ಮುಂಬೈಗರಿಗೆ ಹೋಮ್ ಕ್ವಾರಂಟೇನ್ ವಿಧಿಸಿ ಸೀಲ್ಡೌನ್; ಸಿಎಂ ಜೊತೆ ಚರ್ಚಿಸಿ ನಿರ್ದೇಶನ: ಸಚಿವ ಬೊಮ್ಮಾಯಿ

ಉಡುಪಿ, ಜೂ.8: ಇನ್ನು ಮುಂದೆ ಮುಂಬೈಯಿಂದ ಬಂದವರನ್ನು ಸಾಂಸ್ಥಿಕ ಬದಲು ಹೋಮ್ ಕ್ವಾರಂಟೇನ್ನಲ್ಲಿ ಇರಿಸಿ ಆ ಮನೆಯನ್ನು ಸಂಪೂರ್ಣ ಸೀಲ್ಡೌನ್ ಮಾಡುವ ಕುರಿತು ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಲಾಗು ವುದು. ನಂತರ ಈ ಬಗ್ಗೆ ಸ್ಪಷ್ಟವಾದ ನಿರ್ದೇಶನವನ್ನು ಉಡುಪಿ ಜಿಲ್ಲಾಡಳಿತಕ್ಕೆ ನೀಡಲಾಗುವುದು ಎಂದು ರಾಜ್ಯ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಉಡುಪಿ ಜಿಪಂ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಪ್ರಗತಿ ಪರಿ ಶೀಲನಾ ಸಭೆಯ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ಮುಂಬೈಯಿಂದ ಬಂದ ಹೆಚ್ಚಿನವರಿಗೆ ಕ್ವಾರಂಟೇನ್ ಕೇಂದ್ರಗಳಿಂದ ಪಾಸಿಟಿವ್ ಬಂದಿದೆ ಎಂಬ ಆರೋಪ ಹಾಗೂ ಈ ಕೇಂದ್ರಗಳ ನಿರ್ವಹಣೆ ಕಷ್ಟ ಸಾಧ್ಯವಾಗಿರುವುುದರಿಂದ ಶಾಸಕರ ಒತ್ತಾಯದ ಮೇರೆ ಈ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ವಿಶೇಷ ಮಾರ್ಗಸೂಚಿ ರಚನೆ
ಕ್ವಾರಂಟೇನ್ ಕೇಂದ್ರಗಳಿಂದ ತೆರಳಿರುವ ಬಹಳ ದೊಡ್ಡ ಸಂಖ್ಯೆಯ ಮಂದಿ ಈಗ ಹೋಮ್ ಕ್ವಾರಂಟೇನ್ನಲ್ಲಿ ಇದ್ದಾರೆ. ಆದುದರಿಂದ ಹೋಮ್ ಕ್ವಾರಂಟೇನ್ಗೆ ಹೆಚ್ಚು ಗಮನ ಕೊಡಲಾಗುತ್ತಿದೆ. ಗ್ರಾಮೀಣ ಹೋಮ್ ಕ್ವಾರಂಟೇನ್ಗೆ ವಿಶೇಷವಾದ ಮಾರ್ಗಸೂಚಿ ರಚಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಲಾಗಿದೆ ಎಂದು ಸಚಿವರು ತಿಳಿಸಿದರು.
ಹೋಮ್ ಕ್ವಾರಂಟೇನ್ನಲ್ಲಿರುವರ ಬಗ್ಗೆ ನಿಗಾ ವಹಿಸಲು ಪಿಡಿಓ, ವಿಎ, ಗ್ರಾಪಂ ಅಧ್ಯಕ್ಷರು, ಪೊಲೀಸ್ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರನ್ನೊಳ ಗೊಂಡ ಗ್ರಾಮಮಟ್ಟದ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಈ ಟಾಸ್ಕ್ ಪೋರ್ಸ್ ಸರಿಯಾಗಿ ಕೆಲವು ಮಾಡುವುದನ್ನು ಪರಿಶೀಲಿಸಲು ಡಿಸಿ, ಜಿಪಂ ಸಿಇಓ, ಎಸಿ, ತಹಶೀಲ್ದಾರರು ದಿಢೀರ್ ಭೇಟಿ ನೀಡಬೇಕೆಂದು ಸೂಚನೆ ನೀಡಲಾಗಿದೆ ಎಂದರು.
ಮುಂಬೈಯಿಂದ ಸೇವಾ ಸಿಂಧುನಲ್ಲಿ ನೋಂದಣಿ ಮಾಡಿದವರು ಮತ್ತು ರೈಲಿನ ಮೂಲಕ ಇನ್ನು ಕೂಡ ಬರಲು ಇದ್ದಾರೆ. ಮಹಾರಾಷ್ಟ್ರದಿಂದ ಬಂದ ಶೇ.10-20ರಷ್ಟು ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಉಡುಪಿ, ಬಿಜಾಪುರ, ಬೆಳಗಾಂ, ಗುಲ್ಬರ್ಗ, ರಾಯಚೂರು ಜಿಲ್ಲೆಗೆ ಮಹಾರಾಷ್ಟ್ರದಿಂದ ಬಂದ ಬಹುತೇಕರಲ್ಲಿ ಸೋಂಕು ಕಂಡುಬಂದಿದೆ ಎಂದು ಅವರು ಹೇಳಿದರು.
ಸದ್ಯವೇ ಎಲ್ಲರು ಗುಣಮುಖ
ಜಿಲ್ಲೆಯ ಒಟ್ಟು 946 ಸೋಂಕಿತರ ಪೈಕಿ 933(ಶೇ.98.7) ಮಂದಿ ಹೊರಗಿನಿಂದ ಬಂದವರು. ಸ್ಥಳೀಯವಾಗಿ ಕೇವಲ 13(ಶೇ.1.3) ಪ್ರಕರಣಗಳು ಕಂಡುಬಂದಿವೆ. ಒಟ್ಟು ಪ್ರಕರಣಗಳಲ್ಲಿ ಮುಂಬೈಯಿಂದ 908 (ಶೇ.97), ಇತರ ರಾಜ್ಯಗಳಿಂದ 8 ಮತ್ತು ವಿದೇಶದಿಂದ 17 ಮಂದಿ ಬಂದಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕೊರೋನದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಯಾಗುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಮುಂದಿನ 10-12 ದಿನಗಳೊಳಗೆ ಜಿಲ್ಲೆಯ ಎಲ್ಲ ಸೋಂಕಿತರು ಬಿಡುಗಡೆಯಾಗುವ ಸಾಧ್ಯತೆಗಳಿವೆ. ಕ್ವಾರಂಟೇನ್ ನಲ್ಲಿರುವವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗೆ ಒಳಪಡಿಸಿದ ಕೀರ್ತಿ ಉಡುಪಿಗೆ ಸಲ್ಲುತ್ತದೆ. ನಮ್ಮಲ್ಲಿ ಒಟ್ಟು 17(ಶೇ.2) ಮಂದಿ ಸೋಂಕಿತರಲ್ಲಿ ರೋಗದ ಗುಣ ಲಕ್ಷಣಗಳಿದ್ದರೆ, 929(ಶೇ.98) ಮಂದಿಗೆ ಯಾವುದೇ ಲಕ್ಷ್ಮಣಗಳಿಲ್ಲ. ಒಟ್ಟಾರೆ ಜಿಲ್ಲೆಯನ್ನು ಕೋವಿಡ್ ಮುಕ್ತ ಜಿಲ್ಲೆಯನ್ನಾಗಿ ಮಾಡುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ರಘುಪತಿ ಭಟ್, ಸುನೀಲ್ ಕುಮಾರ್, ಲಾಲಾಜಿ ಆರ್.ಮೆಂಡನ್, ಸುಕುಮಾರ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ದಿನಕರ ಬಾಬು, ಜಿಲ್ಲಾಧಿಕಾರಿ ಜಿ.ಜಗದೀಶ್, ಸಿಇಓ ಪ್ರೀತಿ ಗೆಹ್ಲೋಟ್ ಉಪಸ್ಥಿತರಿದ್ದರು.
10-12 ದಿನಗಳಲ್ಲಿ ಲ್ಯಾಬ್ ಉದ್ಘಾಟನೆ
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಪ್ರಯೋಗಾಲಯ ಸ್ಥಾಪಿಸಲು ಎಲ್ಲ ರೀತಿಯ ತಯಾರಿ ನಡೆದಿದ್ದು, ಈಗಾಗಲೇ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ. ಮುಂದಿನ 10-12 ದಿನಗಳಲ್ಲಿ ಅಗತ್ಯ ಯಂತ್ರೋಪಕರಣಗಳು ಬರಲಿದ್ದು, ಅವುಗಳನ್ನು ಕೂಡಲೇ ಉದ್ಘಾಟನೆ ಮಾಡಲಾಗುವುದು ಎಂದು ಸಚಿವ ಬೊಮ್ಮಾಯಿ ತಿಳಿಸಿದರು.
ಕಾರ್ಕಳ ಮತ್ತು ಕುಂದಾಪುರ ಸರಕಾರಿ ಆಸ್ಪತ್ರೆಗಳಿಗೆ ಹೆಚ್ಚಿನ ವೈದ್ಯರು ಮತ್ತು ಸಿಬ್ಬಂದಿಗಳ ನೇಮಕಾತಿಗೆ ಅನುಮತಿ ನೀಡಲು ಸದ್ಯದಲ್ಲೇ ಆರೋಗ್ಯ ಅಧಿಕಾರಿ ಗಳ ಜೊತೆ ಮಾತುಕತೆ ನಡೆಸಿ, ಸರಕಾರದಿಂದ ಆದೇಶ ಹೊರಡಿಸಲಾಗುವುದು. ಆಶಾ ಕಾರ್ಯಕರ್ತರು, ಹೋಮ್ ಗಾರ್ಡ್ಗಳನ್ನು ಆರು ತಿಂಗಳ ಅವಧಿಗೆ ಹೊರಗುತ್ತಿಗೆ ಮೂಲಕ ನೇಮಿಸಲು ಕ್ರಮ ತೆಗೆದು ಕೊಳ್ಳಲಾಗುವುದು ಎಂದರು.
ಅಕ್ರಮ ಮರಳು ದಂಧೆ ವಿರುದ್ಧ ಕ್ರಮ
ಉಡುಪಿ ಜಿಲ್ಲಾಡಳಿತ ಅಕ್ರಮ ಹಾಗೂ ಕಾನೂನು ಬಾಹಿರವಾಗಿ ಮರಳು ದಂಧೆ ಮಾಡಲು ಅವಕಾಶ ನೀಡುವುದಿಲ್ಲ. ಅಂತಹ ದಂಧೆ ಯಾರೇ ಮಾಡಿ ದರೂ ಅವರ ವಿರುದ್ಧ ಕ್ರಮ ಜರಗಿಸಲಾಗುವುದು. ಸ್ವರ್ಣ ನದಿಯಲ್ಲಿನ ಅಕ್ರಮ ಮರಳು ಸಾಗಾಟ ಪ್ರಕರಣವನ್ನು ಲೋಕಾಯುಕ್ತ ಆದಷ್ಟು ಬೇಗ ತನಿಖೆ ನಡೆಸಬೇಕೆಂದು ಒತ್ತಾಯಿಸಲಾಗುವುೆಂದು ಸಚಿವ ಬೊಮ್ಮಾಯಿ ತಿಳಿಸಿದರು.
ರಾಜ್ಯದಲ್ಲಿ ಸುಮಾರು 65ಕ್ಕಿಂತ ಹೆಚ್ಚು ಮಂದಿ ಪೊಲೀಸರಿಗೆ ಪಾಸಿಟಿವ್ ಬಂದಿದೆ. ಅದರಲ್ಲಿ 30ಕ್ಕಿಂತ ಹೆಚ್ಚು ಮಂದಿ ಬಿಡುಗಡೆ ಯಾಗಿದ್ದಾರೆ. ಅದೇ ರೀತಿ ಉಡುಪಿ ಜಿಲ್ಲೆಯ ಸೋಂಕಿತ ಎಲ್ಲ ಪೊಲೀಸರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದರು.







