ಮನ್ನು ತಮ್ಮ ಊರುಗಳಿಗೆ ಕಳಿಸಿಕೊಡಿ ಎಂದು ಪಟ್ಟು ಹಿಡಿದು ಗೇಟಿನ ಬೀಗ ಮುರಿದು ಹಾಕಿದ್ದಾರೆ. ನಂತರ ಅಲ್ಲಿಯೇ ಇದ್ದ ಪೊಲೀಸ್ ಕಾನ್ಸ್ಟೇಬಲ್ ಅವರನ್ನು ತಡೆದಿದ್ದಾರೆ.
ಕ್ವಾರಂಟೈನ್ ಮಾಡಿ 18 ದಿನಗಳು ಆಯಿತು. ಶನಿವಾರ ಟೆಸ್ಟಿಂಗ್ ಮಾಡಲಿಕ್ಕೆ ಗಂಟಲು ದ್ರವ ತೆಗೆದುಕೊಂಡು ಹೋಗಿದ್ದಾರೆ. ಇದುವರೆಗೆ ಫಲಿತಾಂಶ ಬಂದಿಲ್ಲ. ಇಲ್ಲಿ ಸರಿಯಾದ ಊಟ ಇಲ್ಲ. ಉಪ್ಪಿಟ್ಟು, ಅನ್ನ ಬಿಟ್ಟರೆ ರೊಟ್ಟಿ, ಚಪಾತಿ ಕೊಡುತ್ತಿಲ್ಲ. ನಮ್ಮದು ಕೊಡೇಕಲ್, ಜೇವರ್ಗಿ ಸುರಪುರ ತಾಲೂಕು ಇದೆ. ಚಿಕ್ಕಮಕ್ಕಳಿಗೆ ಹಾಲಿನ ವ್ಯವಸ್ಥೆ ಕೂಡ ಮಾಡಿಲ್ಲ ಎಂದು ದೂರಿದ್ದಾರೆ.
ಗುರುಮಿಠಕಲ್, ಗುಂಜನೂರ್, ಮಲ್ಹಾರ್ ಮತ್ತು ಅಲ್ಲಿಪುರ ಆದರ್ಶ ಶಾಲೆಯ ಕ್ವಾರಂಟೈನ್ನಲ್ಲಿ ಅವಧಿ ಮುಗಿದರೂ ಇನ್ನೂ ಪರೀಕ್ಷೆಗೆ ಒಳಪಡಿಸಿಲ್ಲ ಎಂದು ತಮ್ಮ ನೋವು ವ್ಯಕ್ತಪಡಿಸಿದ್ದಾರೆ.