ಕೊರೋನ ಸೋಂಕಿತನ ಅಂತ್ಯ ಸಂಸ್ಕಾರದ ವೇಳೆ ಸ್ಥಳೀಯರ ದಾಳಿ: ಅರ್ಧ ಬೆಂದ ಶವದೊಂದಿಗೆ ಓಡಿ ಹೋದ ಕುಟುಂಬಸ್ಥರು
ಜಮ್ಮು,ಜೂ.3: ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟಿದ್ದ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಅಡ್ಡಿಯನ್ನೊಡ್ಡಿದ ಗುಂಪೊಂದು ಆತನ ಕುಟುಂಬದ ಸದಸ್ಯರು ಅರೆಬೆಂದ ಶವದೊಂದಿಗೆ ಪರಾರಿಯಾಗುವಂತೆ ಮಾಡಿದ ಹೃದಯಹೀನ ಘಟನೆ ಜಮ್ಮುವಿನಲ್ಲಿ ನಡೆದಿದೆ.
ಮಧ್ಯಪ್ರವೇಶಿಸಿದ ಆಡಳಿತವು ಬಳಿಕ ಬೇರೆ ಸ್ಥಳದಲ್ಲಿ ಶಿಷ್ಟಾಚಾರದಂತೆ ಅಂತ್ಯಸಂಸ್ಕಾರ ನೆರವೇರುವಂತೆ ಮಾಡಿದೆ. ಈ ವೇಳೆ ಮೃತನ ಪತ್ನಿ ಮತ್ತು ಮತ್ತು ಆತನ ಇಬ್ಬರು ಪುತ್ರರು ಸೇರಿದಂತೆ ನಿಕಟ ಸಂಬಂಧಿಕರು ಮಾತ್ರ ಉಪಸ್ಥಿತರಿದ್ದರು.
ಸೋಮವಾರ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ 72ರ ಹರೆಯದ ವೃದ್ಧರೊಬ್ಬರು ಮೃತಪಟ್ಟಿದ್ದು,ಇದು ಜಮ್ಮು ಪ್ರದೇಶದಲ್ಲಿ ಕೊರೋನ ವೈರಸ್ ಸೋಂಕಿನಿಂದ ನಾಲ್ಕನೇ ಪ್ರಕರಣವಾಗಿದೆ.
ಅಂತ್ಯಸಂಸ್ಕಾರದ ಸಂದರ್ಭ ಸ್ಥಳೀಯರ ಗುಂಪೊಂದು ಅಲ್ಲಿದ್ದವರ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೆ, ದೊಣ್ಣೆಗಳಿಂದ ಹಲ್ಲೆಯನ್ನೂ ನಡೆಸಿತ್ತು. ಹೀಗಾಗಿ ತಮ್ಮ ಜೀವವುಳಿಸಿಕೊಳ್ಳಲು ಅವರೆಲ್ಲ ಅರೆಬೆಂದಿದ್ದ ಶವವನ್ನು ಎತ್ತಿಕೊಂಡು ಅಲ್ಲಿಂದ ಪರಾರಿಯಾಗಿದ್ದರು.
“ಶವವನ್ನು ಅಂತ್ಯಸಂಸ್ಕಾರಕ್ಕಾಗಿ ನಮ್ಮ ತವರು ಜಿಲ್ಲೆಗೊಯ್ಯಲು ನಾವು ಸರಕಾರದಿಂದ ಅನುಮತಿಯನ್ನು ಕೋರಿದ್ದೆವು. ಆದರೆ ಇಲ್ಲಿ ಎಲ್ಲ ಅಗತ್ಯ ವ್ಯವಸ್ಥೆಗಳಿದ್ದು,ಅಂತ್ಯಸಂಸ್ಕಾರ ಸಂದರ್ಭದಲ್ಲಿ ಯಾವುದೇ ತೊಂದರೆಯುಂಟಾಗುವುದಿಲ್ಲ ಎಂದು ಅಧಿಕಾರಿಗಳು ನಮಗೆ ತಿಳಿಸಿದ್ದರು” ಎಂದು ಮೃತವ್ಯಕ್ತಿಯ ಪುತ್ರ ಸುದ್ದಿಗಾರರಿಗೆ ಹೇಳಿದ. ತಮ್ಮ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಅಲ್ಲಿದ್ದ ಇಬ್ಬರು ಪೊಲೀಸರು ನೆರವಾಗಲಿಲ್ಲ. ಅವರ ಜೊತೆಯಲ್ಲಿದ್ದ ಕಂದಾಯಾಧಿಕಾರಿ ನಾಪತ್ತೆಯಾಗಿದ್ದರು ಎಂದೂ ಆತ ಆರೋಪಿಸಿದ.
ಬಳಿಕ ಶವವನ್ನು ನಗರದ ಭಗವತಿ ನಗರ ಪ್ರದೇಶಕ್ಕೆ ಸಾಗಿಸಿ ಬಿಗುಭದ್ರತೆಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.