ಕೆಎಸ್ಸಾರ್ಟಿಸಿ ಬಸ್ಗಳಲ್ಲಿ ಸಂಚರಿಸಲು ಜನರ ಹಿಂದೇಟು!
ಬೆಂಗಳೂರು, ಜೂ.2: ಸುರ್ದೀಘ ಲಾಕ್ಡೌನ್ನಿಂದಾಗಿ ಕಂಗೆಟ್ಟಿದ್ದ ಕೆಎಸ್ಸಾರ್ಟಿಸಿ ಮರು ಸಂಚಾರವನ್ನು ಆರಂಭಿಸಿದ್ದರೂ ಕೊರೋನ ಭೀತಿಯಿಂದ ಬಸ್ಗಳಲ್ಲಿ ಪ್ರಯಾಣಿಸಲು ಪ್ರಯಾಣಿಕರು ಹಿಂದೇಟು ಹಾಕುತ್ತಿದ್ದಾರೆ.
ರಾಜ್ಯದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಆದರೂ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಸರಕಾರದ ಸೂಚನೆ ಮೇರೆಗೆ ಕೆಎಸ್ಸಾರ್ಟಿಸಿ ಸಾಕಷ್ಟು ಬಸ್ಗಳ ಸಂಚಾರ ಆರಂಭಿಸಿದೆ.
ಮೊದಲೆರಡು ದಿನಗಳಲ್ಲಿ ಅಲ್ಲಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ಹೊರಡಲು ಕೆಎಸ್ಸಾರ್ಟಿಸಿಯಲ್ಲಿ ಪಯಣಿಸಿದ್ದರೂ ಆ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದ್ದು, ನಷ್ಟದಲ್ಲಿ ಬಸ್ಗಳನ್ನು ಓಡಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಕೊರೋನ ಸಂಕಷ್ಟದಲ್ಲೂ ಮುಂಜಾಗ್ರತೆ ವಹಿಸಿ, ಸಾಮಾಜಿಕ ಅಂತರ ಪಾಲನೆ ಮಾಡುವ ಮೂಲಕ ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರಿಗೆ ಬಸ್ಗಳಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆದುದರಿಂದ ಕೆಎಸ್ಸಾರ್ಟಿಸಿ ಬೊಕ್ಕಸಕ್ಕೂ ನಷ್ಟವಾಗುತ್ತಿದ್ದು, ಇದೇ ರೀತಿ ಪ್ರಯಾಣಿಕರ ನಿರುತ್ಸಾಹದಲ್ಲಿಯೇ ಎಷ್ಟು ದಿನ ಬಸ್ಗಳನ್ನು ಖಾಲಿ ಓಡಿಸಬೇಕು ಎಂಬುದು ಚಿಂತೆ ಮಾಡುವಂತೆ ಮಾಡಿದೆ.
ಮೇ 19ರಿಂದ ಜೂನ್ 1ರವರೆಗೆ ರಾಜ್ಯಾದ್ಯಂತ 39,383 ಕೆಎಸ್ಸಾರ್ಟಿಸಿ ಬಸ್ಗಳಲ್ಲಿ ಒಟ್ಟು ಸಂಖ್ಯೆ 12,25,884 ಮಂದಿ ಪ್ರಯಾಣಿಸಿದ್ದಾರೆ. ಇನ್ನು ಬೆಂಗಳೂರಿನಿಂದ ಹೊರಗೆ ಹೋಗುತ್ತಿರುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಬೆಂಗಳೂರಿಗೆ ಬರುತ್ತಿರುವವರ ಸಂಖ್ಯೆ ಹೆಚ್ಚಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ನಲ್ಲಿಯೂ ಭಾರೀ ಕುಸಿತ ಕಂಡಿದೆ.
ಸಿಬ್ಬಂದಿಗೆ ವೇತನ ರಜೆ ಬಗ್ಗೆ ಚಿಂತನೆ: ಲಾಕ್ಡೌನ್ನಿಂದ ಸಂಕಷ್ಟ ಅನುಭವಿಸುತ್ತಿರುವ ಕೆಎಸ್ಸಾರ್ಟಿಸಿ ಆರ್ಥಿಕ ಹೊರೆಯನ್ನು ತಪ್ಪಿಸಲು ವಿವಿಧ ಮಾರ್ಗೋಪಾಯಗಳ ಮೊರೆ ಹೋಗುತ್ತಿದ್ದು, ಇದಕ್ಕಾಗಿ ಅಧಿಕಾರಿಗಳು ತೀವ್ರ ಕಸರತ್ತು ನಡೆಸಿದ್ದಾರೆ. ಕೆಎಸ್ಸಾರ್ಟಿಸಿ ತನ್ನ ಸಿಬ್ಬಂದಿಗೆ ವೇತನ ರಹಿತ ಕಡ್ಡಾಯ ರಜೆ ನೀಡಲು ಚಿಂತನೆ ನಡೆಸಿದೆ.
ಆರ್ಥಿಕ ಹೊರೆ ತಪ್ಪಿಸಲು ಶೇಕಡಾ 50ರಷ್ಟು ಸಿಬ್ಬಂದಿಗೆ ನಾಲ್ಕು ತಿಂಗಳ ಕಡ್ಡಾಯ ರಜೆ ನೀಡುವ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎನ್ನಲಾಗಿದೆ. 1.20 ಲಕ್ಷ ಸಿಬ್ಬಂದಿಗಳಲ್ಲಿ 60 ಸಾವಿರ ಸಿಬ್ಬಂದಿಗೆ ಕಡ್ಡಾಯವಾಗಿ ರಜೆ ನೀಡಲು ಇಲಾಖೆ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಭದ್ರತೆ ಹಾಗೂ ಹೊರ ಗುತ್ತಿಗೆ ನೌಕರರನ್ನು ಕೈ ಬಿಡುವ ಬಗ್ಗೆಯೂ ಇಲಾಖೆ ತೀರ್ಮಾನ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಇಲಾಖೆಯಲ್ಲಿ 50 ವರ್ಷ ಮೇಲ್ಪಟ್ಟವರು, ಮಧುಮೇಹ ಮತ್ತಿತರ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ರಜೆ ನೀಡುವುದು ಅಥವಾ ಸಂಸ್ಥೆಯಲ್ಲಿರುವ 1.20 ಲಕ್ಷ ಸಿಬ್ಬಂದಿಗೆ ರೊಟೇಷನ್ ಆಧಾರದಲ್ಲಿ ಕರ್ತವ್ಯ ವಹಿಸುವುದು. ಅಂದರೆ ಪ್ರತಿ 15 ದಿನ ಕೆಲಸ ಮಾಡಿದರೆ, ಇನ್ನು 15 ದಿನ ರಜೆ ನೀಡುವುದು ಎಂಬ ಪ್ರಸ್ತಾವನೆ ಸಲ್ಲಿಕೆಯಾಗಿದೆ.