ಜೂ. 9ರಿಂದ ಸೆಂಟ್ರಲ್ ಮಾರುಕಟ್ಟೆಯಲ್ಲೇ ವ್ಯಾಪಾರ : ಮಾರುಕಟ್ಟೆ ವ್ಯಾಪಾರಸ್ಥ ಸಂಘ ನಿರ್ಧಾರ

ಮಂಗಳೂರು, ಜೂ. 8: ಕೊರೋನ ಹಿನ್ನೆಲೆಯಿಂದಾಗಿ ಲಾಕ್ಡೌನ್ ಹೇರಿಕೆ ಸಡಿಲಗೊಂಡು ಎಲ್ಲಾ ಕಡೆ ವ್ಯಾಪಾರ ವಹಿವಾಟುಗಳು ಆರಂಭವಾಗಿರುವುದರಿಂದ ಸೆಂಟ್ರಲ್ ಮಾರುಕಟ್ಟೆಯಲ್ಲಿ ನಾಳೆಯಿಂದ (ಜೂ. 9) ವ್ಯಾಪಾರ ನಡೆಸಲು ನಿರ್ಧರಿಸುವುದಾಗಿ ಮಾರುಕಟ್ಟೆ ವ್ಯಾಪಾರಸ್ಥರ ಸಂಘ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಸಂಘದ ಅಧ್ಯಕ್ಷ ಮುಸ್ತಫಾ, ಕೊರೋನ ಸಂದರ್ಭ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ 14 ದಿನಗಳ ಅವಧಿಗೆ ತರಕಾರಿ ಹಾಗೂ ಹಣ್ಣು ಸಗಟು ವ್ಯಾಪಾರವನ್ನು ಎಪಿಎಂಸಿ ಬೈಕಂಪಾಡಿ ಯಾರ್ಡ್ಗೆ ಸ್ಥಳಾಂತರಿಸಲು ಜಿಲ್ಲಾಡಳಿತ ಮನವಿ ಮಾಡಿದ ಕಾರಣ ಕೆಲ ವ್ಯಾಪಾರಿಗಳು ತಾತ್ಕಾಲಿಕವಾಗಿ ವ್ಯಾಪಾರ ಸ್ಥಳಾಂತರಿಸಿದ್ದರು ಎಂದರು.
ಕೊರೋನ ನಿಯಂತ್ರಣ ನಿಯಮದ ಪ್ರಕಾರ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಸೆಂಟ್ರಲ್ ಮಾರುಕಟ್ಟೆಯಲ್ಲಿ ತೊಂದರೆ ಆದ ಸಂದರ್ಭ ವ್ಯಾಪಾರಸ್ಥರು ವ್ಯಾಪಾರವನ್ನೇ ಬಂದ್ ಮಾಡಲು ನಿರ್ಧರಿಸಿದ್ದರು. ಆದರೆ ಜನರಿಗೆ ಹಣ್ಣು ತರಕಾರಿ ಪೂರೈಕೆ ಅಗತ್ಯವಾಗಿರುವುದರಿಂದ ಬಂದ್ ಮಾಡದಂತೆ, ತಾತ್ಕಾಲಿಕವಾಗಿ ಸಗಟು ವ್ಯಾಪಾರ ಸ್ಥಳಾಂತರಿಸುವಂತೆ, ಚಿಲ್ಲರೆ ವ್ಯಾಪಾರಸ್ಥರಿಗೆ ನಗರದಲ್ಲೇ ಪರ್ಯಾಯ ವ್ಯವಸ್ಥೆ ಮಾಡುವ ಭರವಸೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಮನವಿಗೆ ವ್ಯಾಪಾರಸ್ಥರು ಸ್ಪಂದಿಸಿದ್ದರು. ಆದರೆ ಕಳೆದ ಮೂರು ತಿಂಗಳಿನಿಂದ ಚಿಲ್ಲರೆ ವ್ಯಾಪಾರಸ್ಥರು ವ್ಯಾಪಾರ ಮಾಡಲಾಗದೆ ಮನೆಯಲ್ಲಿಯೇ ಉಳಿದಿದ್ದಾರೆ. ವ್ಯಾಪಾರವನ್ನೇ ನಂಬಿಕೊಂಡು ಸಂಸಾರ ಸಾಗಿಸಬೇಕಾದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 8 ಸಾವಿರಕ್ಕೂ ಅಧಿಕ ಕುಟುಂಬಗಳು ಅತಂತ್ರವಾಗಿವೆ. ಬ್ಯಾಂಕ್ ಸಾಲ, ಖಾಸಗಿ ಸಾಲ ಬಡ್ಡಿ ಕಟ್ಟಲು ಸಾಧ್ಯವಾಗದೆ ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ. ಸದ್ಯ ಎಲ್ಲವೂ ಸಹಜತೆಯತ್ತ ಮರಳುತ್ತಿದೆ. ಹಾಗಾಗಿ ನಾಳೆಯಿಂದ ಸೆಂಟ್ರಲ್ ಮಾರುಕಟ್ಟೆಯ ಹೊರಗಿನ ಎಲ್ಲಾ ಸಗಟು ವ್ಯಾಪಾರಸ್ಥರು ತಮ್ಮ ವ್ಯವಹಾರವನ್ನು ಆರಂಭಿಸಲಿದ್ದಾರೆ. ಯಾರು ಕೂಡಾ ರಸ್ತೆ ಬದಿಗಳಲ್ಲಿ ವ್ಯಾಪಾರ ನಡೆಸದಂತೆ ಈಗಾಗಲೇ ಸಂಘ ನಿರ್ಣಯ ಕೈಗೊಂಡಿದೆ ಎಂದು ಅವರು ಹೇಳಿದರು.
ಎಪ್ರಿಲ್ 7ರಂದು ಮಹಾನಗರ ಪಾಲಿಕೆ ಹೊರಡಿಸಿರುವ ಆದೇಶ ಪ್ರಕಾರ ಮಾರುಕಟ್ಟೆಯನ್ನು ಕೆಡವಿ ಹೊಸ ಮಾರುಕಟ್ಟೆ ನಿರ್ಮಿಸುವುದಾಗಿ ತಿಳಿಸಿತ್ತು. ಆದರೆ ಸೆಂಟ್ರಲ್ ಮಾರುಕಟ್ಟೆ ಯ ವ್ಯಾಪಾರಿಗಳು ಮಹಾನಗರ ಪಾಲಿಕೆಯ ಅನುಮತಿ ಮೇರೆಗೆ ಲಕ್ಷಾಂತರ ರೂ. ವ್ಯಯಿಸಿ ತಮ್ಮ ಕಟ್ಟಡ ನಿರ್ವಹಣೆಯನ್ನು ಮಾಡಿದ್ದಾರೆ. ಈ ಎರಡೂ ಕಟ್ಟಡಗಳು ಬಲಿಷ್ಠವಾಗಿವೆ. ಈ ಆದೇಶವನ್ನು ಪ್ರಶ್ನಿಸಿ ವ್ಯಾಪಾರಸ್ಥರು ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಮಾತ್ರವಲ್ಲದೆ, ದಾವೆ ನಡೆಸುತ್ತಿರುವ ಮಹಾನಗರ ಪಾಲಿಕೆಯಿಂದ ನಿಯುಕ್ತಿಗೊಂಡ ವಕೀಲರು ಕೂಡಾ ವ್ಯಾಪಾರಕ್ಕೆ ಯಾವುದೇ ಅಡ್ಡಿ ಪಡಿಸಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಲು ಯಾವುದೇ ತೊಂದರೆ ಇಲ್ಲ. ಈಗಾಗಲೇ ಜಿಲ್ಲಾಡಳಿತ, ಮನಪಾ, ಹಾಗೂ ಪೊಲೀಸ್ ಆಯುಕ್ತರಿಗೆ ಮನವಿ ಮಾಡಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಮುಸ್ತಫಾ ಪ್ರತಿಕ್ರಿಯಿಸಿದರು.
ಸೆಂಟ್ರಲ್ ಮಾರುಕಟ್ಟೆಯಲ್ಲಿ ಪರವಾನಿಗೆ ಹೊಂದಿದ 151 ಸಗಟು ವ್ಯಾಪಾರಸ್ಥರು, 300ಕ್ಕೂ ಅಧಿಕ ಚಿಲ್ಲರೆ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿದ್ದರು. ಎಲ್ಲರೂ ಪಾಲಿಕೆಗೆ ಬಾಡಿಗೆ ಪಾವತಿಸಿ ವ್ಯಾಪಾರ ಮಾಡುತ್ತಿದ್ದರು. ಬಾಡಿಗೆ ಪಡೆದಿರುವ ಬಗ್ಗೆ ನಮ್ಮಲ್ಲಿ ಪುರಾವೆ ಇದೆ. ಅನಧಿಕೃತವಾಗಿದ್ದಲ್ಲಿ ಬಾಡಿಗೆ ಹೇಗೆ ಪಡೆಯಲಾಗುತ್ತಿತ್ತು. ಪರವಾನಿಗೆ ಹೇಗೆ ನೀಡಲಾಗಿದೆ ಎಂದು ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಜನಾರ್ದನ ಸಾಲಿಯಾನ್ ಪ್ರಶ್ನಿಸಿದರು.
ಗೋಷ್ಠಿಯಲ್ಲಿ ಮರ್ಚೆಂಟ್ಸ್ ಅಸೋಸಿಯೇಶನ್ನ ಕಾರ್ಯದರ್ಶಿ ಗಣೇಶ್, ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಎ.ಜೆ. ಶೇಖರ್ ಉಪಸ್ಥಿತರಿದ್ದರು.
ಸೆಂಟ್ರಲ್ ಮಾರುಕಟ್ಟೆ ಬಗ್ಗೆ ತೀರ್ಮಾನಕ್ಕೆ ಮನಪಾಕ್ಕೆ ಅಧಿಕಾರವಿಲ್ಲ
ಸೆಂಟ್ರಲ್ ಮಾರುಕಟ್ಟೆ ಎಪಿಎಂಸಿಯ ಉಪವಿಭಾಗವಾಗಿ 2008ರ ಜುಲೈ 19ರಂದು ಕರ್ನಾಟಕ ಸರಕಾರದ ಕೃಷಿ ಮಾರಾಟ ಇಲಾಖೆ ಯಿಂದ ಘೋಷಿಸಲ್ಪಟ್ಟಿದೆ. ಹಾಗಾಗಿ ಅದನ್ನು ಬಂದ್ ಮಾಡುವ ಅಥವಾ ಹಳೆ ಕಟ್ಟಡವನ್ನು ಕೆಡವಿ ನಿರ್ಮಾಣ ಮಾಡುವ ಯಾವುದೇ ಅಧಿಕಾರ ಮಂಗಳೂರು ಮಹಾನಗರ ಪಾಲಿಕೆಗೆ ಇಲ್ಲ ಎಂದು ನ್ಯಾಯವಾದಿ, ವ್ಯಾಪಾರಸ್ಥರ ಸಂಘದ ಕಾನೂನು ಸಲಹೆಗಾರ ಮನಮೋಹನ್ ಜೋಯ್ಸ ಹೇಳಿದರು.







