ಮಿಡತೆ ಕಾಟಕ್ಕೆ ಪಟಾಕಿ ಸಿಡಿಸಿ, ಡ್ರಮ್ ಬಾರಿಸಿ ಎಂದ ಮಹಾರಾಷ್ಟ್ರ ಗೃಹ ಸಚಿವ
ನಾಗ್ಪುರ: ಮಿಡತೆ ಮಾರುತದಿಂದ ಪಾರಾಗುವ ಸಲುವಾಗಿ ರೈತರು ಹೊಲಗಳಲ್ಲಿ ಪಟಾಕಿ ಸಿಡಿಸಿ, ಡ್ರಮ್ ಬಾರಿಸುವಂತೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಕರೆ ನೀಡಿದ್ದಾರೆ.
ತಮ್ಮ ಕತೋಲ್ ಕ್ಷೇತ್ರದಲ್ಲಿ ಮಿಡತೆ ದಾಳಿಯ ಸ್ಥಿತಿ ಅವಲೋಕಿಸಿ ಮಾತನಾಡಿದ ಅವರು, “ಮಿಡತೆ ದಾಳಿಯ ವೇಳೆ ಗ್ರಾಮಸ್ಥರು ಎಚ್ಚರವಿರಬೇಕು. ಪಟಾಕಿ ಸಿಡಿಸುವ ಮೂಲಕ, ಟೈರ್ ಉರಿಸುವ ಮೂಲಕ ಮತ್ತು ಡ್ರಮ್ ಬಾರಿಸುವ ಮೂಲಕ ಈ ದಾಳಿಯಿಂದ ತಪ್ಪಿಸಿಕೊಳ್ಳಬಹುದು” ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಶೇಕಡ 50ರಷ್ಟು ಮಿಡತೆಗಳನ್ನು ಕೃಷಿ ಇಲಾಖೆ ವತಿಯಿಂದ ಸಂಹರಿಸಲಾಗಿದೆ ಎಂದು ಕೃಷಿ ಸಚಿವ ದಾದಾ ಭೂಸೆ ಹೇಳಿಕೆ ನೀಡಿದ್ದಾರೆ.
“ಶೇಕಡ 50ರಷ್ಟು ಮಿಡತೆಗಳನ್ನು ಕೃಷಿ ಇಲಾಖೆ ನಾಶಪಡಿಸಿದೆ. ಅಗ್ನಿಶಾಮಕ ದಳದ ವಾಹನಗಳನ್ನು ಬಳಸಿ ಕೀಟನಾಶಕ ಸಿಂಪಡಿಸಲಾಗಿದೆ. ತೊಂದರೆಗೀಡಾದ ಪ್ರದೇಶಗಳ ರೈತರಿಗೆ ಉಚಿತವಾಗಿ ರಾಸಾಯನಿಕ/ ಕೀಟನಾಶಗಳನ್ನು ವಿತರಿಸಲಾಗುತ್ತಿದೆ” ಎಂದು ಅವರು ವಿವರಿಸಿದರು.
ಪಾಕಿಸ್ತಾನದಿಂದ ರಾಜಸ್ಥಾನ, ಪಂಜಾಬ್, ಹರ್ಯಾಣ ಮತ್ತು ಮಧ್ಯಪ್ರದೇಶಕ್ಕೆ ಆಗಮಿಸಿರುವ ಮಿಡತೆ ಮಾರತ, ಬೆಳೆದು ನಿಂತ ಪೈರು, ತರಕಾರಿಗಳನ್ನು ನಾಶಪಡಿಸುತ್ತದೆ ಎಂದು ಪರಿಸರ ಸಚಿವಾಲಯದ ವಕ್ತಾರ ಎಚ್ಚರಿಸಿದ್ದಾರೆ.