ಈಗ ರೈತರು ತಮ್ಮ ಉತ್ಪನ್ನಗಳನ್ನು ರಾಜ್ಯದ ಹೊರಗೂ ಮಾರಬಹುದು
ಅಗತ್ಯ ಸರಕುಗಳ ಕಾಯ್ದೆಯ ತಿದ್ದುಪಡಿಗಳಿಗೆ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ
ಹೊಸದಿಲ್ಲಿ,ಜೂ.3: ಕೇಂದ್ರ ಸಂಪುಟವು ಅಗತ್ಯ ಸರಕುಗಳ ಕಾಯ್ದೆ,1955ಕ್ಕೆ ತಿದ್ದುಪಡಿಗಳಿಗೆ ಬುಧವಾರ ಒಪ್ಪಿಗೆ ನೀಡಿದ್ದು,ಈಗ ರೈತರು ತಮ್ಮ ಉತ್ಪನ್ನಗಳನ್ನು ತಮ್ಮ ರಾಜ್ಯಗಳ ಹೊರಗೆ ಮಾರಾಟ ಮಾಡಬಹುದಾಗಿದೆ. ಇದರೊಂದಿಗೆ ಭಾರತವು ‘ಒಂದು ದೇಶ ಒಂದು ಮಾರುಕಟ್ಟೆ’ ವ್ಯವಸ್ಥೆಯತ್ತ ಹೆಜ್ಜೆಯನ್ನು ಹಾಕಿದಂತಾಗಿದೆ.
ನೂತನ ತಿದ್ದುಪಡಿಗಳು ರೈತರು ಇನ್ನು ಮುಂದೆ ರಾಜ್ಯ ಸರಕಾರಗಳ ಅಧೀನದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಮಾತ್ರ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕೆಂಬ ನಿಯಮವನ್ನು ತೊಡೆದುಹಾಕಿವೆ. ದಶಕಗಳಷ್ಟು ಹಳೆಯದಾದ ಈ ಸಮಿತಿಗಳು ತಮ್ಮಿಂದ ಉತ್ಪನ್ನಗಳ ಖರೀದಿಯಲ್ಲಿ ಅನ್ಯಾಯವೆಸಗುತ್ತಿವೆ ಎಂದು ರೈತರು ಆಗಾಗ್ಗೆ ದೂರುತ್ತಲೇ ಬಂದಿದ್ದರು.
“ಇಂದು ರೈತರ ಪಾಲಿಗೆ ಐತಿಹಾಸಿಕ ದಿನವಾಗಿದೆ. ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಲಭಿಸಿದ್ದರೆ ರೈತರಿಗೆ ಇಂದು ಸ್ವಾತಂತ್ರ್ಯಲಭಿಸಿದೆ” ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಬಣ್ಣಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಅವರು,ರೈತರನ್ನು ಎಪಿಎಂಸಿಯ ನಿರ್ಬಂಧಗಳಿಂದ ಮುಕ್ತಗೊಳಿಸಲಾಗಿದೆ. ರೈತರ ಉತ್ಪನ್ನಗಳ ಮಾರಾಟದ ಮೇಲಿನ ನಿಯಂತ್ರಣದಲ್ಲಿ ಉದಾರೀಕರಣದ ಐತಿಹಾಸಿಕ ನಿರ್ಧಾರವು ಅವರಿಗೆ ಲಾಭದಾಯಕವಾಗುವ ಜೊತೆಗೆ ಕೃಷಿ ಕ್ಷೇತ್ರದಲ್ಲಿ ಪರಿವರ್ತನೆಯನ್ನು ತರಲಿದೆ ಎಂದು ಹೇಳಿದರು.
ವರ್ಷಗಳಿಂದಲೂ ಎಪಿಎಂಸಿಗಳ ಮೂಲಕವೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕಾದ ಅನಿವಾರ್ಯತೆಯಲ್ಲಿದ್ದರಿಂದ ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಬದ್ಧ ಬೆಲೆಗಳನ್ನು ಪಡೆಯಲು ಈ ಸಮಿತಿಗಳು ಅಡ್ಡಿಯಾಗಿದ್ದವು. ಸಮಿತಿಗಳ ನಿಯಮಗಳಂತೆ ರೈತರು ಮುಕ್ತ ಮಾರುಕಟ್ಟೆಗಳ ಬದಲು ಅಧಿಸೂಚಿತ ಮಾರುಕಟೆಗಳಲ್ಲಿನ ಪರವಾನಿಗೆ ಹೊಂದಿರುವ ಮಧ್ಯವರ್ತಿಗಳಿಗೆ ಮಾತ್ರ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕಿತ್ತು. ಎಪಿಎಂಸಿ ಮಾರುಕಟ್ಟೆಗಳಲ್ಲಿ ಕೆಲವೇ ವ್ಯಾಪಾರಿಗಳಿರುವುದರಿಂದ ತಮ್ಮ ಉತ್ಪನ್ನಗಳನ್ನು ಖಾಲಿ ಮಾಡಲು ರೈತರು ಅವುಗಳನ್ನು ಅಗ್ಗದ ಬೆಲೆಗಳಲ್ಲಿ ಮಾರಾಟ ಮಾಡುವಂತಾಗುತ್ತಿತ್ತು. ಅಲ್ಲದೆ ವ್ಯಾಪಾರಿಗಳು ತಮ್ಮದೇ ಆದ ಕೂಟಗಳನ್ನು ರಚಿಸಿಕೊಂಡು ಖರೀದಿ ಬೆಲೆಗಳು ಕಡಿಮೆಯಿರುವಂತೆ ನೋಡಿಕೊಳ್ಳುತ್ತಿದ್ದರು. ಇದರಿಂದಾಗಿ ಬೆಳೆದ ರೈತನಿಗಿಂತ ಮಧ್ಯವರ್ತಿಗಳಿಗೆ ಹೆಚ್ಚು ಲಾಭವಾಗುತ್ತಿತ್ತು ಮತ್ತು ಅಂತಿಮವಾಗಿ ಬಳಕೆದಾರ ದುಬಾರಿ ಬೆಲೆಗಳನ್ನು ತೆರುವಂತಾಗಿತ್ತು.
ರೈತರು ತಮ್ಮ ಉತ್ಪನ್ನಗಳನ್ನು ಆಕರ್ಷಕ ಬೆಲೆಗಳಲ್ಲಿ ಮಾರಾಟ ಮಾಡುವಂತಾಗಲು ನೂತನ ಕಾನೂನನ್ನು ತರುವುದಾಗಿ ಸರಕಾರವು ಕಳೆದ ಮೇ 15ರಂದು ತಿಳಿಸಿತ್ತು.
ನೂತನ ಕಾನೂನು ಅಂತರರಾಜ್ಯ ಮಾರಾಟ ನಿರ್ಬಂಧಗಳನ್ನು ನಿವಾರಿಸಲಿದೆ. ಇದರಿಂದಾಗಿ ಒಂದು ರಾಜ್ಯದ ರೈತರು ಇ-ಟ್ರೇಡಿಂಗ್ ವ್ಯವಸ್ಥೆಯ ಮೂಲಕ ಇನ್ನೊಂದು ರಾಜ್ಯದ ಖರೀದಿದಾರರು ಮತ್ತು ವ್ಯಾಪಾರಿಗಳಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಬಹುದಾಗಿದೆ.
ರಫ್ತು ಸಮಿತಿಯ ಶಿಫಾರಸುಗಳ ಆಧಾರದಲ್ಲಿ ನಿರ್ಬಂಧಗಳ ನಿವಾರಣೆಯಿಂದಾಗಿ ವ್ಯಾಪಾರಿಗಳು ರೈತರಿಂದ ನೇರವಾಗಿ ದೊಡ್ಡಪ್ರಮಾಣಗಳಲ್ಲಿ ಉತ್ಪನ್ನಗಳನ್ನು ಖರೀದಿಸಬಹುದು. ಭರ್ಜರಿ ಬೆಳೆಗಳು ಬಂದಾಗ ಹೆಚ್ಚಾಗಿ ರೈತರು ಅಗ್ಗದ ಬೆಲೆಗಳಲ್ಲಿ ಸಗಟು ಮಾರುಕಟ್ಟೆಗಳಲ್ಲಿ ತಮ್ಮ ಉತ್ಪನ್ನಗಳನ್ನು ಗುಡ್ಡೆಹಾಕುತ್ತಾರೆ. ಇಂತಹ ಸಮಯದಲ್ಲಿ ವ್ಯಾಪಾರಿಗಳಿಂದ ನೇರವಾಗಿ ದೊಡ್ಡ ಪ್ರಮಾಣದಲ್ಲಿ ಖರೀದಿ ರೈತರಿಗೆ ನೆರವಾಗಲಿದೆ.