ಕೋಮು ವಿಚಾರಗಳ ಮೂಲಕ ಸಾಮಾಜಿಕ ಮಾಧ್ಯಮಗಳು ಜನರನ್ನು ಇಬ್ಭಾಗಿಸುತ್ತಿವೆ: ಹೈಕೋರ್ಟ್

ಬೆಂಗಳೂರು, ಜೂ.7: ಸಾಮಾಜಿಕ ಮಾಧ್ಯಮಗಳು ಜನರಲ್ಲಿ ಗೊಂದಲ, ಸಮಸ್ಯೆಯನ್ನು ಸೃಷ್ಟಿ ಮಾಡುವುದಲ್ಲದೆ, ಕೋಮು ವಿಚಾರಗಳ ಮೂಲಕ ಜನರನ್ನು ಇಬ್ಭಾಗಿಸುತ್ತಿವೆ ಎಂದು ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ರಿಹಾನ್ (19) ಮತ್ತು ಶಹಬಾಝ್(20) ಅವರ ಮೇಲಿನ ಆರೋಪಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಯುವಕರಿಗೆ ಜಾಮೀನು ನೀಡಿತು. ಈ ವೇಳೆ ನ್ಯಾಯಮೂರ್ತಿ ಆರ್.ದೇವದಾಸ್ ಸಾಮಾಜಿಕ ಮಾಧ್ಯಮಗಳ ಬಗ್ಗೆ ಈ ಕಳವಳ ವ್ಯಕ್ತಪಡಿಸಿದ್ದಾರೆ.
ಏನಿದು ಘಟನೆ: ಇತ್ತೀಚಿಗೆ ಚರಂಡಿಯಿಂದ ಕಲ್ಲಂಗಡಿ ಹಣ್ಣು ಹೆಕ್ಕುವುದರ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ನಂತರ ರಿಹಾನ್ ಮತ್ತು ಶಹಬಾಝ್ ವಿರುದ್ಧ ಕಳೆದ ಎ.17ರಂದು ಕೇಸು ದಾಖಲಿಸಿ, ಬಸವೇಶ್ವರ ಚೌಕ ಪೊಲೀಸರು ಬಂಧಿಸಿದ್ದರು. ಕಲ್ಲಂಗಡಿಯನ್ನು ಉದ್ದೇಶಪೂರ್ವಕವಾಗಿ ಚರಂಡಿಗೆ ಎಸೆದು ನಂತರ ಅಲ್ಲಿಂದ ತೆಗೆದು ಅದನ್ನು ಮಾರಾಟ ಮಾಡಿ ಜನರಿಗೆ ಕಾಯಿಲೆ ತರುವ ದುರುದ್ದೇಶವಾಗಿದೆ ಎಂದು ಅರ್ಜಿದಾರರು ದೂರಿನಲ್ಲಿ ನಮೂದಿಸಿ ನಂತರ ಕೇಸು ದಾಖಲಿಸಿದ್ದರು.
ವಿಚಾರಣೆ ಸಂದರ್ಭದಲ್ಲಿ ಆರೋಪಗಳ ಸತ್ಯಾಸತ್ಯತೆಯನ್ನು ನಿರ್ಧರಿಸಬೇಕು ಎಂದು ಹೇಳಿದ ನ್ಯಾಯಾಧೀಶರು ಯುವಕರಿಗೆ ಷರತ್ತು ಬದ್ಧ ಜಾಮೀನು ನೀಡಿದರು.
ಐಪಿಸಿ ಸೆಕ್ಷನ್ 328 ಸಾಕಾಗುವುದಿಲ್ಲ, ಇದು ಜಾಮೀನು ರಹಿತ ಬಂಧನ ಶಿಕ್ಷೆಯಾಗಿದ್ದು, 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬೇಕೆಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.





