ಜೆಸ್ಸಿಕಾ ಲಾಲ್ ಕೊಲೆ ಪ್ರಕರಣದ ದೋಷಿ ಮನು ಶರ್ಮ ಅವಧಿಪೂರ್ವ ಬಿಡುಗಡೆ
ಹೊಸದಿಲ್ಲಿ, ಜೂ. 2: ಜೆಸ್ಸಿಕಾ ಲಾಕ್ ಕೊಲೆ ಪ್ರಕರಣದಲ್ಲಿ ಅಪರಾಧ ಸಾಬೀತಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮನು ಶರ್ಮನನ್ನು ಅವಧಿಗೆ ಮೊದಲೇ ಬಿಡುಗಡೆಗೊಳಿಸುವ ದಿಲ್ಲಿ ಸರಕಾರದ ಶಿಫಾರಸನ್ನು ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಅನುಮೋದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಿಲ್ಲಿ ಸರಕಾರದ ಗೃಹ ಸಚಿವ ಸತ್ಯೇಂದ್ರ ಜೈನ್ ಅಧ್ಯಕ್ಷತೆಯಲ್ಲಿ ಮೇ 11ರಂದು ನಡೆದ ದಂಡಾದೇಶ ವಿಮರ್ಶೆ ಮಂಡಳಿ ಸಭೆಯಲ್ಲಿ ಶರ್ಮನನ್ನು ಅವಧಿಗೆ ಮುನ್ನವೇ ಜೈಲಿನಿಂದ ಬಿಡುಗಡೆಗೊಳಿಸುವಂತೆ ಶಿಫಾರಸು ಮಾಡಲಾಗಿತ್ತು.
ರೆಸ್ಟಾರೆಂಟ್ ಒಂದರಲ್ಲಿ ಸರ್ವರ್ ಆಗಿ ಕೆಲಸ ಮಾಡುತ್ತಿದ್ದ ಜೆಸ್ಸಿಕಾ ಲಾಲ್ಳನ್ನು 1999ರ ಎಪ್ರಿಲ್ 30ರಂದು ರೆಸ್ಟಾರೆಂಟ್ನಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮದ್ಯ ಪೂರೈಸಲು ನಿರಾಕರಿಸಿದ ಸಿಟ್ಟಿನಲ್ಲಿ ಮನು ಶರ್ಮ ಗುಂಡು ಹಾರಿಸಿದ್ದ ಎಂದು ಆರೋಪಪಟ್ಟಿ ದಾಖಲಿಸಲಾಗಿತ್ತು. ಶರ್ಮ ಮಾಜಿ ಕೇಂದ್ರ ಸಚಿವ ವಿನೋದ್ ಶರ್ಮರ ಪುತ್ರ. 2006ರಲ್ಲಿ ಈತನಿಗೆ ದಿಲ್ಲಿಯ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಶಿಕ್ಷೆಯನ್ನು 2010ರಲ್ಲಿ ಸುಪ್ರೀಂಕೋರ್ಟ್ ಎತ್ತಿಹಿಡಿದಿತ್ತು.