ಸೋನು ಸೂದ್ ಗೆ ನಿರ್ದೇಶನ ನೀಡುತ್ತಿರುವುದು ಬಿಜೆಪಿ: ಶಿವಸೇನೆ ಆರೋಪ
ಮುಂಬೈ: ಮಹಾರಾಷ್ಟ್ರದಲ್ಲಿ ಬಾಕಿಯಾಗಿರುವ ಉತ್ತರ ಭಾರತದ ವಲಸೆ ಕಾರ್ಮಿಕರಿಗೆ ನೆರವಾಗುವಂತೆ ಮಾಡುವ ಮೂಲಕ ಬಿಜೆಪಿಯು ಸೋನು ಸೂದ್ ರನ್ನು ರಾಜಕೀಯವಾಗಿ ಬಳಸುತ್ತಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಆರೋಪಿಸಿದ್ದಾರೆ. ಈ ಮೂಲಕ ಉದ್ಧವ್ ಠಾಕ್ರೆ ಸರಕಾರ ಕೆಲಸ ಮಾಡುತ್ತಿಲ್ಲ ಎನ್ನುವಂತಹ ಭಾವನೆ ವ್ಯಕ್ತವಾಗುವಂತೆ ಬಿಜೆಪಿ ಮಾಡುತ್ತಿದೆ ಎಂದವರು ಹೇಳಿದ್ದಾರೆ.
“ಯಾರೋ ಬರೆದುಕೊಟ್ಟ ಡೈಲಾಗ್ ಹೇಳಿ ಅದರಿಂದ ಜೀವನ ನಡೆಸುವುದಾಗಿದೆ ಸೂನ್ ಸೂದ್ ಕೆಲಸ. ಒಳ್ಳೆಯ ಹಣ ನೀಡಿದರೆ ರಾಜಕೀಯ ಪಕ್ಷವೊಂದರ ಪರ ಪ್ರಚಾರ ಮಾಡಲು ಸೋನು ಸೂದ್ ರಂತೆ ಹಲವರಿದ್ದಾರೆ. 2019ರ ಲೋಕಸಭಾ ಚುನಾವಣೆಗೆ ಮೊದಲು ಬಿಜೆಪಿ ಸರಕಾರದ ಪರ ಪ್ರಚಾರ ಮಾಡಲು ಸೋನು ಸೂದ್ ಒಪ್ಪಿಕೊಂಡಿದ್ದು ಕುಟುಕು ಕಾರ್ಯಾಚರಣೆಯಲ್ಲಿ ಬಯಲಾಗಿತ್ತು” ಎಂದು ಸಾಮ್ನಾದಲ್ಲಿ ಬರೆದ ಲೇಖನದಲ್ಲಿ ರಾವತ್ ಹೇಳಿದ್ದಾರೆ.
ಇದ್ದಕ್ಕಿದ್ದಂತೆ ಕಾರ್ಮಿಕರ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಅವರನ್ನು ಮನೆಗೆ ಕಳುಹಿಸುತ್ತಿರುವ ಸೋನು ಸೂದ್ ರನ್ನು ಯಾವುದೇ ಬುದ್ಧಿವಂತ ವ್ಯಕ್ತಿ ನಂಬಲಾರ ಎಂದವರು ಹೇಳಿದ್ದಾರೆ.