ಕುಂಬಳೆಯಲ್ಲಿ ಮಾದಕ ವಸ್ತು ಸಾಗಾಟ: ಆರು ಕೆಜಿ ಗಾಂಜಾ ಸಹಿತ ಮೂವರು ಆರೋಪಿಗಳ ಸೆರೆ
ಕಾಸರಗೋಡು, ಜೂ.2: ಕಾರಿನಲ್ಲಿ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಭೇದಿಸಿರುವ ಕುಂಬಳೆ ಪೊಲೀಸರು ಆರು ಮಂದಿ ಆರೋಪಿಗಳನ್ನು ಮಂಗಳವಾರ ಮುಂಜಾನೆ ಬಂಧಿಸಿದ್ದಾರೆ. ಬಂಧಿತರಿಂದ ಆರು ಕೆಜಿ ಗಾಂಜಾ ಹಾಗೂ ಸಾಗಾಟಕ್ಕೆ ಬಳಸುತ್ತಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ತಲಶ್ಯೇರಿ ನಿವಾಸಿ ಹರ್ಷಾದ್(20), ಸೀತಾಂಗೋಳಿ ಮುಗು ನಿವಾಸಿ ಮುಹಮ್ಮದ್ ಶರೀಫ್(20) ಮತ್ತು ತಲಶ್ಯೇರಿ ಧರ್ಮಡ್ಕ ನಿವಾಸಿ ಸಲ್ಮಾನ್ ಮಿನ್ಶಾದ್(22) ಬಂಧಿತ ಆರೋಪಿಗಳಾಗಿದ್ದಾರೆ.
ಇಂದು ಮುಂಜಾನೆ ಕುಂಬಳೆ ಪೇಟೆ ಯಲ್ಲಿ ಗಸ್ತು ತಿರುಗುತ್ತಿದ್ದ ಕುಂಬಳೆ ಠಾಣಾ ಎಎಸ್ಸೈ ವಿನೋದ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಮೂವರು ಆರೋಪಿಗಳನ್ನು ಬಂಧಿಸಿ ಗಾಂಜಾವನ್ನು ವಶಪಡಿಸಿಕೊಂಡಿದೆ.
ಆರೋಪಿಗಳು ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರನ್ನು ಕಂಡು ಕಾರು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಬೆನ್ನಟ್ಟಿದ ಪೊಲೀಸರು ಅವರನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Next Story