ಋತುಚಕ್ರ ಶುಚಿತ್ವ ನಿರ್ವಹಣೆ ಸಾಪ್ತಾಹಿಕ ಕಾರ್ಯಕ್ರಮ

ಉಡುಪಿ, ಮೇ 30: ಜಿಲ್ಲೆಯಲ್ಲಿ ಋತುಚಕ್ರ ಶುಚಿತ್ವ ನಿರ್ವಹಣೆ ಸಾಪ್ತಾಹಿಕ ಕಾರ್ಯಕ್ರಮ ಜೂನ್ 3ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಋತುಚಕ್ರದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ ತಿಳಿಸಿದ್ದಾರೆ.
ಮಣಿಪಾಲದ ಜಿಪಂ ಸಭಾಂಗಣದಲ್ಲಿ ನಡೆದ ಋತುಚಕ್ರ ಮಾಸಾಚರಣೆ ಕುರಿತು ಮಾಹಿತಿ ನೀಡಿ ಮಾತನಾಡಿದರು. ಋತುಚಕ್ರ ಎಂಬುದು ಮುಜುಗರ ಪಡುವ ವಿಷಯವಲ್ಲ. ಇದೊಂದು ನೈಸರ್ಗಿಕ ಪ್ರಕ್ರಿಯೆಯ. ಈ ಬಗ್ಗೆ ಇಂದಿಗೂ ಸ್ತ್ರೀಯರಿಗೆ ಹಲವು ನಿಬರ್ಂಧಗಳಿವೆ. ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದವರು ವಿವರಿಸಿದರು.
ಇಂದಿಗೂ ಶೇ.64ರಷ್ಟು ಮಹಿಳೆಯರು ಋತುಚಕ್ರ ಸಂದರ್ಭದಲ್ಲಿ ಅಸುರಕ್ಷತಾ ವಿಧಾನಗಳನ್ನು ಬಳಸುತ್ತಿದ್ದು, ಶೇ.20 ಹೆಣ್ಣುಮಕ್ಕಳು ಶಾಲೆಯಿಂದ ಹೊರಗುಳಿಯುತಿದ್ದಾರೆ. ಸೇ.64 ಮಹಿಳೆಯರು ಸೂಕ್ತ ರೀತಿಯಲ್ಲಿ ಪ್ಯಾಡ್ ಗಳನ್ನು ವಿಲೇವಾರಿ ಮಾಡುತ್ತಿಲ್ಲ ಮತ್ತು ಶೇ.77 ಮಹಿಳೆಯರು ಈಗಲೂ ಋತುಚಕ್ರದ ಸಂದರ್ಭದಲ್ಲಿ ಹಲವು ನಿರ್ಬಂಧಗಳಿಗೆ ಒಳಗಾಗುತ್ತಾರೆ. ಇವೆಲ್ಲದರ ಬಗ್ಗೆ ಅರಿವು ಮೂಡಿಸುವುದು ಈ ಸಾಪ್ತಾಹಿಕದ ಉದ್ದೇಶ ಎಂದು ಹೇಳಿದರು.
ಋತುಚಕ್ರವನ್ನು 28 ದಿನಗಳೆಂದು ಪರಿಗಣಿಸಿದ್ದು, ಇದಕ್ಕಾಗಿ ವಿಶೇಷವಾಗಿ ತಯಾರಿಸಲಾದ 28 ಮಣಿಗಳ ಬ್ರಾಸ್ಲೆಟ್ನ್ನು ಧರಿಸುವ ಮೂಲಕ ಋತುಚಕ್ರ ಕ್ಕಿರುವ ಕಳಂಕವನ್ನು ದೂರ ಮಾಡಿ, ಅದನ್ನು ಸಹಜವಾಗಿ ಸ್ವೀಕರಿಸಲು ಜಾಗೃತಿ ಮೂಡಿಸಬೇಕಿದ್ದು, ಈ ಬ್ರಾಸ್ಲೆಟ್ನ್ನು ಅಧ್ಯಕ್ಷ ದಿನಕರಬಾಬು ಸೇರಿದಂತೆ ಎಲ್ಲಾ ಸದಸ್ಯರು ಧರಿಸಿ, ಜಾಗೃತಿ ಮೂಡಿಸಿದರು.
ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೋಭಾ ಜಿ. ಪುತ್ರನ್, ಪ್ರತಾಪ್ ಹೆಗ್ಡೆ ಮಾರಾಳಿ, ಸುಮಿತ್ ಶೆಟ್ಟಿ, ಜಿಪಂ ಸಿಇಓ ಪ್ರೀತಿ ಗೆಹ್ಲೋಟ್, ಉಪಕಾರ್ಯದರ್ಶಿ ಕಿರಣ್ ಫಡ್ನೇಕರ್, ಮುಖ್ಯಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.







