ಕೊರೋನ ಮುಕ್ತ ಭಟ್ಕಳದಲ್ಲಿ ಹೆಚ್ಚಿನ ಜಾಗೃತೆ ವಹಿಸುವಂತೆ ನಾಗರಿಕರ ಆಗ್ರಹ
ಭಟ್ಕಳ: ಭಟ್ಕಳ ತಾಲೂಕು ಕೋವಿಡ್ ಮುಕ್ತವಾಗಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಜಾಗೃತೆ ವಹಿಸಬೇಕೆಂದು ಆಗ್ರಹಿಸಿ ಭಟ್ಕಳದ ನಾಗರಿಕರು ಸಹಾಯಕ ಆಯುಕ್ತರ ಮೂಲಕ ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನೆರೆಯ ಉಡುಪಿ ಜಿಲ್ಲೆಯಲ್ಲಿ ಹೋಂ ಕ್ವಾರೆಂಟೈನ್ ನಲ್ಲಿದ್ದರು ಮನೆಗಳಿಗೆ ತೆರಳಿದ ಬಳಿಕ ಕೊರೋನ ಸೋಂಕು ವ್ಯಾಪಕವಾಗಿ ಹರಡಿಕೊಂಡಿದೆ. ಆದುದರಿಂದ ಉಡುಪಿ ಜಿಲ್ಲೆಯಿಂದ ಭಟ್ಕಳ ತಾಲೂಕಿಗೆ ಬರುವವರ ಮೇಲೆ ಕಣ್ಗಾವಲು ಇಡುವಂತೆ ಮತ್ತು ಅವರ ಕುರಿತು ಸಮರ್ಪಕ ಮಾಹಿತಿಯನ್ನು ಸಂಗ್ರಹಿಸುವಂತೆ ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ. ಹೊರ ದೇಶ ಹಾಗೂ ರಾಜ್ಯಗಳಿಂದ ಭಟ್ಕಳಕ್ಕೆ ಬರುವವರಿಗೆ 7ದಿನಗಳ ಕಾಲ ಸಾಂಸ್ಥಿಕ ಕ್ವಾರೆಂಟೈನ್ ಹಾಗೂ 14 ದಿನಗಳ ಕಾಲ ಹೋಂ ಕ್ವಾರೆಂಟೈನ್ ನಲ್ಲಿಡಬೇಕು ಮತ್ತು ಕೂಡಲೇ ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೊಳಪಡಿಸಬೇಕು. ಮಹಾರಾಷ್ಟ್ರದಿಂದ ಬಂದ ಜನರು ಗದಗ, ಹುಬ್ಬಳ್ಳಿ, ಧಾರವಾಡದಿಂದ ಬಂದಿದ್ದೇವೆ ಎಂದು ಹೇಳಿ ಭಟ್ಕಳಕ್ಕೆ ಬರುತ್ತಿದ್ದಾರೆ ಆದ್ದರಿಂದ ಭಟ್ಕಳಕ್ಕೆ ಬಂದವರ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ತಂಝೀಮ್ ಸಂಸ್ಥೆಯ ಮುಖಂಡರಾದ ಇನಾಯತುಲ್ಲಾ ಶಾಬಂದ್ರಿ, ಎಂ.ಜೆ. ಅಬ್ದುಲ್ ರಖೀಬ್, ಡಾ. ಹನೀಫ್ ಶಬಾಬ್, ಯುನೂಸ್ ರುಕ್ನುದ್ದಿನ್ ಮೌಲಾನ ಅಝೀಝುರ್ರಹ್ಮಾನ್ ರುಕ್ನುದ್ದೀನ್ ನದ್ವಿ, ಮೌಲಾನ ಇಲ್ಯಾಸ್ ನದ್ವಿ, ಶಾಂತರಾಮ, ನಾಮಧಾರಿ ಸಮಾಜದ ಮುಖಂಡ ಎಂ.ಆರ್.ನಾಯ್ಕ್, ವೆಂಕಟೇಶ ನಾಯ್ಕ ಮತ್ತಿತರು ಉಪಸ್ಥಿತರಿದ್ದರು. ಸಹಾಯಕ ಆಯುಕ್ತ ಭರತ್ ಎಸ್. ಮನವಿ ಪತ್ರವನ್ನು ಸ್ವೀಕರಿಸಿದರು.