ರಾಜ್ಯದಲ್ಲಿ ಮತ್ತಿಬ್ಬರನ್ನು ಬಲಿ ಪಡೆದ ಕೊರೋನ ವೈರಸ್: ಒಟ್ಟು ಸೋಂಕಿತರ ಸಂಖ್ಯೆ 5,452ಕ್ಕೆ ಏರಿಕೆ
ಇದುವರೆಗೆ 2,132 ಮಂದಿ ಸಂಪೂರ್ಣ ಗುಣಮುಖ

ಬೆಂಗಳೂರು, ಜೂ.7: ಕರ್ನಾಟಕದಲ್ಲಿ ಒಂದೇ ದಿನ ಮತ್ತೆ 239 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 5,452ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಸೋಂಕಿಗೆ ಇಬ್ಬರು ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 61ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ಶನಿವಾರ ಸಂಜೆ 5 ಗಂಟೆಯಿಂದ ರವಿವಾರ ಸಂಜೆ 5 ಗಂಟೆವರೆಗೆ ಎರಡು ಸಾವು ಮತ್ತು 239 ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಮಾಹಿತಿ ನೀಡಲಾಗಿದೆ.
ಬೆಂಗಳೂರು ನಗರ ಜಿಲ್ಲೆಯ 61 ವರ್ಷದ ಮಹಿಳೆಯೊಬ್ಬರು ಮಧುಮೇಹ ಮತ್ತು ತೀವ್ರ ರಕ್ತದೊತ್ತಡದಿಂದ ಮೇ.29ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜೂ.6 ರಂದು ಸಾವನ್ನಪ್ಪಿದ್ದಾರೆ. ಜಿಲ್ಲೆಯ 57 ವರ್ಷದ ವ್ಯಕ್ತಿಯೊಬ್ಬರು ಕ್ಯಾನ್ಸರ್, ಮಧುಮೇಹ ಮತ್ತು ರಕ್ತದೊತ್ತಡದಿಂದ ಮೇ.3 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜೂ.7 ರಂದು ಸಾವನ್ನಪ್ಪಿದ್ದಾರೆ.
ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಕಲಬುರಗಿ 39, ಯಾದಗಿರಿ 39, ಬೆಳಗಾವಿ 38, ಬೆಂಗಳೂರು ನಗರ 23, ದಾವಣಗೆರೆ 17, ದಕ್ಷಿಣ ಕನ್ನಡ 17, ಉಡುಪಿ 13, ಶಿವಮೊಗ್ಗ 12, ವಿಜಯಪುರ 9, ಬೀದರ್ 7, ಬಳ್ಳಾರಿ 6, ಬೆಂಗಳೂರು ಗ್ರಾಮಾಂತರ 5, ಹಾಸನ 5, ಧಾರವಾಡ 3, ಗದಗ ಮತ್ತು ಉತ್ತರ ಕನ್ನಡ ತಲಾ 2, ಮಂಡ್ಯ ಮತ್ತು ರಾಯಚೂರಿನಲ್ಲಿ ತಲಾ ಒಂದೊಂದು ಪ್ರಕರಣಗಳು ಪಾಸಿಟಿವ್ ಬಂದಿದೆ.
ಒಟ್ಟಾರೆ ರಾಜ್ಯದಲ್ಲಿ 5,452 ಕೊರೋನ ಸೋಂಕಿತರ ಪೈಕಿ 2,132 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 143 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 61 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 3,257 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.







